ರಕ್ಷಾಬಂಧನದ ಸಂದೇಶ: ಸಹೋದರತ್ವದ ಭಾವ ಬೆಳೆಸಿಕೊಳ್ಳಿ

ರಕ್ಷಾಬಂಧನದ ಸಂದೇಶ: ಸಹೋದರತ್ವದ ಭಾವ ಬೆಳೆಸಿಕೊಳ್ಳಿ  Raksha Bandhan Message: Cultivate a spirit of brotherhood


ಗದಗ, ಆ.27: ಶ್ರಾವಣ ಮಾಸದಲ್ಲಿ ಬರುವ ನೂಲು ಹುಣ್ಣಿಮೆ (ರಕ್ಷಾಬಂಧನ) ಹಬ್ಬವು ಅತ್ಯಂತ ಅರ್ಥಪೂರ್ಣವಾದದ್ದು. ಪ್ರತಿಯೊಂದು ಆಚರಣೆಯ ಹಿಂದೆ ಸತ್ಯದ ಸಂದೇಶ ಅಡಗಿದ್ದು, ಅದನ್ನು ಜನರ ಮನಮನಗಳಿಗೆ ತಲುಪಿಸುವ ಉದ್ದೇಶದಿಂದ ಈಶ್ವರೀಯ ವಿಶ್ವವಿದ್ಯಾಲಯವು ರಕ್ಷಾಬಂಧನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದೆ ಎಂದು ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಕ್ಕನವರು ಹೇಳಿದರು.  

ನಾವೆಲ್ಲರೂ ಒಬ್ಬ ಪರಮಾತ್ಮನ ಮಕ್ಕಳು, ಸಹೋದರ-ಸಹೋದರಿಯರು ಎಂಬ ಆತ್ಮೀಯತೆಯ ದೃಷ್ಟಿಕೋನ ನಮ್ಮಲ್ಲಿ ಬೆಳೆದಾಗ ಸಮಾಜದಲ್ಲಿರುವ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಣ್ಣ ತನ್ನ ತಂಗಿಯನ್ನು ಪವಿತ್ರ ಹಾಗೂ ಶುದ್ಧ ದೃಷ್ಟಿಯಿಂದ ನೋಡುವಂತೆ, ಪ್ರತಿಯೊಬ್ಬ ಮಹಿಳೆಯನ್ನು ಸಹೋದರಿಯಾಗಿ ಮತ್ತು ಪ್ರತಿಯೊಬ್ಬ ಪುರುಷನನ್ನು ಆತ್ಮಸಹೋದರನಾಗಿ ಕಾಣುವ ಪವಿತ್ರ ದೃಷ್ಟಿ-ವೃತ್ತಿಯನ್ನು ಜಾಗೃತಗೊಳಿಸುವುದೇ ರಕ್ಷಾಬಂಧನದ ಉದ್ದೇಶವಾಗಿದೆ ಎಂದರು.  

ದೇಹದ ರಕ್ಷಣೆಗೆ ಹಲವು ವ್ಯವಸ್ಥೆಗಳನ್ನು ಮಾಡಿಕೊಂಡಿರುವ ನಾವು ಆತ್ಮರಕ್ಷಣೆಗೂ ಆದ್ಯತೆ ನೀಡಬೇಕು. ದುಷ್ಕರ್ಮ, ದುರ್ಗುಣ, ದುಶ್ಚಟ, ದುರ್ವಿಚಾರ, ದುರಹಂಕಾರ, ದುಃಖ ಹಾಗೂ ದುಷ್ಟ ಪ್ರವೃತ್ತಿಗಳಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕು. ಇದಕ್ಕಾಗಿ ಸತ್ಸಂಗ, ಸದ್ಗುಣ, ಸತ್ಯಂ-ಶಿವಂ-ಸುಂದರಂ ಪರಮಾತ್ಮನ ಸ್ಮರಣೆ, ಸದ್ವಿಚಾರ, ಸದಾಚಾರ ಮತ್ತು ಸಚ್ಚಾರಿತ್ರ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಒಳ್ಳೆಯವರ ಸಂಗದಲ್ಲಿ ಬೆಸೆದುಕೊಂಡಾಗ ಕೆಟ್ಟ ಬಂಧನಗಳು ಸಹಜವಾಗಿಯೇ ದೂರವಾಗುತ್ತವೆ. ಕೆಟ್ಟ ಸಂಗದಿಂದ ದುಃಖ, ಅಶಾಂತಿ ಮತ್ತು ಒತ್ತಡ ಉಂಟಾದರೆ, ಸತ್ಸಂಗದಿಂದ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ದೊರೆಯುತ್ತದೆ ಎಂದು ತಿಳಿಸಿದರು.  

ಗದಗ ನಗರದ ಸಿದ್ಧರಾಮೇಶ್ವರ ನಗರದಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಯೋಜಿಸಲಾಗಿತ್ತು. ನೂರಾರು ಸಹೋದರ-ಸಹೋದರಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಕ್ಷಾಬಂಧನದ ಆಧ್ಯಾತ್ಮಿಕ ಸಂದೇಶವನ್ನು ಆಲಿಸಿ ರಾಖಿ ಕಟ್ಟಿಸಿಕೊಂಡರು.  

ಕಾರ್ಯಕ್ರಮಕ್ಕೆ ಈಶ್ವರೀಯ ವಿಶ್ವವಿದ್ಯಾಲಯದ ಹುಬ್ಬಳ್ಳಿ ವಲಯದ ಮುಖ್ಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ನಿರ್ಮಲಕ್ಕನವರು ಆಗಮಿಸಿದ್ದರು. ಕೆಇಬಿ ಕಾರ್ಯನಿರ್ವಾಹಕ ಎಂಜಿನಿಯರ್ ರಾಜೇಶ್ ಕಲ್ಯಾಣಶೆಟ್ಟರ್ ದಂಪತಿ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಮತಿ ಸವಿತಾ ಶಿಗ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಕೋರಿದರು. ರಾಜಯೋಗಿನಿ ಬ್ರಹ್ಮಾಕುಮಾರಿ ಜಯಂತಿ ಅಕ್ಕನವರು ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನಿಸಿದರು.