ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು: ಶ್ರೀಗಳು

ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು: ಶ್ರೀಗಳು  One should listen to good words during the month of Shravan: Sri

ಜಮಖಂಡಿ 24: ಅನ್ನ, ನೀರು ಮತ್ತು ಒಳ್ಳೆಯ ಮಾತುಗಳು ಇವು ಜಗತ್ತಿನ ಮೂರು ರತ್ನಗಳು. ಪವಿತ್ರವಾದ ಶ್ರಾವಣ ಮಾಸದಲ್ಲಿ ಒಳ್ಳೆಯ ಮಾತುಗಳನ್ನು ಕೇಳಬೇಕು. ಆದ್ದರಿಂದ ಸಮಾಜದಲ್ಲಿ ಒಳ್ಳೆಯ ಮಾತುಗಳನ್ನು ಬಿತ್ತುವ ಕಾರ್ಯವನ್ನು ಓಲೆಮಠ ಮಾಡುತ್ತಿದೆ ಎಂದು ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. 

ಶ್ರಾವಣ ಮಾಸದ ಪ್ರಯುಕ್ತ ಓಲೆಮಠದ ಆಶ್ರಯದಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲು ಸಂಜೆ ನಡೆದ ವಚನ ಶ್ರಾವಣ ಮಂಗಲೋತ್ಸವದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. 

ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕೃತಿಗೆ ಮನುಷ್ಯನಲ್ಲಿ ಪರಿವರ್ತನೆ ತರುವ ಶಕ್ತಿಸಾಮರ್ಥ್ಯವಿದೆ. ಆದ್ದರಿಂದ ಕೇಳಿದ ಮಾತುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕಗೊಳಿಸಿಗೊಳ್ಳಬೇಕು ಎಂದರು. 

ಸಿಂದಗಿ ಸಾರಂಗ ಮಠದ ಡಾ.ವಿಶ್ವಪ್ರಭು ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಧರ್ಮ ಮತ್ತು ಭಕ್ತಿ ಇದ್ದುದಕ್ಕೆ ಬಹಳಷ್ಟು ಮಠಗಳಿವೆ. ಜಮಖಂಡಿ ನಗರ ಧಾರ್ಮಿಕವಾಗಿ ಎಲ್ಲರನ್ನು ಆಕರ್ಷಿಸುತ್ತದೆ. ಪ್ರಕೃತಿ ಪ್ರೀತಿಸುವ ಜನರು ಜಮಖಂಡಿಯಲ್ಲಿ ಇದ್ದಾರೆ ಎಂದು ಆಶೀರ್ವಚನ ನೀಡಿದರು. 

ಶೂರ​‍್ಾಲಿಯ ಸಾರಂಗ ಮಠದ ಮಾತೋಶ್ರೀ ಸುನಂದಮ್ಮಾತಾಯಿ ಸಾನ್ನಿಧ್ಯ ವಹಿಸಿ ಮಾತನಾಡಿ, ಹೊಟ್ಟೆ ಹಸಿದಾಗ ಬುಟ್ಟಿಯಲ್ಲಿ ರೊಟ್ಟಿ ಇರಲಿಲ್ಲ, ಹೊಟ್ಟೆ ತುಂಬಿದಾಗ ಬುಟ್ಟಿಯಲ್ಲಿ ರೊಟ್ಟ ತುಂಬಿದ್ದವು ಎಂದು ಓಲೆಮಠದ ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳು ಹೇಳುತ್ತಿದ್ದರು ಎಂದು ಸ್ಮರಿಸಿದರಲ್ಲದೆ ಜಮಖಂಡಿಯ ಓಲೆಮಠವು ಬಸವಕಲ್ಯಾಣ ಆಗುವುದರಲ್ಲಿ ಸಂಶಯವಿಲ್ಲ ಎಂದರು. 

ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಮಾನ್ಯವಾಗಿ ಪ್ರವಚನ ಕಾರ್ಯಕ್ರಮಗಳು ಮಠದಲ್ಲಿಯೇ ನಡೆಯುವುದು ವಾಡಿಕೆ. ಆದರೆ, ಓಲೆಮಠದ ಪೂಜ್ಯರು ಪ್ರತಿ ಓಣಿ ಓಣಿಗೆ ತೆರಳಿ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ. ಜೀವನ ಹೇಗೆ ಸಾಗಿಸಬೇಕು ಎಂಬುದನ್ನು ವಚನಗಳ ಮೂಲಕ ಅರಿವು ಮೂಡಿಸಿರುವುದು ಸ್ತುತ್ಯಾರ್ಹವಾಗಿದೆ ಎಂದರು. 

ಉದ್ದಿಮೆದಾರ ಉಮೇಶ ಮಹಾಬಳಶೆಟ್ಟಿ, ಹಿರಿಯ ವಕೀಲ ಎನ್‌.ಎಸ್‌. ದೇವರವರ ಮಾತನಾಡಿದರು. ಗುರುಸಿದ್ದಯ್ಯ ಅವರವಾಡಮಠ ಆನಂದ ದೇವರು ಶ್ರೀಗಳ ಕುರಿತು ಬರೆದ ಸ್ವರಚಿತ ಕವನ ಓದಿದರು. ವಾರ್ಕರಿ ಸಂಪ್ರದಾಯದ ಸುನೀಲ ಬಾಬರ ಮಹಾರಾಜರು ಆಶೀರ್ವಚನ ನೀಡಿದರು. ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಜಾನಪದ ಹಾಡು ಹಾಡಿ ರಂಜಿಸಿದರು. ಕಸ್ತೂರಿ ಜೈನಾಪುರ ಕವನ ವಾಚನ ಮಾಡಿದರು. ಭವಾನಿ ಜಾಲಿಹಾಳ ವಚನ ನೃತ್ಯ, ಶ್ರೇಯಾ ಘಟ್ನಟ್ಟಿ ಭರತನಾಟ್ಯ, ಚಿತ್ರಕಲಾ ಶಿಕ್ಷಕಿ ಸಾನಿಯಾ ಹುನಗಂದ ಹಾಗೂ ತಂಡದವರು ಅನುಭವ ಮಂಟಪ ರೂಪಕ ಪ್ರದರ್ಶಿಸಿದರು. ವಾರ್ಕರಿ ಶಿಕ್ಷಣ ಸಂಸ್ಥೆಯ 50ಕ್ಕೂ ಹೆಚ್ಚು ವಿದ್ಯಾರ್ಥಿ ಬಳಗದಿಂದ ಪಾವುಲ ಭಜನೆ ಪ್ರದರ್ಶಿಸಿದರು. ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳ ಗದ್ದುಗೆ ಮತ್ತು ಮಂಟಪದ ನೀಲನಕ್ಷೆಯನ್ನು ಬಿಡುಗಡೆ ಮಾಡಲಾಯಿತು. 

ಕಡಪಟ್ಟಿಯ ಜಗದೀಶ್ವರ ಮಠದ ಮಾತೋಶ್ರೀ ಪ್ರಮಿಳಾತಾಯಿ, ಪವಿತ್ರವನದ ಬಿ.ಕೆ.ಭಾರತಿ ಅಕ್ಕನವರು ಸಾನ್ನಿಧ್ಯ ವಹಿಸಿದ್ದರು. ನಗರಸಭೆ ಅಧ್ಯಕ್ಷ ಈಶ್ವರ ವಾಳೆನ್ನವರ, ನಗರಸಭೆ ಸದಸ್ಯ ಪರಮಾನಂದ ಗವರೋಜಿ, ಸುಶೀಲಕುಮಾರ ಬೆಳಗಲಿ, ಡಾ.ವಿಜಯಲಕ್ಷ್ಮೀ ತುಂಗಳ, ರಾಜೇಶ್ವರಿ ಹಿರೇಮಠ, ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ವಾರದ, ನಗರಸಭೆ ಸದಸ್ಯ ದಾನೇಶ ಘಾಟಗೆ, ನರಸಿಂಹ ಕಲ್ಲೋಳ್ಳಿ, ಪೌರಾಯುಕ್ತ ಜ್ಯೋತಿ ಗೀರೀಶ ಎಸ್‌. ಕಾಡು ಮಾಳಿ, ಶಾಮರಾವ ಘಾಟಗೆ, ಡಾ.ಎಚ್‌.ಜಿ. ದಡ್ಡಿ, ರಾಜು ಗಸ್ತಿ, ಸಂತೋಷ ತಳಕೇರಿ ಇತರರು ಇದ್ದರು. 

ಗದ್ದುಗೆ ಮತ್ತು ಮಂಟಪ ನಿರ್ಮಾಣ ಸೇವೆಗೆ ರೂ.10 ಲಕ್ಷ ದೇಣಿಗೆ ನೀಡಿದ ರಾಜು ಗಸ್ತಿ, ಲಿಂ.ಡಾ.ಚೆನ್ನಬಸವ ಮಹಾಸ್ವಾಮಿಗಳ ಮೂರ್ತಿ ಸೇವೆ ಸಲ್ಲಿಸಿದ ವೀರಭದ್ರಯ್ಯಾ ಗಾರವಾಡಮಠ, ಓಲೆಮಠದ ಕಾರ್ಯಕಾರಿ ಸಮಿತಿ ಸದಸ್ಯರನ್ನು, ಓಣಿ ಓಣಿಯಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಸಂಪನ್ಮೂಲ ವ್ಯಕ್ತಿಗಳನ್ನು ಹಾಗೂ ಹಿರಿಯರನ್ನು ಸನ್ಮಾನಿಸಲಾಯಿತು. ಡಾ.ಎನ್‌.ವಿ. ಅಸ್ಕಿ ನಿರೂಪಿಸಿದರು. ಓಲೆಮಠದ ಆನಂದ ದೇವರು ಶ್ರೀಗಳು ಶರಣು ಸಮರ​‍್ಿಸಿದರು.