ಮಣ್ಣಿನಡಿ ಸಿಲುಕಿ ಮೃತ: ಶಾಸಕರಿಂದ 2ಲಕ್ಷ ಪರಿಹಾರ

Man dies after being trapped under mud: MLA offers Rs 2 lakh compensation

ಹಾನಗಲ್ 29: ತಡೆಗೋಡೆ ನಿರ್ಮಿಸಲು ಪಾಯ ತೆಗೆಯುತ್ತಿದ್ದ ಸಂದರ್ಭದಲ್ಲಿ ಮಣ್ಣು ಕುಸಿದು ಸಾವನ್ನಪ್ಪಿದ ಕಾರ್ಮಿಕರೊಬ್ಬರ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ. 2 ಲಕ್ಷ ಪರಿಹಾರದ ಚೆಕ್ ಅನ್ನು ಶಾಸಕ ಶ್ರೀನಿವಾಸ ಮಾನೆ ವಿತರಿಸಿದರು. 

ಕೊಡಗು ಜಿಲ್ಲೆಯ ಮಡಿಕೇರಿಯ ಸ್ಟುವರ್ಟ್‌ ಹಿಲ್ ಎಂಬ ಪ್ರದೇಶದಲ್ಲಿ ತಡೆಗೋಡೆ ನಿರ್ಮಿಸುವ ಉದ್ದೇಶದಿಂದ ಪಾಯ ಅಗೆಯುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಶೃಂಗೇರಿ ಗ್ರಾಮದ ಆನಂದ ಮಲಗುಂದ ಎಂಬ ಕಾರ್ಮಿಕ ಮಣ್ಣು ಕುಸಿದ ಪರಿಣಾಮ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಮೂಲತಃ ಹಾನಗಲ್ ತಾಲೂಕಿನ ಶೃಂಗೇರಿ ಗ್ರಾಮದ ಕಾರ್ಮಿಕ ಆನಂದ ಮಲಗುಂದ ಕೆಲಸ ಅರಸಿ ಮಡಿಕೇರಿಗೆ ತೆರಳಿದ್ದರು. ಅಲ್ಲಿ ದುರ್ಘಟನೆ ಸಂಭವಿಸಿ ಮೃತಪಟ್ಟಿದ್ದರು.ಮೃತ ಕಾರ್ಮಿಕನ ತಾಯಿ ಹಿರಗವ್ವ ಬಸಪ್ಪ ಮಲಗುಂದ ಅವರಿಗೆ ಶಾಸಕ ಮಾನೆ ಪರಿಹಾರದ ಚೆಕ್ ಹಸ್ತಾಂತರಿಸಿದರು. ತಹಶೀಲ್ದಾರ್ ರೇಣುಕಾ ಎಸ್‌. ಇದ್ದರು.