ಮಹರ್ಷಿ ವಾಲ್ಮೀಕಿ ಜಯಂತಿ : ಅದ್ದೂರಿ ಭಾವಚಿತ್ರದ ಮೆರವಣಿಗೆ

ಮಹರ್ಷಿ ವಾಲ್ಮೀಕಿ ಜಯಂತಿ : ಅದ್ದೂರಿ ಭಾವಚಿತ್ರದ ಮೆರವಣಿಗೆ Maharishi Valmiki Jayanti: A grand portrait procession

ಲೋಕದರ್ಶನ ವರದಿ 

ಮಹರ್ಷಿ ವಾಲ್ಮೀಕಿ ಜಯಂತಿ : ಅದ್ದೂರಿ ಭಾವಚಿತ್ರದ ಮೆರವಣಿಗೆ 

ವಾಲ್ಮೀಕಿಯವರ ಆದರ್ಶಗಳು ಇಂದಿಗೂ ಪ್ರಸ್ತುತ : ತಿಮ್ಮಾಪೂರ 

ಬಾಗಲಕೋಟೆ 07: ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣದಲ್ಲಿ ಬರುವಂತಹ ಆದರ್ಶ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು. 

ನವನಗರದಲ್ಲಿರುವ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವಾಲ್ಮೀಕಿಯವರ ಭಾವಚಿತ್ರಕ್ಕೆ ಪುಷ್ಪ ಅರ​‍್ಿಸಿ ಮಾತನಾಡಿದ ಅವರು ಮಹಾಕಾವ್ಯ ರಾಮಾಯಣದಲ್ಲಿ ಬರುವಂತಹ  ಸಹೋದರರ ಪ್ರೀತಿ, ತಂದೆ-ತಾಯಿಯರ ಬಗ್ಗೆ ಇರುವ ಗೌರವ, ಗುರುಶಿಷ್ಯರ ಸಂಬಂಧ ಸೇರಿದಂತೆ ಹತ್ತು ಹಲವು ಮೌಲ್ಯಗಳು ಇಂದಿಗೂ ಪ್ರಚಲಿತದಲ್ಲಿವೆ ಎಂದರು. 

ಮನುಷ್ಯರನ್ನು ಮನುಷ್ಯರಂತೆ ಕಾಣುವ ಭಾವನೆಗಳು ಬರಬೇಕಿದೆ. ಅಂದಿನ ಮಹಾಪುರುಷರು ಈ ಭೂಮಿಗೆ ಬರದೇ ಇದ್ದರೆ ನಮ್ಮ ಬದುಕಿನ ಚಿತ್ರ ಹೇಗೆ ಇರುತ್ತದೆ ಎಂಬುದನ್ನು ಊಹೆ ಮಾಡಲು ಸಾದ್ಯವಾಗುತ್ತಿರಲಿಲ್ಲವೆಂದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲಗಲಿ ಬೇಡರ ಬ್ರಿಟೀಷರ ವಿರುದ್ದ ಬಂಡಾಯದ ಕಹಳೆ ಮೊಳಗಿಸಿರುವುದು ಇಂದಿಗೂ ರಾಷ್ಟ್ರ, ರಾಜ್ಯ ಹಾಗೂ ಬಾಗಲಕೋಟೆ ಇತಿಹಾಸದಲ್ಲಿ ನೆನಪಿಸಿಕೊಳ್ಳುವ ಸಂಗತಿಯಾಗಿದೆ. ಇದೇ ಅಕ್ಟೋಬರ 17 ರಂದು ಮುಧೋಳದಲ್ಲಿ ಜಿಡಗಣ್ಣ ಬಾಳಣ್ಣನವರ ಮೂರ್ತಿಯ ಪ್ರತಿಷ್ಟಾಪನೆಯನ್ನು ಮಾಡಲಾಗುತ್ತಿದೆ. ಸಚಿವರಾದ ಸತೀಶ ಜಾರಕಿಹೊಳೆ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.   

ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ತಿಳಿಸುವ ಕೆಲಸ ಮಹರ್ಷಿ ವಾಲ್ಮೀಕಿಯವರು ಮಾಡಿದ್ದಾರೆ. ನಮ್ಮ ಜೀವನದಲ್ಲಿ ಹಲವು ಸಂದರ್ಭಗಳಲ್ಲಿ ತಪ್ಪುಗಳನ್ನು ಮಾಡುವುದು ಸಹಜ. ಆ ತಪ್ಪುಗಳನ್ನು ತಿದ್ದಿಕೊಂಡು ಮಾನವರಾಗಿ ಬಾಳಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕಾದರೆ ರಾಯಾಯಣದಲ್ಲಿ ಬರುವಂತಹ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯವೆಂದರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥವನ್ನು ಕೊಟ್ಟವರು ವಾಲ್ಮೀಕಿ. ಭಾರತ ದೇಶ ಸಾದು ಸಂತರು, ಋಷಿ, ಮುನಿಗಳು, ಮಹರ್ಷಿಗಳು ಹುಟ್ಟಿದಂತ ಭೂಮಿಯಾಗಿದ್ದು, ಈ ಭೂಮಿಯಲ್ಲಿ ಮೇಲು-ಕೀಳು ಎಂಬುದಿಲ್ಲ. ಇದನ್ನು ಹೋಗಲಾಡಿಸುವ ಕಾರ್ಯವಾಗಬೇಕಿದೆ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎ.ವಾಯ್‌.ಮೇಟಿ ಮಾತನಾಡಿ ವಾಲ್ಮೀಕಿಯವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ಸಾಮಾಜಿಕವಾಗಿ, ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಮ್ಮ ಗೊರೇಬಾಳ ಅವರು ಮಾತನಾಡಿ ರತ್ನಾಕರ ಮಹರ್ಷಿಯಾದ ಪರಿಯನ್ನು ತಿಳಿಸುತ್ತಾ, ಬದುಕಿಗೆ ಬೇಕಾದ ಎಲ್ಲ ಮಾನವೀಯ ಮೌಲ್ಯಗಳು ರಾಮಾಯಣದಂತಹ ಗ್ರಂಥದಲ್ಲಿ ಒಳಗೊಂಡಿದೆ ಎಂದರು. ನಾಟಕ, ನೃತ್ಯದ ಕಲ್ಪಣೆ ಸಹ ರಾಮಾಯಣದಿಂದ ಬಂದಿದ್ದು ಎಂದರು. 

ಈ ಸಂದರ್ಭದಲ್ಲಿ ಪ್ರತಿಭಾನ್ವಿತ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಸವಿತಾ ಲೆಂಕನ್ನವರ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅನೀಲಕುಮಾರ ದಡ್ಡಿ, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಓ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ತಾಲೂಕಾ ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಸ್‌.ಎಂ.ರಾಂಪೂರ ಸೇರಿದಂತೆ ಸಮುದಾಯದ ಮುಖಂಡರಾದ ದ್ಯಾಮಣ್ಣ ಗಾಳಿ, ಮಲ್ಲಿಕಾರ್ಜುನ ಸುರಪುರ, ಸುಭಾಸ ಗಸ್ತಿ, ಶಂಭುಗೌಡ ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. 

ಪ್ರತಿಭಾ ಪುರಸ್ಕಾರ 

ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಪ್ರೀತಿ ರಮೇಶ ಭಾವಿಕಟ್ಟಿಗೆ ಜಿಡಗಣ್ಣ ಮತ್ತು ಬಾಲಣ್ಣ ಅವರ ಹೆಸರಿನಲ್ಲಿ ನೀಡುವ ಪ್ರೋತ್ಸಾಹಧನದ ಚೆಕ್‌ನ್ನು ವಿತರಿಸಿ ಪುರಸ್ಕರಿಸಲಾಯಿತು.  


ವಾಲ್ಮೀಕಿಯವರ ಭಾವಚಿತ್ರದ ಅದ್ದೂರಿ ಮೆರವಣಿಗೆ 

ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡಗೊಂದಿಗೆ ಹೊರಟ ಮೆರವಣಿಗೆ ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಎಲ್‌.ಐ.ಸಿ ಕಚೇರಿ, ಎಸ್‌.ಪಿ ಕಚೇರಿ ಮುಖಾಂತರ ವಾಲ್ಮೀಕಿ ಭವನಕ್ಕೆ ಮುಕ್ತಾಯಗೊಂಡಿತು. ಮೆರವಣಿಗೆಯಲ್ಲಿ ಪೂರ್ಣಕುಂಬ ಹೊತ್ತ ಮಹಿಳೆಯರು ಆಕರ್ಷಣೀಯ ಕೇಂದ್ರ ಬಿಂದು ಆಗಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಮುದಾಯ ಭಾಂದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.