ನಮ್ಮದು ಸಂತೆ ಆರಂಭ: ಚುಕ್ಕಿ ನಂಜುಂಡಸ್ವಾಮಿ ಚಾಲನೆ

ನಮ್ಮದು ಸಂತೆ ಆರಂಭ: ಚುಕ್ಕಿ ನಂಜುಂಡಸ್ವಾಮಿ ಚಾಲನೆ  Our 'Sante' Begins: Chukki Nanjundaswamy Inaugurates It


ಬಳ್ಳಾರಿ, ಆ.25: ನಗರದ ರಾಯಲ್ ಸರ್ಕಲ್ನಲ್ಲಿರುವ ಗಾಂಧಿ ಭವನದಲ್ಲಿ ರೈತ ಸಂಘದ ವತಿಯಿಂದ ಸಂಪೂರ್ಣ ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳ ‘ನಮ್ಮದು ಸಂತೆ’ ವಿನೂತನ ಮಾರುಕಟ್ಟೆಯನ್ನು ಆರಂಭಿಸಲಾಗುತ್ತಿದೆ ಎಂದು ರೈತ ಮುಖಂಡ ಈರ​‍್ಪಯ್ಯ ತಿಳಿಸಿದರು.  

ಈ ಕುರಿತು ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರತಿ ಬುಧವಾರ ಬೆಳಿಗ್ಗೆ 11 ಗಂಟೆಯಿಂದ ‘ನಮ್ಮದು ಸಂತೆ’ ನಡೆಯಲಿದೆ ಎಂದು ಹೇಳಿದರು. ‘ನಮ್ಮ ಬೆಳೆ, ನಮ್ಮದು ಬೆಲೆ, ನಮ್ಮದೇ ಮಾರುಕಟ್ಟೆ’ ಎಂಬ ಧ್ಯೇಯವಾಕ್ಯದೊಂದಿಗೆ ವಿಷಮುಕ್ತ ಭೂಮಿ ಹಾಗೂ ವಿಷಮುಕ್ತ ಆಹಾರದ ಮೂಲಕ ಆರೋಗ್ಯವಂತ ಭಾರತ ನಿರ್ಮಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ನಮ್ಮದು ರೈತ ಉತ್ಪಾದಕರ ಸಂಸ್ಥೆಯ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷೀಯ ಮಂಡಳಿ ಸದಸ್ಯ ಹೊನ್ನೂರು ಪ್ರಕಾಶ್ ವಹಿಸಲಿದ್ದು, ರೈತ ಸಂತೆಯನ್ನು ಮಹಾನಗರ ಪಾಲಿಕೆ ಮೇಯರ್ ಪಿ. ಗಾದೆಪ್ಪ ಉದ್ಘಾಟಿಸಲಿದ್ದಾರೆ. ಮಹಿಳಾ ರೈತ ಸಾಲ ವಿಮೋಚನಾ ಸಂಘಗಳ ಉದ್ಘಾಟನೆಯನ್ನು ಪೊಲೀಸ್ ಜಿಲ್ಲಾ ಅಧೀಕ್ಷಕ ಸುಮನ್ ಡಿ. ಪನ್ನೇಕರ್ ನೆರವೇರಿಸಲಿದ್ದಾರೆ. ಚುಕ್ಕಿ ನಂಜುಂಡಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.  

ಸಂತೆಯಲ್ಲಿ ಸುಮಾರು 40 ಸಾವಯವ ಕೃಷಿಕರು ಭಾಗವಹಿಸಲಿದ್ದು, 40 ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಮಳಿಗೆಗಳಲ್ಲಿ ವಿಷಮುಕ್ತ ಹಾಗೂ ಸಾವಯವ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುವುದು. ನಗರದ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸಾವಯವ ಉತ್ಪನ್ನಗಳನ್ನು ಖರೀದಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಅವರು ಮನವಿ ಮಾಡಿದರು.  

ಸುದ್ದಿಗೋಷ್ಠಿಯಲ್ಲಿ ಹುಲಿಕೆರೆ ಸಜ್ಜನ್, ವಿವೇಕಾನಂದ ರವಿ, ಮೋಹನ್ ಗಾಯಕ್ವಾಡ್, ದೊಡ್ಡ ಬಸವನಗೌಡ, ಬದರಿ ನಾರಾಯಣ ಗುಪ್ತ, ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.