ಪ್ರತಿಭಟನೆಯಲ್ಲಿ ಸಾವಿರಾರು ಜನ ಅಲ್ಪಸಂಖ್ಯಾತರ ಹಾಗೂ ಅಹಿಂದ್ ಸಂಘಟನೆಯ ಮುಖಂಡರು ಭಾಗಿ
ದೇವರಹಿಪ್ಪರಗಿ 13: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು, ರಾಜ್ಯದಲ್ಲಿ ಜಾರಿಗೊಳಿಸಬಾರದು ಎಂಬ ಒಕ್ಕೊರಲ ಒತ್ತಾಯವನ್ನು ಅಂಜುಮನ್ ಕಮಿಟಿ ಸದಸ್ಯರು ಹಾಗೂ ಅಹಿಂದ ಸಂಘಟನೆಯ ಮುಖಂಡರು ಮಾಡಿದರು.
ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಿಂದ ಅಂಬೇಡ್ಕರ್ ವೃತ್ತದ ವರೆಗೆ ಭಾನುವಾರದಂದು ಮೆರವಣಿಗೆಯಲ್ಲಿ ಪ್ರತಿಭಟನಾಕಾರರು ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿ. ವಕ್ಫ್ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಆಗ್ರಹಿಸಿ, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿ, ತಹಸಿಲ್ದಾರ್ ಪ್ರಕಾಶ ಸಿಂದಗಿ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ನಂತರ ಹಲವಾರು ಮುಖಂಡರು ಮಾತನಾಡಿ, ಕೇಂದ್ರ ಸರ್ಕಾರವು ವಕ್ಪ್ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದು ಅಸಾಂವಿಧಾನಿಕ ನಡೆ, ಇದನ್ನು ಮರು ಪರೀಶೀಲಿಸಬೇಕು. ಮುಸ್ಲಿಂ ಕಾನೂನಿನಂತೆ ವಕ್ಫ್ ಎಂದರೆ ಧಾರ್ಮಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ದೇವರ ಹೆಸರಿನಲ್ಲಿ ಅರ್ಿಸಲಾದ ಆಸ್ತಿಯಾಗಿದೆ. ವಕ್ಫ್ ಆದಾಯವನ್ನು ಮಸೀದಿಗಳ ನಿರ್ವಹಣೆ, ಸಮುದಾಯದ ಬಡ ಜನರ ಅಭಿವೃದ್ಧಿಗೆ ಬಳಸಲಾಗುತ್ತದೆ. ಬಿಜೆಪಿ ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಹಾಗೂ ಅಲ್ಪಸಂಖ್ಯಾತ ಸಮುದಾಯ ಗುರಿಯಾಗಿಟ್ಟುಕೊಂಡು ಜಾತಿ ಹಾಗೂ ಧರ್ಮದ ನಡುವೆ ವಿಷ ಹಾಗೂ ಕೋಮು ಭಾವನೆಗಳನ್ನು ಬಿತ್ತುವ ದುರುದ್ದೇಶದಿಂದ ಮಸೂದೆಯ ತರುತ್ತಿದೆ. ಜನ ವಿರೋಧಿ ಕೇಂದ್ರ ಸರ್ಕಾರ ನಡೆ ಸರಿಯಲ್ಲ, ಕೂಡಲೇ ರಾಷ್ಟ್ರ ಪತಿಗಳು ಮಧ್ಯಪ್ರವೇಶ ಮಾಡಿ ಸಮುದಾಯದ ಹಿತ ಕಾಪಾಡಬೇಕು ಹಾಗೂ ರಾಜ್ಯ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೊಳಿಸಬಾರದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಂಜುಮನ್ ಇಸ್ಲಾಂ ಕಮಿಟಿಯ ಅಧ್ಯಕ್ಷರಾದ ಮೈಹಿಬೂಬ ಹುಂಡೆಕಾರ, ಉಪಾಧ್ಯಕ್ಷರಾದ ಮಹಮ್ಮದ್ ರಫೀಕ್ ಪಾನಫರೋಶ, ಮುಖಂಡರುಗಳಾದ ಅಬ್ದುಲ್ ಸತ್ತಾರ, ಬಸೀರ ಅಹ್ಮದ್ ಬೇಪಾರಿ, ದಸ್ತಗಿರ ಮುಲ್ಲಾ, ರಿಯಾಜ್ ತಾಂಬೋಳಿ, ಜಬ್ಬಾರ ಮೋಮಿನ್, ಮುನ್ನಾ ಮಳಖೇಡ, ಪ್ರಕಾಶ ಗುಡಿಮನಿ, ಮೌಲಾನ ಅಹ್ಮದ್ ಅಲಿ, ರಾಜು ಮೇಟಗಾರ, ಹೈದರಸಾಬ್ ಮುಲ್ಲಾ,ಎ.ಡಿ.ಮುಲ್ಲಾ, ಶರಣು ಜಮಖಂಡಿ, ಇಕ್ಬಾಲ್ ಬಿಜಾಪುರ, ರಜಾಕ ಆಹೇರಿ, ಅಜೀಜ ಮರೋಳ, ತಿಪ್ಪಣ್ಣ ಮೇಲಿನಮನಿ ಸೇರಿದಂತೆ ಅಂಜುಮನ್ ಕಮಿಟಿಯ ಸದಸ್ಯರು, ಅಹಿಂದ ಸಂಘಟನೆಯ ಮುಖಂಡರು ಹಾಗೂ ಸಾವಿರಾರು ಮಂದಿ ಮುಸ್ಲಿಮರು ಪಾಲ್ಗೊಂಡಿದ್ದರು.