ಬೆಂಗಳೂರು 10: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನವನ್ನು ರಾಜನಾಥ್ ಸಿಂಗ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ರಾಜನಾಥ್ ಸಿಂಗ್, ಉತ್ತರ ಪ್ರದೇಶದಲ್ಲಿ ಸಂಸ್ಕೃತಿಯ ಮಹಾ ಕುಂಭಮೇಳ ನಡೆಯುತ್ತಿದೆ. ಇಲ್ಲಿ ಬೆಂಗಳೂರಿನಲ್ಲಿ ತಂತ್ರಜ್ಞಾನ ಹಾಗೂ ಯುದ್ಧೋಪಕರಣಗಳ, ಯುದ್ಧ ವಿಮಾನಗಳ ಮಹಾ ಕುಂಭ ನಡೆಯುತ್ತಿದೆ ಎಂದು ಹೇಳಿದರು.
ಜಾಗತಿಕ ಅನಿಶ್ಚಿತತೆಗಳನ್ನು ಉಲ್ಲೇಖಿಸಿ, ಒಂದು ದೊಡ್ಡ ದೇಶವಾಗಿ, ಭಾರತ ಯಾವಾಗಲೂ ಶಾಂತಿ ಮತ್ತು ಸ್ಥಿರತೆಯ ಪ್ರತಿಪಾದಕವಾಗಿದೆ ಎಂದು ಹೇಳಿದರು. ಭದ್ರತೆ ದುರ್ಬಲವಾಗಿದ್ದರೆ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಮತ್ತು ಬಲಿಷ್ಠರಾಗಿರುವುದರಿಂದ ಮಾತ್ರ ನಾವು ಉತ್ತಮ ಜಗತ್ತಿಗಾಗಿ ಕೆಲಸ ಮಾಡಲು ಸಾಧ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಹೇಳಿದ್ದಾರೆ.
ಏರೋ ಇಂಡಿಯಾದಲ್ಲಿ ವಿದೇಶಗಳಿಂದ ಬಂದ ನಮ್ಮ ಸ್ನೇಹಿತರ ಉಪಸ್ಥಿತಿಯು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.
ಹೊಸ ಸವಾಲುಗಳಿಗೆ ಉತ್ತರ ಹುಡುಕುವ ಕಾರ್ಯ ಮಾಡಬೇಕಿದೆ. ಶಾಂತಿ, ಶಕ್ತಿ ನಮ್ಮ ಮಂತ್ರ ಬಲ ಆಗಬೇಕಿದೆ. ನಾವು ಬಲಾಢ್ಯರಾಗಿ ವಿಶ್ವದಲ್ಲಿ ನಮ್ಮ ಸ್ಥಾನ ಪ್ರದರ್ಶನ ಮಾಡಬೇಕಿದೆ. ಅತ್ಯಾಧುನಿಕ ಅನ್ವೇಷಣೆ ಮೂಲಕ ನಾವು ಮುಂದೆ ಹೆಜ್ಜೆ ಇಟ್ಟಿದ್ದೇವೆ ಏರ್ಶೋ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 10 ವರ್ಷಗಳಿಂದ ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇವೆ. ಬಜೆಟ್ನಲ್ಲಿ ರಕ್ಷಣಾ ಕ್ಷೇತ್ರಕ್ಕೆ 1,080 ಲಕ್ಷ ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ಭಾರತದ ಏರ್ಫೋರ್ಸ್ನ ಪ್ರಮುಖ ಕೇಂದ್ರವಾಗಿದೆ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.