ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು, ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ

ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು, ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ Preparing students and youth for a competitive world

ಲೋಕದರ್ಶನ ವರದಿ 

      ಹಾನಗಲ್ 30 : ಪ್ರೀತಿ, ವಿಶ್ವಾಸ ತೋರಿ ಆಶೀರ್ವದಿಸಿದ ತಾಲೂಕಿನ ಜನರ ಋಣ ತೀರಿಸಲು, ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳ ಭವಿಷ್ಯ ಸದೃಢಗೊಳಿಸಲು ಹಾನಗಲ್‌ನಲ್ಲಿ ಪರಿವರ್ತನ ಕಲಿಕಾ ಕೇಂದ್ರ ತೆರೆದು ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳು, ಯುವಕರನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು. 

  ಇಲ್ಲಿನ ಗುರುಭವನದಲ್ಲಿನ ಪರಿವರ್ತನ ಕಲಿಕಾ ಕೇಂದ್ರದಲ್ಲಿ ನಡೆದಿರುವ ಸಿಇಟಿ, ನೀಟ್ ಉಚಿತ ತರಬೇತಿ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು. ನಮ್ಮ ತಾಲೂಕಿನ ಮಕ್ಕಳು ಭವಿಷ್ಯದಲ್ಲಿ ಎದುರಾಗುವ ಯಾವುದೇ ಸ್ಪರ್ಧೆಗಳಲ್ಲಿಯೂ ಸಹ ಹಿಂದೆ ಬೀಳಬಾರದು ಎನ್ನುವ ಉದ್ದೇಶದಿಂದ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಗೊಳಿಸಲಾಗುತ್ತಿದೆ. ಕಳೆದ 3 ವರ್ಷಗಳ ಅವಧಿಯಲ್ಲಿ ಕಲಿಕಾ ಕೇಂದ್ರದಲ್ಲಿ ಒಟ್ಟು 3,500 ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗಿದೆ.

ಇದು ಸ್ಪರ್ಧೆಯ ಯುಗ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಸಹ ಸ್ಪರ್ಧೆ ಎನ್ನುವುದು ಮಾಮೂಲಾಗಿದೆ. ನಗರ ಪ್ರದೇಶಗಳ ಮಕ್ಕಳಿಗೆ ಸರಿಸಮನಾಗಿ ನಮ್ಮ ತಾಲೂಕಿನ ಮಕ್ಕಳು ಸಹ ಸ್ಪರ್ಧೆ, ಸವಾಲು ಎದುರಿಸಲು ತಯಾರಾಗಬೇಕಿದೆ. ಈ ಮಹೋನ್ನತ ಉದ್ದೇಶದ ಸಾಕಾರಕ್ಕೆ ಪರಿವರ್ತನ ಕಲಿಕಾ ಕೇಂದ್ರ ಶ್ರಮ ವಹಿಸಿದೆ. ಸಾಧನೆಗೆ ಬಡತನ ಅಡ್ಡಿ ಬರಬಾರದು. ಹಾಗಾಗಿಯೇ ಸಿಇಟಿ, ನೀಟ್, ಸ್ಪರ್ಧಾತ್ಮಕ ಪರೀಕ್ಷೆ, ಎನ್‌ಎಂಎಂಎಸ್, ಎಸ್ಸೆಸ್ಸೆಲ್ಸಿ, ಸ್ಪೋಕನ್ ಇಂಗ್ಲಿಷ್, ಕೌಶಲ್ಯಾಭಿವೃದ್ಧಿ ಹೀಗೆ ವಿದ್ಯಾರ್ಥಿಗಳನ್ನು ಸರ್ವರೀತಿಯಿಂದಲೂ ತರಬೇತಿಗೊಳಿಸಿ ಸ್ಪರ್ಧೆಗೆ ಅಣಿಗೊಳಿಸಲಾಗುತ್ತಿದೆ ಎಂದು ಹೇಳಿದರು. 

  ವಿದ್ಯಾರ್ಥಿಗಳಾದ ಮಣಿಕಂಠ ದೊಡ್ಡಹುಣಸಿಕಟ್ಟಿ, ಗೌತಮಿ ಹುಣಸಿಹಳ್ಳಿ, ಸುಹಾನ ಬಾಳಂಬೀಡ, ನಿಸ್ಸಿ ದೊಡ್ಡಮನಿ, ರಕ್ಷಿತಾ ದೊಡ್ಡಬಡಿಗೇರ ಮಾತನಾಡಿ, ಸಿಇಟಿ, ನೀಟ್ ತರಬೇತಿ ಪಡೆಯಲು ಹೆಚ್ಚು ಹಣ ವ್ಯಯ ಮಾಡಿ ದೂರದ ನಗರ ಪ್ರದೇಶಗಳಿಗೆ ತೆರಳಬೇಕಿತ್ತು. ಆದರೆ ಶಾಸಕ ಶ್ರೀನಿವಾಸ ಮಾನೆ ಅವರು ವಿಶೇಷ ಆಸಕ್ತಿ ವಹಿಸಿ ಬೆಂಗಳೂರಿನ ಪ್ರತಿಷ್ಠಿತ ಆರ್‌.ವಿ.ಯುನಿವರ್ಸಿಟಿಯ ವಿಷಯ ತಜ್ಞರಿಂದ ಪರಿವರ್ತನ ಕಲಿಕಾ ಕೇಂದ್ರದಲ್ಲಿ ತರಬೇತಿ ದೊರಕಿಸುತ್ತಿದ್ದಾರೆ. ಉಚಿತ ತರಬೇತಿಯಿಂದ ಅನುಕೂಲವಾಗಿದೆ. ಅಗತ್ಯ ಪುಸ್ತಕ, ಸಾಮಗ್ರಿ, ಪರೀಕ್ಷಾ ಕಿಟ್ ಸಹ ವಿತರಿಸಿರುವುದರಿಂದ ಹಣಕಾಸಿನ ಹೊರೆ ತಪ್ಪಿದೆ. ಕಳೆದ 3 ವರ್ಷಗಳಿಂದ ಉಚಿತವಾಗಿ ತರಬೇತಿ ಸಿಗುತ್ತಿರುವುದರಿಂದ ವಿದ್ಯಾರ್ಥಿಗಳ ಕನಸು ನನಸಾಗಿದೆ ಎಂದರು. 

  ಕೇಂದ್ರದ ಆಡಳಿತಾಧಿಕಾರಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಕಳೆದ 3 ವರ್ಷಗಳಿಂದ ಕೇಂದ್ರದಲ್ಲಿ ಸಿಇಟಿ, ನೀಟ್ ತರಬೇತಿ ಉಚಿತವಾಗಿ ನೀಡಲಾಗುತ್ತಿದೆ. ಜಾಗತಿಕ ಸ್ಪರ್ಧೆಯ ಎಲ್ಲ ರೀತಿಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಆತ್ಮಸ್ಥೈರ್ಯ ವಿದ್ಯಾರ್ಥಿಗಳಲ್ಲಿ ಮೂಡಿಸಲಾಗುತ್ತಿದೆ. ಶಾಸಕ ಶ್ರೀನಿವಾಸ ಮಾನೆ ಅವರು ವಿಶೇಷ ಕಾಳಜಿ ವಹಿಸಿ, ನಗರ ಪ್ರದೇಶಗಳಲ್ಲಿ ಮಾತ್ರ ಸಿಗುವ ಇಂಥ ಅವಕಾಶವನ್ನು ಸ್ಥಳೀಯವಾಗಿ ದೊರಕಿಸುತ್ತಿರುವುದು ತಾಲೂಕಿನ ವಿದ್ಯಾರ್ಥಿಗಳ ಸೌಭಾಗ್ಯ ಎಂದರು.ವ್ಯವಸ್ಥಾಪಕ ಗೀರೀಶ ಅಂಬಿಗೇರ ಇದ್ದರು.