ಮಕ್ಕಳಲ್ಲಿ ನಯ-ನುಡಿ, ದೇಶಭಕ್ತಿ ಬೆಳೆಸಲು ಧಾರ್ಮಿಕ ಪ್ರಜ್ಞೆ ಅತ್ಯಗತ್ಯ : ಕೃಷ್ಣಾ ಹಡಪದ
Religious consciousness is essential to cultivate polite speech and patriotism in children: Krishna
ಗದಗ 02: ಜಾಗತೀಕರಣ ಮತ್ತು ಅತಿಯಾದ ತಾಂತ್ರಿಕತೆಯ ಇಂದಿನ ಸನ್ನಿವೇಶದಲ್ಲಿ ಯುವ ಪೀಳಿಗೆಯು ತನ್ನ ಮೂಲ ಬೇರುಗಳಿಂದ ದೂರವಾಗುತ್ತಿರುವ ಆತಂಕ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಸನಾತನ ಧರ್ಮದ ಉದಾತ್ತ ಮೌಲ್ಯಗಳು, ಸಾಮಾಜಿಕ ಹಾಗೂ ನೈತಿಕ ಸಂಸ್ಕಾರವನ್ನು ಬಿತ್ತುವ ಧಾರ್ಮಿಕ ಕಾರ್ಯಕ್ರಮಗಳು ಕೇವಲ ಸಾಂಪ್ರದಾಯಿಕ ಆಚರಣೆಗಳಾಗಿರದೆ, ಅವು ಇಂದಿನ ಸಮಾಜದ ತುರ್ತು ಅಗತ್ಯಗಳಾಗಿವೆ ಎಂದು ಗದಗಿನ ಸಾಮಾಜಿಕ ಕಾರ್ಯಕರ್ತರಾದ ಕೃಷ್ಣಾ ಎಚ್. ಹಡಪದ ಅವರು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಗದಗ ನಗರದ ಇತಿಹಾಸ ಪ್ರಸಿದ್ಧ ಹಾಗೂ ಕವಿ ಹರಿಹರ, ಕುಮಾರವ್ಯಾಸರ ಕರ್ಮಭೂಮಿಯಾದ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಮಕ್ಕಳ ಪೌರಾಣಿಕ ವೇಷಭೂಷಣ ಸ್ಪರ್ಧೆಯ ಯಶಸ್ಸನ್ನು ಶ್ಲಾಘಿಸಿ ಮಾತನಾಡಿರುವ ಅವರು, ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳು ಧರಿಸಿದ್ದ ವೈವಿಧ್ಯಮಯ ವೇಷಭೂಷಣಗಳು ಪ್ರೇಕ್ಷಕರಲ್ಲಿ ಭಕ್ತಿಯ ಪರಾಕಾಷ್ಠೆಯನ್ನು ಉಂಟುಮಾಡಿದವು.
ಶಬರಿಯ ಸತ್ವಯುತ ಪಾತ್ರದಲ್ಲಿ ಶಕ್ತಿ ಸೋಳಂಕಿ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರದಲ್ಲಿ ಆದ್ಯ ಚಿತುರಿ ಅವರು ತೋರಿದ ನಯನಮನೋಹರ ಅಭಿನಯವು ಕೇವಲ ಪೌರಾಣಿಕ ಮರುಸೃಷ್ಟಿಯಾಗಿರಲಿಲ್ಲ; ಬದಲಿಗೆ ನಮ್ಮ ಇತಿಹಾಸದ ಶ್ರೇಷ್ಠ ಆದರ್ಶಗಳನ್ನು ಇಂದಿನ ಪೀಳಿಗೆಗೆ ದಾಟಿಸುವ ಸತ್ಪ್ರಯತ್ನವಾಗಿತ್ತು. ಇಂತಹ ಪಾತ್ರಗಳು ಮಕ್ಕಳ ಸುಪ್ತ ಮನಸ್ಸಿನಲ್ಲಿ ಧರ್ಮದ ರಕ್ಷಣೆ, ಪಾಲನೆ ಹಾಗೂ ಸಮಾಜ ಮತ್ತು ದೇಶದ ಮೇಲಿನ ಪ್ರೀತಿಯನ್ನು ಮೂಡಿಸಲು ಸಹಕಾರಿಯಾಗುತ್ತವೆ ಎಂದರು. ಇಂದಿನ ಶಿಕ್ಷಣ ಪದ್ಧತಿಯು ಅಂಕ ಗಳಿಕೆಗೆ ಸೀಮಿತವಾಗುತ್ತಿದ್ದು, ಮೌಲ್ಯಾಧಾರಿತ ಜೀವನ ಶೈಲಿಯ ಕೊರತೆ ಎದ್ದು ಕಾಣುತ್ತಿದೆ. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲೇ ’ನಯ-ನುಡಿ’ (ಸೌಮ್ಯ ಮಾತುಗಾರಿಕೆ), ರಾಷ್ಟ್ರದ ಮೇಲಿನ ’ದೇಶಭಕ್ತಿ’ ಹಾಗೂ ಶಿಸ್ತಿನ ಜೀವನದ ಆಚಾರ-ವಿಚಾರಗಳನ್ನು ಬೆಳೆಸದಿದ್ದರೆ ಸ್ವಸ್ಥ ಸಮಾಜ ಮತ್ತು ಬಲಿಷ್ಠ ದೇಶದ ನಿರ್ಮಾಣ ಅಸಾಧ್ಯ. ಧರ್ಮ ಎಂದರೆ ಕೇವಲ ಪೂಜಾ ವಿಧಿವಿಧಾನಗಳಲ್ಲ, ಅದು ದೇಶಪ್ರೇಮದೊಂದಿಗೆ ಬದುಕುವ ದಾರಿ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಂಸ್ಕೃತಿಕ, ನೈತಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಯನ್ನು ಬಡಿದೆಬ್ಬಿಸುವ ಇಂತಹ ಜಾಗೃತಿ ಕಾರ್ಯಕ್ರಮಗಳು ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗದೆ, ಗ್ರಾಮೀಣ ಮಟ್ಟದಲ್ಲೂ ವ್ಯಾಪಕವಾಗಿ ಆಯೋಜನೆಗೊಳ್ಳಬೇಕು" ಎಂದು ಕೃಷ್ಣಾ ಎಚ್. ಹಡಪದ ಅವರು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 