ಸುಲಭ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸೇವೆಗೆ ಮುಕ್ತ: ಎಡಿಸಿ ಮಹಮ್ಮದ್ ಝುಬೇರ್‌. ಎನ್‌

ಸುಲಭ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸೇವೆಗೆ ಮುಕ್ತ: ಎಡಿಸಿ ಮಹಮ್ಮದ್ ಝುಬೇರ್‌. ಎನ್‌ New UIDAI Aadhaar Seva Kendra inaugurated in Bellary

ಬಳ್ಳಾರಿಯಲ್ಲಿ ನೂತನ ಯುಐಡಿಎಐ ಆಧಾರ್ ಸೇವಾ ಕೇಂದ್ರ ಉದ್ಘಾಟನೆ

ಬಳ್ಳಾರಿ 27 :ನಗರದಲ್ಲಿ ನಿವಾಸಿ ಕೇಂದ್ರಿತ ಆಧಾರ್ ಸೇವೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಸುಲಭ ಸೌಲಭ್ಯಗಳೊಂದಿಗೆ ಸಾರ್ವಜನಿಕ ಸೇವೆ ಒದಗಿಸಲು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದಿಂದ ನೂತನ ಆಧಾರ್ ಕೇಂದ್ರ ಆರಂಭಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್‌.ಎನ್ ಅವರು ಹೇಳಿದರು.

ಬೆಂಗಳೂರಿನ ಯುಐಡಿಎಐ ಪ್ರಾದೇಶಿಕ ಕಚೇರಿ ವತಿಯಿಂದ ನಗರದ ನೇತಾಜಿ ನಗರದಲ್ಲಿ ಬುಧವಾರ ನೂತನ ಯುಐಡಿಎಐ ಆಧಾರ್ ಸೇವಾ ಕೇಂದ್ರ ಅಧಿಕೃತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.ಬಳ್ಳಾರಿಯ ಈ ನೂತನ ಕೇಂದ್ರವು ಆಧುನಿಕ ಸೌಕರ್ಯಗಳನ್ನು ಹೊಂದಿದ್ದು, ಸಾರ್ವಜನಿಕರಿಗೆ ಒಂದೇ ಸೂರಿನಡಿ ಹಲವು ಸೇವೆಗಳನ್ನು ಒದಗಿಸಲಿದೆ. ಈ ಕೇಂದ್ರವು ಸಾರ್ವಜನಿಕರಿಗೆ ಸುಲಭವಾಗಿ ಸೇವೆಗಳನ್ನು ಒದಗಿಸಲು 4 ಕಾರ್ಯಾಚರಣಾ ಕಿಟ್ಗಳನ್ನು ಹೊಂದಿರುವ ‘ಮಾದರಿ-ಸಿ’ ಮಾದರಿಯ ಕೇಂದ್ರವಾಗಿದೆ. ಇಲ್ಲಿ ಹೊಸ ಆಧಾರ್ ದಾಖಲಾತಿ, ಜನಸಂಖ್ಯಾ ವಿವರಗಳ (ಹೆಸರು, ವಿಳಾಸ ಇತ್ಯಾದಿ) ನವೀಕರಣ, ಬಯೋಮೆಟ್ರಿಕ್ ನವೀಕರಣಗಳು, ದೋಷ ತಿದ್ದುಪಡಿ ಹಾಗೂ ಆಧಾರ್ಗೆ ಸಂಬಂಧಿಸಿದ ಕುಂದುಕೊರತೆಗಳ ಪರಿಹಾರ ಸೇವೆಗಳು ಲಭ್ಯವಿರಲಿವೆ ಎಂದು ತಿಳಿಸಿದರು.ಸಾರ್ವಜನಿಕ ರಜಾದಿನಗಳನ್ನು ಹೊರತುಪಡಿಸಿ, ಈ ಕೇಂದ್ರವು ವಾರದ ಎಲ್ಲಾ ದಿನಗಳಲ್ಲೂ ಸಾರ್ವಜನಿಕರಿಗಾಗಿ ತೆರೆದಿರುತ್ತದೆ. ಯುಐಡಿಎಐ ನೇರ ಉಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವ ಈ ಕೇಂದ್ರವನ್ನು ಸಂಪೂರ್ಣವಾಗಿ ನಿವಾಸಿ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ವೀಲ್ಚೇರ್ ಪ್ರವೇಶ (ರ್ಯಾಂಪ್), ಪ್ರತ್ಯೇಕ ವಿಶ್ರಾಂತಿ ಕೊಠಡಿಗಳು ಮತ್ತು ಮೀಸಲಾದ ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳನ್ನು ಇಲ್ಲಿ ಅಳವಡಿಸಲಾಗಿದೆ. ಪ್ರತಿಯೊಂದು ಆಧಾರ್ ಸೇವಾ ಕೇಂದ್ರವನ್ನು ಯುಐಡಿಎಐ ಎಎಸ್ಕೆ ವ್ಯವಸ್ಥಾಪಕರು ನಿರ್ವಹಿಸಲಿದ್ದು, ಸಾರ್ವಜನಿಕರಿಂದ ಬರುವ ದೂರು ಹಾಗೂ ಕುಂದುಕೊರತೆಗಳನ್ನು ಸ್ವೀಕರಿಸಿ, ಅವುಗಳನ್ನು ಸಕಾಲದಲ್ಲಿ ಪರಿಹರಿಸಲು ಶ್ರಮಿಸಲಿದ್ದಾರೆ ಎಂದರು.

ಬಳಿಕ ಕೇಂದ್ರದ ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಆಧಾರ್ ಸೇವೆಗಳನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಿಲ್ಲದೆ ಪರಿಣಾಮಕಾರಿಯಾಗಿ ಒದಗಿಸಲು, ಪ್ರಸ್ತುತ ಅನುಸರಿಸಲಾಗುತ್ತಿರುವ ಆಧಾರ್ ದಾಖಲಾತಿ ಮತ್ತು ನವೀಕರಣ ಕಾರ್ಯವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು.ಯುಐಡಿಎಐ ಬೆಂಗಳೂರು ಪ್ರಾದೇಶಿಕ ಕಚೇರಿಯ ಉಪನಿರ್ದೇಶಕ ಗುಲ್ಶನ್ ಕುಮಾರ್ ಸಿಂಗ್ ಅವರು ಮಾತನಾಡಿ, ಕಳೆದ ವಾರದಲ್ಲಿ ರಾಜ್ಯದ ವಿಜಯಪುರ ಮತ್ತು ಬೀದರ್ನಲ್ಲಿ ಎರಡು ಹೊಸ ಕೇಂದ್ರಗಳನ್ನು ಉದ್ಘಾಟಿಸಲಾಯಿತು. ಈ ಮೂಲಕ ರಾಜ್ಯದಲ್ಲಿ ಒಟ್ಟು 7 ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು. ಈಗ ಬಳ್ಳಾರಿಯಲ್ಲಿ ಆರಂಭವಾಗಿರುವ ಹೊಸ ಕೇಂದ್ರವು ಕರ್ನಾಟಕದ 8 ನೇ ಅಧಿಕೃತ ಆಧಾರ್ ಸೇವಾ ಕೇಂದ್ರವಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಒಟ್ಟು 16 ಹೊಸ ಆಧಾರ್ ಸೇವಾ ಕೇಂದ್ರಗಳನ್ನು ತೆರೆಯಲು ಯುಐಡಿಎಐ ಯೋಜಿಸಿದೆ. ಆ ಮೂಲಕ ಸೆಪ್ಟೆಂಬರ್ ವೇಳೆಗೆ ಕರ್ನಾಟಕದಲ್ಲಿ ಒಟ್ಟು ಯುಐಡಿಎಐ ಎಎಸ್ಕೆ ಕೇಂದ್ರಗಳ ಸಂಖ್ಯೆಯನ್ನು 24ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ಆಧಾರ್ ಸೇವೆಗಳಿಗಾಗಿ ಕೇಂದ್ರದಲ್ಲಿ ಸುದೀರ್ಘ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್ಲೈನ್ ಮೂಲಕ ಮುಂಗಡ ಅಪಾಯಿಂಟ್ಮೆಂಟ್ ಬುಕ್ ಮಾಡುವ ಸೌಲಭ್ಯವನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ಯುಐಡಿಎಐನ ಅಧಿಕೃತ ಪೋರ್ಟಲ್  https://bookappointment.uidai.gov.in/ ಗೆ ಭೇಟಿ ನೀಡಿ ಸಮಯ ಕಾಯ್ದಿರಿಸಬಹುದು. ಜೊತೆಗೆ, 5 ರಿಂದ 17 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಮಾಡಿಸಬೇಕಾದ ಬಯೋಮೆಟ್ರಿಕ್ ನವೀಕರಣಗಳನ್ನು ಸೆಪ್ಟೆಂಬರ್ 2026 ರವರೆಗೆ ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದೆ.

ಈ ಸೌಲಭ್ಯವು ಆಧಾರ್ ಸೇವಾ ಕೇಂದ್ರಗಳಲ್ಲದೆ, ಆಯಾ ಶಾಲೆಗಳಲ್ಲಿ ಆಯೋಜಿಸಲಾಗುವ ವಿಶೇಷ ಶಿಬಿರಗಳ ಮೂಲಕವೂ ಲಭ್ಯವಿರಲಿದೆ ಎಂದು ವಿವರಿಸಿದರು.ಭಾರತ ಸರ್ಕಾರದ ಡಿಜಿಟಲ್ ಸೇರೆ​‍್ಡ ಮತ್ತು ಉತ್ತಮ ಆಡಳಿತದ ದೃಷ್ಟಿಕೋನಕ್ಕೆ ಅನುಗುಣವಾಗಿ ಬಳ್ಳಾರಿಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ಸಾರ್ವಜನಿಕರ ಜೀವನವನ್ನು ಸುಗಮಗೊಳಿಸುವುದಲ್ಲದೆ, ಡಿಜಿಟಲ್ ಆಡಳಿತವನ್ನು ಬಲಪಡಿಸಲು ಮತ್ತು ಜನರಿಗೆ ಪರಿಣಾಮಕಾರಿ, ನಿವಾಸಿ ಕೇಂದ್ರಿತ ಆಧಾರ್ ಸೇವೆಗಳನ್ನು ತಲುಪಿಸುವ ಯುಐಡಿಎಐನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದರು.ಈ ವೇಳೆ ಯುಐಡಿಎಐ ಪ್ರಾದೇಶಿಕ ಕಚೇರಿಯ ಸಹಾಯಕ ವ್ಯವಸ್ಥಾಪಕ ಪ್ರಸಾದ್ ಬಾಬು, ಆಧಾರ್ ಕೇಂದ್ರದ ಸಿಬ್ಬಂದಿ ಹಾಗೂ ಸೇವಾ ಪೂರೈಕೆದಾರರಾದ ಎಂ/ಎಸ್ ಬಿಎಲ್‌ಎಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.