150 ದ್ವಿಚಕ್ರ ವಾಹನ ವಿತರಿಸಿದ ಶಾಸಕ ಬಿ.ನಾಗೇಂದ್ರ

150 ದ್ವಿಚಕ್ರ ವಾಹನ ವಿತರಿಸಿದ ಶಾಸಕ ಬಿ.ನಾಗೇಂದ್ರ MLA B. Nagendra distributed 150 two-wheelers

ಬಳ್ಳಾರಿ 21: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ 2022-23 ನೇ ಸಾಲಿನ ಸಚಿವರ ವಿಶೇಷ ಅನುದಾನದಡಿ ದ್ವಿಚಕ್ರ ವಾಹನ ವಿತರಣೆ ಯೋಜನೆಯಡಿ ಆಯ್ಕೆಯಾದ 150 ಫಲಾನುಭವಿಗಳಿಗೆ ಬಳ್ಳಾರಿ ತಾಲ್ಲೂಕು ಪಂಚಾಯತ್ ಕಾರ್ಯಾಲಯದ ಆವರಣದಲ್ಲಿ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ದ್ವಿಚಕ್ರ ವಾಹನಗಳನ್ನು ಸೋಮವಾರ ವಿತರಿಸಿದರು. 

ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಿ, ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಒತ್ತು ನೀಡುವ ಮೂಲಕ ನಮ್ಮ ಸರ್ಕಾರ ದೇಶದಲ್ಲಿಯೇ ಮಾದರಿ ಸರ್ಕಾರವಾಗಿದೆ ಎಂದು ಹೇಳಿದರು.  

ಗ್ಯಾರಂಟಿ ಯೋಜನೆಗಳಾದ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಮತ್ತು ಯುವನಿಧಿಗಳ ಮೂಲಕ ವಾರ್ಷಿಕವಾಗಿ ಸುಮಾರು 62 ಸಾವಿರ ಕೋಟಿ ರೂ. ಅನುದಾನ ಜನರಿಗೆ ನೀಡಲಾಗುತ್ತಿದೆ. ಜನರೇ ಮೆಚ್ಚಿ ಹೊಗಳುವಂತಹ ಕೆಲಸಕ್ಕೆ ಇತ್ತೀಚೆಗೆ ವಿಜಯನಗರ ಜಿಲ್ಲೆಯಲ್ಲಿ ಆಯೋಜಿಸಿದ್ದ ಸಾಧನಾ ಸಮಾವೇಶ ಕಾರ್ಯಕ್ರಮವೇ ಸಾಕ್ಷಿಯಾಗಿತ್ತು ಎಂದರು.  

ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತಿವೆ. ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿರುವ ಗಾಂಜಾ ಮಾರಾಟ, ಜೂಜು ದಂಧೆಗಳಿಗೆ ಕಡಿವಾಣ ಹಾಕಲು ಈಗಾಗಲೇ ನಮ್ಮ ಸರ್ಕಾರದಿಂದ ‘ಮನೆ-ಮನೆಗೆ ಪೊಲೀಸ್‌’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದ್ದು, ಜಿಲ್ಲೆಯಲ್ಲಿಯೂ ಸಹ ಹಂತ-ಹಂತವಾಗಿ ಅನುಷ್ಠಾನಗೊಳಿಸಲಾಗುವುದು. ಎಲ್ಲಾ ವರ್ಗದವರನ್ನು ಮುನ್ನಲೆಗೆ ತರುವಂತಹ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದರು.  

ಈ ವೇಳೆ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಬಳ್ಳಾರಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಗೋನಾಳ್ ಎಂ.ನಾಗಭೂಷಣ ಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜು, ಬಳ್ಳಾರಿ ತಾಲ್ಲೂಕು ಅಧಿಕಾರಿ ಗಾದಿಲಿಂಗಪ್ಪ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ, ಬಳ್ಳಾರಿ ತಾಲ್ಲೂಕು ವ್ಯವಸ್ಥಾಪಕ ರೇವಣ್ಣ ಸಿದ್ದಪ್ಪ, ಬಳ್ಳಾರಿ ತಾಪಂ ಇಓ ಶ್ರೀಧರ್ ಐ ಬಾರಿಕಾರ ಸೇರಿದಂತೆ ಇತರರು ಇದ್ದರು.