ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ ವತಿಯಿಂದ ಪ್ರತಿಭಾ ಕಾರಂಜಿ

 ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಹೊಸಪೇಟೆ ವತಿಯಿಂದ ಪ್ರತಿಭಾ ಕಾರಂಜಿ Pratibha Karanji by the Field Coordinator's Office, Hospet

ಹೊಸಪೇಟೆ 03: ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಹೊಸಪೇಟೆ ವತಿಯಿಂದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ-2025-26ನ್ನು ದಿನಾಂಕ : 02.12.2025ರ ಬೆಳಿಗ್ಗೆ 10.30ಕ್ಕೆ ಪಿ.ವಿ.ಎಸ್‌.ಬಿ.ಸಿ. ಅನುದಾನಿತ ಪ್ರೌಢಶಾಲೆ ಹಂಪಿ ರಸ್ತೆ, ಬಾಲಾಟ್ಯಾಕೀಸ್ ಹತ್ತಿರ, ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷರಾದ ರೂಪೇಶ್ ಕುಮಾರ್ ಅವರು ಹಾಗೂ ತಹಶೀಲ್ದಾರರಾದ ಶ್ರೀಮತಿ ಎಂ.ಶೃತಿ ರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.   

ನಗರಸಭಾ ಅಧ್ಯಕ್ಷರಾದ ರೂಪೇಶ್ ಕುಮಾರ್ ಅವರು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ವಿವಿಧ ಪ್ರತಿಭೆಗಳು ಇರುತ್ತವೆ. ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಅದ್ವಿತಿಯ ಪಾತ್ರವನ್ನು ವಹಿಸುತ್ತವೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಆದ್ದರಿಂದ ಮಕ್ಕಳಿಗೆ ಈ ನಾಡಿನ ಕಲೆ, ಸಂಸ್ಕೃತಿ, ಅರಿವು ಇಂತಹ ಕಾರ್ಯಕ್ರಮಗಳಿಂದ ಮೂಡಲಿದೆ. ನಾನು ಸಹ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು, ಈ ದಿನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದೇನೆ. ಹಾಗೆಯೆ ಮಕ್ಕಳು ಮುಂದೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮಾಡಿ ಉತ್ತಮ ನಾಗರೀಕರಾಗಿ ರೂಪಗೊಳ್ಳಬೇಕೆಂದು ತಿಳಿಸಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್‌.ಎನ್‌.ಎಫ್‌. ಇಮಾಮ್ ನಿಯಾಜಿ ಅವರು ಮಾತನಾಡಿ ಮಕ್ಕಳಲ್ಲಿ ಬಹುಮುಖ ಪ್ರತಿಭೆಗಳು ಇರುತ್ತವೆ. ಅದಕ್ಕೆ ಸಾಕ್ಷಿ ಎಂಬಂತೆ ಪಿ.ವಿ.ಎಸ್‌.ಬಿ.ಸಿ. ಶಾಲೆಯ ಚಿರು ವಿದ್ಯಾರ್ಥಿ ರಾಜ್ಯಮಟ್ಟದ ಸಂಸತ್ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಅಭಿನಂದನೀಯ. ಇಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಅಮೂಲ್ಯವಾದದ್ದು, ಮಕ್ಕಳು ವಿವಿಧ ಸ್ಪರ್ದೆಗಳಲ್ಲಿ ಉತ್ತಮ ಪ್ರತಿಭೆ ತೋರಿಸಿ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಕೂಡ ಆಯ್ಕೆಯಾಗಿ ಕೀರ್ತಿ ತರಬೇಕು ಎಂದು ಶುಭಹಾರೈಸಿದರು.  

ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶೇಖರ್ ಹೊರಪೇಟೆ ಅವರು ಮಾತನಾಡಿ ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿ ಮಕ್ಕಳು ವಿವಿಧ  ಪ್ರತಿಭೆ ಹೊಂದಿರುತ್ತಾರೆ. ಇಂತಹ ಪ್ರತಿಭೆಗಳನ್ನು ಗುರುತಿಸಿ ಹೊರತೆಗೆಯಲು 2002ರಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಲೋತ್ಸವ ಎಂಬ ವಿಶಿಷ್ಟ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಇಂದು ತಾಲೂಕಿನ ವಿವಿಧ ಕ್ಲಷ್ಟರ್‌ನಲ್ಲಿ ಆಯ್ಕೆಯಾದ 950ಕ್ಕೂ ಹೆಚ್ಚು ವಿದ್ಯಾರ್ಥಿಗಳು  ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಈ ವಿಜೇತರಾದವರು ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ನಾಡಿನ ಕಲೆ, ಸಾಹಿತ್ಯ, ಸಂಗೀತ, ಪರಂಪರೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಒಂದು ಉತ್ತಮ ವೇದಿಕೆ ಆಗಿದೆ ಎಂದರು.  

ಈ ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯ ಅಬ್ದುಲ್ ಖದೀರ್, ಸಿಂಡಿಕೇಟ್ ಸದಸ್ಯ ಸೋಮಶೇಖರ್ ಬಣ್ಣದ ಮನೆ, ಆಡಳಿತ ಮಂಡಳಿಯ ಪಿ.ಎನ್‌.ಶ್ರೀಪಾದ್, ಬಿ.ಆರ್‌.ಸಿ.ಯ ಶಿವಕುಮಾರ್ ಸಹಾಯಕ ನಿರ್ದೇಶಕರಾದ ಅಯ್ಯಪ್ಪ, ಸಂಘಟನೆಯ ಡಾ. ಅಕ್ಕಮಹಾದೇವಿ, ಮಾರ್ಗದಪ್ಪ, ಬಸವರಾಜ.ಕೆ, ಜಾಕೀರ್ ಹುಸೇನ್, ಕುಬೇರ ಆಚಾರಿ, ಕಡ್ಲಿವೀರಭದ್ರೇಶ, ತಿಮ್ಮಪ್ಪ, ಎಸ್‌.ಬಸವರಾಜ್, ವರ​‍್ರಸಾದ್, ಶೇಖರ್ ಗಿರಡ್ಡಿ, ಟಿ.ವಿ.ವಿಶ್ವನಾಥ,  ರಾಘವೇಂದ್ರ ಮತ್ತು ಭಾನುಕಿರಣ್, ಶಿಕ್ಷಣ ಸಂಯೋಜಕರಾದ ಎಂ.ರಾಜು, ಹೆಚ್‌.ಶಿವರಾಮಪ್ಪ, ಅಬ್ದುಲ್ ಕಲಾಂ, ಶಾಲೆಯ ಮುಖ್ಯಗುರುಗಳಾದ ಯತ್ನಳ್ಳಿ ಮಲ್ಲಯ್ಯ, ಸೇರಿದಂತೆ ತಾಲೂಕಿನ ವಿದ್ಯಾರ್ಥಿಗಳು ಶಿಕ್ಷಕರು ಹಾಜರಿದ್ದರು. ಈ ವರದಿಯನ್ನು ತಮ್ಮ ಪ್ರತಿಷ್ಠಿತ ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಪ್ರಕಟಿಸಬೇಕೆಂದು ಕೋರುತ್ತೇವೆ.