ವಿಶೇಷ ಮಕ್ಕಳನ್ನು ಸ್ವಾವಲಂಬಿಯಾಗಿಸಿ: ಡಾ.ಬಿಜ್ಜಳ

Make special children self-reliant: Dr. Bijjala

ಗದಗ  12:  ವಿಶೇಷ ಲಾಲನೆ, ಪೋಷಣೆ ಅಗತ್ಯವುಳ್ಳ ಮಕ್ಕಳಿಗೆ ಕಲಿಕಾ ಕೇಂದ್ರದ ಜತೆಗೆ ಪಾಲಕರಾದವರೂ ಕೂಡ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮವಹಿಸಬೇಕು. ಇದಕ್ಕಾಗಿ ಸಮಯ ಮೀಸಲಿಟ್ಟು, ಅಗತ್ಯ ಚಿಕಿತ್ಸೆ, ವಿವಿಧ ವ್ಯಾಯಾಮಗಳ ಮೂಲಕ ಅವರನ್ನು ಸ್ವಾವಲಂಬಿಯಾಗಿ ಬದುಕುವಂತೆ ಪ್ರೇರೇಪಿಸಬೇಕು ಎಂದು ಜಿಮ್ಸ್‌ನ ಮನೋವೈದ್ಯಾಧಿಕಾರಿ ಡಾ.ಸೋಮಶೇಖರ ಬಿಜ್ಜಳ ಹೇಳಿದರು. 

 ಅವರು ಇಲ್ಲಿನ ಮುಳಗುಂದ ನಾಕಾ ಸಮೀಪದ ಬಿ ಡಿ ತಟ್ಟಿ (ಅಣ್ಣಾವರು) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ ಆಶ್ರಯದಲ್ಲಿ ನಡೆಯುತ್ತಿರುವ ‘ಏಕ್ ಪ್ರಯಾಸ್ ವಿಶೇಷ ಮಕ್ಕಳ ಕಲಿಕಾ ಕೇಂದ್ರ’ದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಮಕ್ಕಳಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆ, ಅವರನ್ನು ವಿವಿಧ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮನೆಯ ಪ್ರತಿಯೊಬ್ಬ ಸದಸ್ಯರೂ ಸಹಕಾರ ನೀಡಬೇಕು. ಇದು ನಿತ್ಯ ನಿರಂತರವಾಗಿ ನಡೆದಾಗ ಮಾತ್ರ ಮುಂದೊಂದು ದಿನ ಆ ಮಗು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು. 

ಲಯನ್ಸ್‌ ಕ್ಲಬ್‌ನ ಗವರ್ನರ್   ಸುಗ್ಗಲಾ ಯಳಮಲಿ ಅವರು ಮಾತನಾಡಿ, ಇಂತಹ ವಿಶೇಷ ಅಗತ್ಯಯತೆಯುಳ್ಳ ಮಕ್ಕಳ ಆರೋಗ್ಯ ತಪಾಸಣೆಗಾಗಿ ಜಿಮ್ಸ್‌ ಆಸ್ಪತ್ರೆಯಲ್ಲಿ ಒಂದು ಪ್ರತ್ಯೇಕ ಸಮಯ, ದಿನ ನಿಗದಿಪಡಿಸಬೇಕು. ಅದರಲ್ಲೂ ವಿಶೇಷವಾಗಿ ನಿಯಮಿತವಾಗಿ ವೈದ್ಯರ ತಂಡವೇ ಇಂತಹ ಕೇಂದ್ರ ಗಳಿಗೆ ಆಗಮಿಸಿ, ತಪಾಸಣೆ ನಡೆಸುವಂತಾಗಬೇಕು ಎಂದರು. 

ಜಯಂತಿಲಾಲ್ ಕವಾಡ್ ಅವರು ಮಾತನಾಡಿ, ವಿಶೇಷ ಮಕ್ಕಳಿಗೆ ಅಗತ್ಯವಿರುವ ರಾಗಿ ಹಿಟ್ಟನ್ನು ತಾವು ಪ್ರತಿ ತಿಂಗಳೂ ಉಚಿತವಾಗಿ ನೀಡುವುದಾಗಿ ಹೇಳಿ, ಮಕ್ಕಳ ಉತ್ತಮ ಆರೋಗ್ಯಕ್ಕೆ ನೈಸರ್ಗಿಕ, ಸಾವಯವ ಆಹಾರದ ಮಹತ್ವ ತಿಳಿಸಿದರು. 

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗದಗ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಐಡಿಎಫ್‌ಸಿ  ಬ್ಯಾಂಕ್‌ನ ಮುಂಬಯಿ ಶಾಖೆ ವ್ಯವಸ್ಥಾಪಕ ರವಿ ಸಾಕರೆ, ಗದಗ ಶಾಖೆಯ ಶಿವಾನಂದ ಹಂದ್ರಾಳ, ಗದಗ ಶಹರ ಠಾಣೆ ಪಿಎಸ್‌ಐ ಶ್ರೀಮತಿ ಆರ್‌.ಎಸ್‌. ಮುಂಡೇವಾಡಿ ಸೇರಿ ಹಲವರು ವೇದಿಕೆಯಲ್ಲಿದ್ದರು. 

ಕಾರ್ಯಕ್ರಮ ವ್ಯವಸ್ಥಾಪಕ ಸಾಗರ ಸಿ ಪೂಜಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಿಕಾ ಕೇಂದ್ರದ ಮುಖ್ಯ ಶಿಕ್ಷಕ ಮಂಜಪ್ಪ ಇಟಗಿ ಕಾರ್ಯಕ್ರಮ ನಿರೂಪಿಸಿದರು,  ಗೀತಾ ಮೇಟಿ ವಂದಿಸಿದರು. 

ಮಗು ಮತ್ತು ತಾಯಿಗೆ ಸಸಿ ವಿತರಣೆ 

ಗದಗ: ಬಿ ಡಿ ತಟ್ಟಿ (ಅಣ್ಣಾವರು) ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್‌ ಆಶ್ರಯದಲ್ಲಿ ನಡೆಯುತ್ತಿರುವ ‘ಏಕ್ ಪ್ರಯಾಸ್ ವಿಶೇಷ ಮಕ್ಕಳ ಕಲಿಕಾ ಕೇಂದ್ರ’ದಲ್ಲಿ ಗುರುವಾರ ಆಯೋಜಿಸಿದ್ದ ‘ವಿಶ್ವ ಪರಿಸರ ದಿನಾಚರಣೆಯಲ್ಲಿ ಭಾಗವಹಿಸಿದ್ದ ವಿಶೇಷ ಚೇತನ ಮಗು ಮತ್ತು ಆ ಮಗುವಿನ ತಾಯಿಗೆ ತಲಾ ಒಂದೊಂದು ಸಸಿ ನೀಡಿದ್ದು ಗಮನ ಸೆಳೆಯಿತು. 

ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಯುಳ್ಳ ಮಕ್ಕಳಿಗೆ ಅಗತ್ಯ ನೆರವು ನೀಡಲು ಕೇಂದ್ರ ಸರ್ಕಾರವು ಯೋಜನೆ ರೂಪಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರವು ಮಕ್ಕಳ ಲಾಲನೆ-ಪೋಷಣೆ ಮಾಡುವ ತಾಯಂದಿರು ಅಥವಾ ಪೋಷಕರಿಗಾಗಿಯೇ ಪ್ರತ್ಯೇಕವಾಗಿ ಮಾಸಿಕ ಭತ್ಯೆ ನೀಡುವ ಯೋಜನೆ ಜಾರಿಗೊಳಿಸಿದ್ದು, ಅದರ ಸುಪಯೋಗದ ಮೂಲಕ ಮಕ್ಕಳನ್ನು ಅಗತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. 

-ಡಾ.ಸೋಮಶೇಖರ ಬಿಜ್ಜಳ, ಮನೋವೈದ್ಯಾಧಿಕಾರಿ, ಜಿಮ್ಸ್‌ 

ಲಯನ್ಸ್‌ ಕ್ಲಬ್ ಸಮಾಜ ಸೇವೆ ಮಾಡುವ ಒಂದು ಸಂಸ್ಥೆ. ಈ ಸಂಸ್ಥೆಯು ಇಂತಹ ವಿಶೇಷ ಲಾಲನೆ, ಪೋಷಣೆ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣ ನೀಡುವ ಸಂಸ್ಥೆಗೆ ಕ್ಲಬ್‌ನ ಯೋಜನೆಯೊಂದರ ಮೂಲಕ ‘ಕಿಚನ್ ಸೆಟ್‌’ ಉಪಕರಣಗಳನ್ನು ನೀಡುವ ಅವಕಾಶವಿದ್ದು, ಅದನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. 

-ಸುಗ್ಗಲಾ ಯಳಮಲಿ, ಗವರ್ನರ್, ಲಯನ್ಸ್‌ ಕ್ಲಬ್