ಮನೆಇಲ್ಲದ ಕುಟುಂಬಗಳಿಗೆ ನಿವೇಶನ ಒದಗಿಸುವ ಭರವಸೆ
Promise to provide housing to homeless families
ಹಾನಗಲ್ 06: ಹಾನಗಲ್ ನಗರ ಬೆಳೆಯುತ್ತಿದೆ. ಇಲ್ಲಿ ನಾಲ್ಕೈದು ನೂರು ಕುಟುಂಬಗಳು ನಿವೇಶನ ಇಲ್ಲದೇ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿವೆ. ಅಂಥ ಕುಟುಂಬಗಳಿಗೆ ತಮ್ಮ ಅವಧಿ ಮುಗಿಯುವ ಒಳಗೆ ನಿವೇಶನ ದೊರಕಿಸುವ ಸಂಕಲ್ಪ ಮಾಡಿದ್ದಾಗಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಇಲ್ಲಿನ ಮೌಲಾನಾ ಆಜಾದ್ ಶಾಲೆಯಲ್ಲಿ ಪುರಸಭೆಯ ಆಶ್ರಯದಲ್ಲಿ ನಡೆದ ಮುಖ್ಯಮಂತ್ರಿಗಳ ವಸತಿ ನಿವೇಶನ ಯೋಜನೆಯಡಿ ಪುರಸಭೆ ವ್ಯಾಪ್ತಿಯ 53 ವಸತಿ ರಹಿತ ಫಲಾನುಭವಿಗಳಿಗೆ ನಿವೇಶನ ಹಕ್ಕುಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ವಸತಿ ರಹಿತರಿಗೆ ನಿವೇಶನ ದೊರಕಿಸುವಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಲಿರುವ ಹೊಸ ರೀತಿಯ ಪ್ರಯೋಗ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸ್ಲಂ ಬೋರ್ಡ್ನಿಂದ ಒಂದು ಸಾವಿರ, ಆಶ್ರಯ ಯೋಜನೆಯಡಿ ಇನ್ನೊಂದು ಸಾವಿರ ಮನೆಗಳನ್ನು ಮಂಜೂರಿ ಮಾಡಿಸಲಾಗಿದ್ದು, ಅರ್ಜಿಗಳಿಲ್ಲದ ಕಾರಣ ಆಶ್ರಯ ಯೋಜನೆಯಡಿಯ 500 ಮನೆಗಳನ್ನು ವಾಪಸ್ ನೀಡಲಾಗಿದೆ. ಈ ಪೈಕಿ 360 ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಇನ್ನೂ 140 ಮನೆಗಳು ಬಾಕಿ ಇವೆ. ಅರ್ಹರು ಅರ್ಜಿ ಸಲ್ಲಿಸಿ ಮನೆಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದ ಅವರು ಆಶ್ರಯ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ನೀಡುವ ಸಹಾಯಧನದಲ್ಲಿ ತನ್ನ ಪಾಲಿನ ಅರ್ಧ ಹಣವನ್ನು ರಾಜ್ಯ ಸರ್ಕಾರ ನೀಡಿದ್ದು, ಉಳಿದರ್ಧ ಹಣವನ್ನು ಕೇಂದ್ರ ಸರ್ಕಾರ ಪಾವತಿಸಬೇಕಿದೆ ಎಂದರು.
24 ಗಂಟೆಗಳ ಕಾಲ ನೀರು ಪೂರೈಸಲು ಧರ್ಮಾ ನದಿಯಿಂದ ಪೈಪ್ಲೈನ್ ಮೂಲಕ ನೀರು ತರುವ 36 ಕೋಟಿ ರೂ. ವೆಚ್ಚದ ಕಾಮಗಾರಿ ಚಾಲನೆ ಪಡೆದಿದೆ. 15 ಕೋಟಿ ರೂ. ವೆಚ್ಚದ ನಾನಾ ಅಭಿವೃದ್ಧಿ ಕಾಮಗಾರಿಗಳು ಮಳೆಯ ಕಾರಣದಿಂದ ವಿಳಂಬವಾಗಿವೆ. ರಸ್ತೆ ಮತ್ತು ಚರಂಡಿ ಕಾಮಗಾರಿಗೆ 7.60 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ನಗರದಲ್ಲಿ ಕನ್ನಡದ ಜೊತೆಗೆ ಆಂಗ್ಲ ಮಾಧ್ಯಮ ಸರ್ಕಾರಿ ಪ್ರೌಢಶಾಲೆ ಆರಂಭಿಸಿ ಬಹಳ ವರ್ಷಗಳ ಬೇಡಿಕೆ ಈಡೇರಿಸಲಾಗಿದೆ. ಮೂಲೆ ನಿವೇಶನಗಳ ಹರಾಜು ಪ್ರಕ್ರಿಯೆ ಚುರುಕುಗೊಳಿಸಿ ಆದಾಯ ತಂದುಕೊಡಲಾಗಿದೆ. ನವನಗರ ಪ್ರದೇಶವನ್ನು ಸ್ಲಂ ಬೋರ್ಡ್ ವ್ಯಾಪ್ತಿಗೆ ತರುವ ಮೂಲಕ ಮನೆ ಮಾಲಿಕತ್ವದ ಹಕ್ಕುಪತ್ರ ಕೊಡಿಸಲು ಕಾಳಜಿ ವಹಿಸಲಾಗಿದೆ ಎಂದರು.
ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ ಮಾತನಾಡಿ, ಪುರಸಭೆ ವ್ಯಾಪ್ತಿಯ ನಿವಾಸಿಗಳ ನೆಮ್ಮದಿಯ ಬದುಕಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಕಾಳಜಿ ವಹಿಸಲಾಗಿದೆ. ಶಾಸಕ ಶ್ರೀನಿವಾಸ ಮಾನೆ ಅವರು ಹತ್ತು, ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಕೋಟ್ಯಾಂತರ ರೂ. ಅನುದಾನ ದೊರಕಿಸಿದ್ದಾರೆ. ಕೆಲ ತಾಂತ್ರಿಕ ಕಾರಣಗಳಿಂದ ಹಲವು ಅಭಿವೃದ್ಧಿ ಕಾಮಗಾರಿಗಳು ಚಾಲನೆ ಪಡೆದಿಲ್ಲ. ಶೀಘ್ರ ಚಾಲನೆ ಪಡೆಯಲಿವೆ ಎಂದರು.
ತಹಶೀಲ್ದಾರ್ ರೇಣುಕಾ ಎಸ್., ಉಪಾಧ್ಯಕ್ಷೆ ವೀಣಾ ಗುಡಿ, ಮಾಜಿ ಅಧ್ಯಕ್ಷರಾದ ಖುರ್ಷಿದ್ ಹುಲ್ಲತ್ತಿ, ನಾಗಪ್ಪ ಸವದತ್ತಿ, ಅಹ್ಮದ್ಭಾಷಾ ಪೀರಜಾದೆ, ಪರಶುರಾಮ ಖಂಡೂನವರ, ಮಮತಾ ಆರೆಗೊಪ್ಪ, ಮಾಜಿ ಉಪಾಧ್ಯಕ್ಷರಾದ ಮಹೇಶ ಪವಾಡಿ, ಶಂಶಿಯಾ ಬಾಳೂರ, ಸದಸ್ಯರಾದ ವಿರುಪಾಕ್ಷಪ್ಪ ಕಡಬಗೇರಿ, ಹಸೀನಾಬಾನು ನಾಯ್ಕ, ಸುರೇಶ ನಾಗಣ್ಣನವರ, ಗೌಸ್ಮೋದೀನ ತಂಡೂರ, ಮೇಕಾಜಿ ಕಲಾಲ, ಅಬ್ದುಲ್ಗನಿ ಪಾಳಾ, ಆಶ್ರಯ ಸಮಿತಿ ಸದಸ್ಯರಾದ ಮೇಘನಾ ಸುಲಾಖೆ, ಮಾಲತೇಶ ಕಾಳೇರ, ನಿಯಾಜ್ ಸರ್ವಿಕೇರಿ, ವಿನಾಯಕ ಬಂಕನಾಳ, ರವೀಂದ್ರ ದೇಶಪಾಂಡೆ, ರಾಜೂ ಗುಡಿ, ಉಮೇಶ ಮಾಳಗಿ, ಮರ್ದಾನಸಾಬ ಬಡಗಿ, ಟಾಕನಗೌಡ ಪಾಟೀಲ, ಸಂತೋಷ ಸುಣಗಾರ, ಆದರ್ಶ ಶೆಟ್ಟಿ, ಬಾಬಾಜಾನ ಕೊಂಡವಾಡೆ, ಮುಖ್ಯಾಧಿಕಾರಿ ಜಗದೀಶ ಸೇರಿದಂತೆ ಇತರರು ಇದ್ದರು. ಶಿವಾನಂದ ಕ್ಯಾಲಕೊಂಡ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 