ರಾವುತರಾಯ-ಮಲ್ಲಯ್ಯರ ಜಾತ್ರೆ ವಿಜೃಂಭಣೆಯಿಂದ ಆರಂಭ

ರಾವುತರಾಯ-ಮಲ್ಲಯ್ಯರ ಜಾತ್ರೆ ವಿಜೃಂಭಣೆಯಿಂದ ಆರಂಭ Ravutharaya-Mallaiya's fair begins with grandeur

ದೇವರಹಿಪ್ಪರಗಿ 04:  ಐತಿಹಾಸಿಕ ಹಿನ್ನೆಲೆಯ ರಾವುತರಾಯ- ಮಲ್ಲಯ್ಯರ ಜಾತ್ರಾ ಮಹೋತ್ಸವ ಪಟ್ಟಣದಲ್ಲಿ ಶನಿವಾರ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಭಕ್ತಿ ಭಾವದೊಂದಿಗೆ ಆರಂಭವಾಯಿತು.  

ರಾವುತರಾಯ ಅಶ್ವಾರೂಢನಾಗಿ ತೆರೆದ ಬಂಡಿಯಲ್ಲಿ ನಸುಕಿನ 5 ಗಂಟೆಗೆ ಮೂಲ ದೇವಸ್ಥಾನದಿಂದ ಹೊರಟು ಬೆಳಗಿನ 8 ಗಂಟೆಗೆ ಮಾನೆದೊಡ್ಡಿ ಎಂದೇ ಕರೆಯಲಾಗುವ ಸ್ಥಳದಲ್ಲಿ ನೂರಾರು ಭಕ್ತರು ಕಾಲ್ನಡಿಯಿಂದ ಹೊತ್ತು ತಂದ ವಿವಿಧ ಬಗೆಯ ಹೂವು, ಹಾರಗಳಿಂದ ಪುಷ್ಪಾಲಂಕಾರಗೊಂಡನು. ಇದನ್ನು ಹೂ ಮುಡಿಯುವುದು ಎಂದೇ ಕರೆಯಲಾಗುತ್ತದೆ. ನಂತರ ಶೀಡಗಟ್ಟಿ ಎಂಬ ಸ್ಥಳದಲ್ಲಿ ಕಾರಣಿಕರು ಮುಂಬರುವ ಭವಿಷ್ಯದ ಕುರಿತಾಗಿ ಹೇಳಿಕೆ ನುಡಿದರು.  

ನಂತರ ರಾವುತರಾಯನ ಬಂಡಿ ಮೆರವಣಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬನ್ನಿ ಮಹಾಕಾಳಿ ವೃಕ್ಷಕ್ಕೆ ತೆರಳಿ ಬನ್ನಿ ಮುಡಿದು ಮಲ್ಲಯ್ಯನ ದೇವಸ್ಥಾನ ತಲುಪಿತು. ನಂತರ ರಾವುತರಾಯ-ಗಂಗಿಮಾಳಮ್ಮರ ಸಾಂಪ್ರದಾಯಿಕ ಮದುವೆಯ ರೂಪಕ ಜರುಗಿತು.  

ಸತತ ಐದು ದಿನ ಜರುಗುವ ಜಾತ್ರಾ ಮಹೋತ್ಸವದ ಮೊದಲ ದಿನ ರಾವುತರಾಯನು ಮಲ್ಲಯ್ಯನ ದೇವಸ್ಥಾನದಲ್ಲಿ ಆಸೀನನಾಗುವುದರೊಡನೆ ಜಾತ್ರೆಗೆ ಚಾಲನೆ ದೊರಕಿತು. ಜಾತ್ರೆಯ ಮೊದಲ ದಿನ ಆಗಮಿಸಿದ ಅಸಂಖ್ಯಾತ ಭಕ್ತರಿಗೆ ವಿವಿಧ ಗೆಳೆಯರ ಬಳಗ ಭಕ್ತರಿಂದ ಅನ್ನ ಸಂತರೆ​‍್ಣ ಜರುಗುವುದು.  

ಇಂದು ಕಲ್ಯಾಣೋತ್ಸವದ ನಂತರ ದಿ.7ರಂದು ಶೀಗಿ ಹುಣ್ಣಿಮೆಯ ಧರ್ಮದರ್ಶನ ಭಕ್ತರಿಂದ ಮಹಾನೈವೇದ್ಯ (ಸಕ್ಕರೆ ಲೋಬಾನ),ದಿ.8ರಂದು ರಾವೂತರಾಯ ಸ್ವಸ್ಥಾನಕ್ಕೆ ಮರಳುವ ಭವ್ಯ ಬಂಡಿ ಉತ್ಸವ ಹಾಗೂ ಭಾರ ಎತ್ತುವ ಸ್ಪರ್ಧೆ ಮೂಲಕ ಜಾತ್ರೆ ಸಂಪನ್ನಗೊಳ್ಳುವುದು.