ಕಲಾದಗಿ 26: ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆ ಮೂಡಿಸುವುದಕ್ಕೆ, ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾಗಿ ಎನ್ಎಸ್ಎಸ್ ಶಿಬಿರ ನಡೆಯುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ಇದರ ಅನುಭವ ಪಡೆದುಕೊಳ್ಳಬೇಕೆಂದು ಶಾಸಕ ಜಿ.ಟಿ.ಪಾಟೀಲ ಹೇಳಿದರು. ಸಮೀಪದ ತುಳಸಿಗೇರಿ ಗ್ರಾಮದ ಕುವೆಂಪು ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಲಾದಗಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ 2024-25 ನೇ ಸಾಲಿನ ಎಸ್ ಎಸ್ ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಶಿಕ್ಷಣದೊಂದಿಗೆ ಸಮುದಾಯದ ಪರಿಚಯ, ಸೇವೆ ಮೂಲಕ ಸ್ವಚ್ಛತೆ ಅರಿವು, ನಮ್ಮಲ್ಲಿನ ಸಂಸ್ಕೃತಿ ಪ್ರದರ್ಶನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, ಸಹ ಭೋಜನ, ಕ್ರಿಡೆ ಮೂಲಕ ಸಮಗ್ರತೆ ಪರಿಕಲ್ಪನೆ ಹೀಗೆ ಹಲವು ಚಿಂತನೆ ಸಾಕಾರಕ್ಕಾಗಿ ಶಿಬಿರ ನಡೆಯುತ್ತದೆ. ಅದನ್ನು ಅರ್ಥ ಮಾಡಿಕೊಂಡು ಎಲ್ಲ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕೆಂದರು.
ದೈಹಿಕ ಶಿಕ್ಷಕರಾದ ಸಿ.ಕೆ.ಚೆನ್ನಾಳ , ಪತ್ರಕರ್ತರಾದ ದ.ರಾ.ಪುರೋಹಿತ, ಎಸ್.ಎಸ್ .ದಾಸನ್ನವರ, ಗೋಪಾಲ ದೊಡಮನಿ, ಹಣಮಂತ ಹೊಸಕೋಟಿ ಮಾತನಾಡಿ, ಎನ್ ಎಸ್ ಎಸ್ ಶಿಬಿರಾರ್ಥಿಗಳು ಸಮಾಜ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ಸ್ವಚ್ಚತೆ, ಶಿಸ್ತು, ಸಯಂಮ ರೂಡಿಸಿಕೊಳ್ಳಬೇಕು. ಸಮಾಜಕ್ಕೆ ಒಳ್ಳೆಯದಾಗುವ ಪರಿಕಲ್ಪನೆ ಇಟ್ಟುಕೊಂಡು ಗ್ರಾಮೀಣಾಭಿವೃದ್ದಿಗೆ ತೊಡಗಬೇಕೆಂದು ಕಿವಿ ಮಾತು ಹೇಳಿದರು. ಪ್ರಾಚಾರ್ಯ ಎಚ.ಬಿ.ಮಹಾಂತೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯು, ಯುವ ಜನತೆಗೆ ವೇದಿಕೆಯನ್ನು ನಿರ್ಮಿಸಿಕೊಡುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುತ್ತದೆ. ಎಲ್ಲರೂ ಇದರಲ್ಲಿ ತೊಡಗಿಕೊಳ್ಳುವ ಮೂಲಕ ಶಿಬಿರ ಯಶಸ್ವಿಗೊಳಿಸಬೇಕೆಂದರು. ಎನ್ ಎಸ್ ಎಸ್ ಶಿಬಿರಾಧಿಕಾರಿಗಳಾದ ಡಾ.ಬಿಂದು ಎಚ್.ಎಂ ಪ್ರಾಸ್ತಾವಿಕ ಮಾತನಾಡಿದರು.
ಪ್ರಾಧ್ಯಾಪಕರಾದ ಡಾ.ಸರೋಜಿನಿ ಹೊಸಕೇರಿ, ಡಾ.ಯಲ್ಲಪ್ಪ ಜಿ, ಅರ್ಜುನ ನಾಯಕ, ಶ್ರೀದೇವಿ ಮುಂಡಗನೂರ, ಸಿ.ವಾಯ್.ಮೆಣಸಿನಕಾಯಿ, ಮೌಲಾಸಾಬ ಮುಲ್ಲಾ, ಶ್ರೀಮತಿ ಪಾರ್ವತಿ ತಂಬಾಕೆ, ರಂಗಪ್ಪ ಶಿರಗುಂಪಿ ಉಪಸ್ಥಿತರಿದ್ದರು. ಡಾ.ಲೋಕಣ್ಣ ಭಜಂತ್ರಿ ಸ್ವಾಗತಿಸಿದರು. ಡಾ.ಪುಂಡಲೀಕ ಹುನ್ನಳ್ಳಿ ನಿರೂಪಿಸಿದರು.ಕು.ಯಂಕಮ್ಮ ವಂದಿಸಿದರು.