ಇವಿಎಂ ನಂಬಿದ ರಾಜ್ಯದ ಜನ: ಕಾಂಗ್ರೆಸ್ ಗೆ ಮುಜುಗರ ತಂದ ಸಮೀಕ್ಷೆ
People of the state trust EVMs: Survey embarrasses Congress
ಬೆಂಗಳೂರು: ಎಲೆಕ್ಟ್ರಾನಿಕ್ ವೋಟಿಂಗ್ ಮಶಿನ್ಸ್ (EVM) ಗಳ ವಿಶ್ವಾಸಾರ್ಹತೆ ಬಗ್ಗೆ ಸದಾ ಆರೋಪ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಕರ್ನಾಟಕದಲ್ಲಿ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಇವಿಎಂ ಬಗ್ಗೆ ನಡೆಸಿದ ಸಮೀಕ್ಷೆಯಲ್ಲಿ ಜನರು ವಿಶ್ವಾಸ ವ್ಯಕ್ತಪಡಿಸಿದ್ದು, ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ.
ಯೋಜನೆ ಮತ್ತು ಅಂಕಿಅಂಶಗಳ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಮಾನಿಟರಿಂಗ್ ಮತ್ತು ಮೌಲ್ಯಮಾಪನ ಪ್ರಾಧಿಕಾರವು 5,100 ಮತದಾರರ ಜ್ಞಾನ-ವರ್ತನೆ-ಅಭ್ಯಾಸ ಸಮೀಕ್ಷೆಯನ್ನು (Knowledge-Attitude-Practice survey) ನಡೆಸಿದ್ದು, ಇವಿಎಂಗಳಲ್ಲಿ 'ಸಾರ್ವಜನಿಕ ನಂಬಿಕೆ ಅಗಾಧವಾಗಿದೆ' ಎಂದು ಅದು ಹೇಳಿದೆ. ಸುಮಾರು ಶೇ. 85 ರಷ್ಟು ಜನರು ಮತ ಯಂತ್ರಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಅಲ್ಲದೆ 2024 ರ ಲೋಕಸಭಾ ಚುನಾವಣೆ 'ಮುಕ್ತ ಮತ್ತು ನ್ಯಾಯಯುತ' ಪ್ರಕ್ರಿಯೆಯಾಗಿತ್ತು ಎಂದು ಹೇಳಿದ್ದಾರೆ.
ಈ ಸಮೀಕ್ಷೆ ಇದೀಗ ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿದೆ. "ಕಾಂಗ್ರೆಸ್ನ 'ವೋಟ್ ಚೋರಿ' ಮತ್ತೊಮ್ಮೆ ಬಯಲಾಗಿದೆ! ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮೀಕ್ಷಾ ವರದಿಯು, ಭಾರತದಲ್ಲಿ ಚುನಾವಣೆಗಳು ಮುಕ್ತವಾಗಿ ಮತ್ತು ನ್ಯಾಯಯುತವಾಗಿ ನಡೆಯುತ್ತವೆ ಎಂದು ನಮ್ಮ ಬಹುಪಾಲು ಜನರು ನಂಬುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಬಿ.ವೈ. ವಿಜಯೇಂದ್ರ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
"ಪದೇ ಪದೇ ಚುನಾವಣಾ ವೈಫಲ್ಯಗಳನ್ನು ಒಪ್ಪಿಕೊಳ್ಳಲು ಸಾಧ್ಯವಾಗದೆ, 'ವೋಟ್ ಚೋರಿ' ನಿರೂಪಣೆಯ ಮೂಲಕ ಚುನಾವಣಾ ಆಯೋಗದ ಮೇಲೆ ಅನುಮಾನಗಳನ್ನು ಮೂಡಿಸುವ ಅಜಾಗರೂಕ ಅಭಿಯಾನವನ್ನು ಪ್ರಾರಂಭಿಸಿದ ರಾಹುಲ್ ಗಾಂಧಿಗೆ ಇದು ನೇರ ಹೊಡೆತ" ಎಂದು ವಿಜಯೇಂದ್ರ ಹೇಳಿದ್ದಾರೆ.ಆದರೆ ಕಾಂಗ್ರೆಸ್ ಇದನ್ನು ತಳ್ಳಿ ಹಾಕಿದ್ದು, ಸರ್ಕಾರಕ್ಕೂ ಮತ್ತು ಸಮೀಕ್ಷೆಯ ನಡುವಿನ ಯಾವುದೇ ಸಂಬಂಧವನ್ನು ನಿರಾಕರಿಸಿದೆ.
ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮೀಕ್ಷೆಯನ್ನು ವಿನ್ಯಾಸಗೊಳಿಸಿದ ಮತ್ತು ನಡೆಸಿದ ಏಜೆನ್ಸಿ ಬಗ್ಗೆ ಪ್ರಶ್ನಿಸಿದರು, ರಾಜ್ಯ ಸರ್ಕಾರವು ಅದನ್ನು ಅನುಮೋದಿಸಿಲ್ಲ ಅಥವಾ ಆದೇಶಿಸಿಲ್ಲ ಎಂದು ಒತ್ತಿ ಹೇಳಿದರು.
"ಮೊದಲನೆಯದಾಗಿ, ಇದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಪ್ರಧಾನಿ ಕಚೇರಿಯೊಂದಿಗೆ ಕೆಲಸ ಮಾಡುವ ವ್ಯಕ್ತಿಯ ಎನ್ ಜಿಒ ಮಾಡಿದ ಸಮೀಕ್ಷೆಯಿದು. ಅವರಿಂದ ನೀವು ಏನು ನಿರೀಕ್ಷಿಸುತ್ತೀರಿ?” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರು ಆಡಳಿತ ವಿಭಾಗಗಳಲ್ಲಿರುವ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಜನರನ್ನು ಈ ಸಮೀಕ್ಷೆ ಒಳಗೊಂಡಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 