ಪಟ್ಟಣ ಪಂಚಾಯತ ಸಿಬ್ಬಂದಿ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮನವಿ

Petition alleging that town panchayat staff are not responding to the public

ರಾಯಬಾಗ 13: ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಸಿಬ್ಬಂದಿಗಳು ಕಚೇರಿ ವೇಳೆಯಲ್ಲಿ ಇಲ್ಲದಿರುವುದಿಲ್ಲ, ಪಟ್ಟಣದ ವಾರ್ಡ್‌ ಗಳಲ್ಲಿ ಸ್ವಚ್ಛತೆ ಮಾಡುವುದಿಲ್ಲ, ಸಾರ್ವಜನಿಕರಿಗೆ ಆಸ್ತಿ ಉತಾರವನ್ನು ನೀಡುವುದಿಲ್ಲವೆಂದು ಆರೋಪಿಸಿ ರಾಯಬಾಗ ನಾಗರಿಕ ಹೋರಾಟ ಸಮಿತಿ ಸದಸ್ಯರು ತಹಶೀಲ್ದಾರ ಸುರೇಶ ಮುಂಜೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.   

ಹೋರಾಟಗಾರರು ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಅಭಾಜಿ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಸಿ, ಮಾನವ ಸರಪಳಿ ನಿರ್ಮಿಸಿ, ಪಟ್ಟಣ ಪಂಚಾಯತಿ ಸಿಬ್ಬಂದಿಗಳ ವಿರುದ್ಧ ಘೋಷಣೆ ಕೂಗಿ, ಆಕ್ರೋಶವ್ಯಕ್ತಪಡಿಸಿದರು. ವಾರ್ಡಗಳಲ್ಲಿ ಪ್ರತಿ ದಿನ ನೀರು ಬಿಡುವುದು, ಕಸ ವಿಲೇವಾರಿ, ಕಸದ ವಾಹನಗಳು ವೇಳಾಪಟ್ಟಿ ಪ್ರಕಟಿಸುವುದು, ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಬೀದಿಗಳಲ್ಲಿ ಕಸಗುಡಿಸುವುದು, ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ಹಾಜರಿದ್ದು, ಪ್ರತಿ ದಿನ ಹಾಜರಾತಿಯನ್ನು ಬಯೋಮೆಟ್ರಿಕ್ ಮುಖಾಂತರ ದಾಖಲಿಸುವದನ್ನು ಕಡ್ಡಾಯಗೊಳಿಸುವುದು, ಕಚೇರಿಯ ತುರ್ತು ಕೆಲಸಗಳಿಗೆ ಹೋಗಬೇಕಾದ ಸಂದರ್ಭದಲ್ಲಿ ಚಲನವಲನ ರಜಿಸ್ಟಾರದಲ್ಲಿ ನಮೂದಿಸುವುದು, ಪೌರಕಾರ್ಮಿಕರ ಹಾಜರಾತಿಯನ್ನು ಪ್ರತಿದಿನ ಎರಡು ಸಲ ಬಯೋಮೆಟ್ರಿಕ್ ಮೂಲಕ ದಾಖಲಿಸುವುದು, ಸಾರ್ವಜನಿಕರು ಅರ್ಜಿಗೆ ಸಂಬಂಧಿಸಿದಂತೆ ಅರ್ಜಿ ಕೊಟ್ಟ ಒಂದು ವಾರದೊಳಗೆ ಅವರ ಆಸ್ತಿಗೆ ಸಂಬಂಧಿಸಿದ ಉತಾರಗಳನ್ನು ನೀಡುವುದು, ವಿದ್ಯುತ್ ಸಂಪರ್ಕ ಪಡೆಯಲು ತಕ್ಷಣ ಎನ್‌ಓಸಿ ನೀಡಬೇಕು, ಇ-ಖಾತೆ ಉತಾರಕ್ಕೆ ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸದೆ ಶೀಘ್ರವಾಗಿ ಉತಾರ ನೀಡಬೇಕು.    

ವಾರ್ಡಗಳಲ್ಲಿರುವ ಬೀದಿ ದೀಪಗಳನ್ನು ಸುವ್ಯವಸ್ಥೆಗೊಳಿಸಬೇಕು, ಪಂಚಾಯತ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸಬೇಕು ಮತ್ತು ಸಹಕಾರ ನೀಡಬೇಕು. ಈ ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು. ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತಿಗೆ ಬೀಗ ಜಡಿದು ಸಿಬ್ಬಂದಿ ವಿರುದ್ಧ ಉಗ್ರವಾದ ಹೋರಾಟವನ್ನು ನಡೆಸಲಾಗುವುದೆಂದು ಮನವಿಯಲ್ಲಿ ತಿಳಿಸಿದ್ದಾರೆ.    ಮನವಿ ಸ್ವೀಕರಿಸಿದ ತಹಶೀಲ್ದಾರರು, ಸದರೀ ಮನವಿಯನ್ನು ಪರೀಶೀಲಿಸಿ ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.   

ಏಕನಾಥ ಮಾಚಕನೂರು, ಉತ್ತಮಕುಮಾರ ಶಿಂದೆ, ರಾಮಚಂದ್ರ ಹೆಗಡೆ, ದೇವಾನಂದ ಸನದಿ, ಪಿ.ಎಂ. ಪಾಟೀಲ, ಪೃಥ್ವಿರಾಜ ಜಾಧವ, ಸದಾನಂದ ಹಳಿಂಗಳಿ, ಬಸವರಾಜ ಡೊಣವಾಡೆ, ವಸಂತ ಕಾಂಬಳೆ, ರಾಜು ಬಡೋರೆ, ಶಿವು ಬಂತೆ, ಅಪ್ಪು ಪವಾರ, ಸಂಗಣ್ಣ ದತ್ತವಾಡೆ, ಫಿರೋಜ್ ಮುಲ್ಲಾ, ಪ್ರಕಾಶ್ ಮಾನೆ ಹಾಗೂ ಸಾರ್ವಜನಿಕರು ಇದ್ದರು.