ಕೊಪ್ಪಳ,ಜ.08: ಕಳೆದ ವರ್ಷ ನವೆಂಬರ್ 21ಕ್ಕೆ ಭಾಗ್ಯನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಕರ್ನಾಟಕ ರಕ್ಷಣಾ ವೇದಿಕೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ಕರವೇ ಭಾಗ್ಯನಗರ ಘಟಕವು ಬುಧವಾರದಂದು ಸ್ಥಳೀಯ ಪಟ್ಟಣ ಪಂಚಾಯತ ಕಾರ್ಯಾಲಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಗೀರೀಶಾನಂದ ಜ್ಞಾನಸುಂದರ ಮಾತನಾಡಿ ಭಾಗ್ಯನಗರದ ಎಲ್ಲಾ ವಾರ್ಡಗಳಿಗೆ ಮೂಲಭೂತ ಸೌಕರ್ಯ ಹಾಗೂ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕಳೆದ ವರ್ಷ ನವೆಂಬರ್ 21ಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಭಾಗ್ಯನಗರ ಘಟಕವು ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಪಟ್ಟಣ ಪಂಚಾಯತಿ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಗಾಡ ನಿದ್ದೆಯಲ್ಲಿರುವಂತೆ ಭಾಸವಾಗುತ್ತಿದೆ. ದಕ್ಷಿಣ ಭಾತರದ ಕುಂಭ ಮೇಳವೆಂದು ಪ್ರತೀತ ಹೊಂದಿರುವ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹತ್ತಿರವಿದ್ದು, ಕೂಡಲೇ ಅಭಿವೃದ್ಧಿ ದೃಷ್ಠಿಯಿಂದ ಸಂಪೂರ್ಣವಾಗಿ ಹದೆಗೆಟ್ಟಿರುವ ಕೊಪ್ಪಳ-ಭಾಗ್ಯನಗರ ಮುಖ್ಯ ರಸ್ತೆ ದುರಸ್ತಿಗೊಳಿಸಬೇಕು. ಪಟ್ಟಣ ಪಂಚಾಯತ ವ್ಯಾಪ್ತಿಯ ಹಲವು ವಾರ್ಡಗಳ ನಿವೇಶನಗಳಿಗೆ ಕಟ್ಟಡ ಪರವಾನಿಗೆ ನೀಡುವುದು, ಶಾಸ್ತ್ರೀ ಕಾಲೋನಿ ಹಾಗೂ ಭಾಗ್ಯನಗರದ ನೀರು ಶೇಖರಣೆಯಾಗುವ ಜಾಗದಲ್ಲಿ ಮೂಲಭೂತ ಸೌಕರ್ಯಗಳಾದ ಉತ್ತಮ ಚರಂಡಿ, ಸಿ.ಸಿ ರಸ್ತೆ ಬೀದಿ ದೀಪಗಳ ನಿರ್ವಹಣೆ ಮಾಡುವುದು, ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಸ್ವಚ್ಚತೆ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕದಿಂದ ತಮ್ಮ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭಾಗ್ಯನಗರ ಘಟಕ ಅಧ್ಯಕ್ಷ ವಿರೇಶ ಮುಂಡಾಸದ, ಜಿಲ್ಲಾ ಪ್ರ.ಕಾರ್ಯದರ್ಶಿ ನಿಂಗಪ್ಪ ಮೂಗಿನ, ಉಪಾಧ್ಯಕ್ಷರಾದ ದೇವೇಂದ್ರ್ಪ ಅಲಬಗಾನೂರು, ಸಂಘಟನಾ ಕಾರ್ಯದರ್ಶಿ ಪ್ರಕಾಶ ಜೋಷಿ, ಗೊಂಡಬಾಳ ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ ನಾಗರಳ್ಳಿ, ಮುಖಂಡರಾದ ಸಂಜೀವಸಿಂಗ್ ಅಜಾರೆ, ವೆಂಕಟೇಶ ತಟ್ಟಿ, ದೊಡ್ಡಬಸಪ್ಪ ನರೇಗಲ್ಲ, ರಾಘವೇಂದ್ರ ಕೋಣಿ, ಮಹಿಳಾ ಘಟಕ ಉಪಾಧ್ಯಕ್ಷೆ ನಿರ್ಮಲಾ ಪಾಟೀಲ, ಸರಸ್ವತಿ ಬಸಾಪೂರ, ಭಾಗ್ಯಶ್ರೀ ಹೊಸಮನಿ, ಮಂಜುಳಾ ಅಂಗಡಿ, ಆಶಾಬಾಯಿ ದೇಸಾಯಿ, ತುಂಗಾ ಕಂಪ್ಲೀಕರ, ಹಾಗೂ ಅನೇಕರು ಉಪಸ್ಥಿತರಿದ್ದರು.