ಇಂಡಿ ಉಪನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: 2,265ಕ್ಕೂ ಹೆಚ್ಚು ಬಾಕಿ ಕಡತಗಳ ಪತ್ತೆ

ಇಂಡಿ ಉಪನೋಂದಣಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ: 2,265ಕ್ಕೂ ಹೆಚ್ಚು ಬಾಕಿ ಕಡತಗಳ ಪತ್ತೆ  Lokayukta raid on Indi Sub-Registrar office: Over 2,265 pending files found

ಇಂಡಿ : ನಗರದ ಉಪನೋಂದಣಾಧಿಕಾರಿಗಳು ಹಾಗೂ ವಿವಾಹ ನೋಂದಣಾಧಿಕರಿಗಳ ಕಾರ್ಯಾಲಯದ ಮೇಲೆ ಲೋಕಾಯುಕ್ತರು ದಾಳಿ ನಡೆಸಿ ಸತತ ಮೂರು ದಿನಗಳ ಕಾಲ ಕಚೇರಿಯಲ್ಲೇ ಅತ್ಯಂತ ವೇಗವಾಗಿ ಕಡತಗಳ ಪರೀಶೀಲನೆ ನಡೆಸಿದರು. ಈ ಬಿರುಸಿನ ತಪಾಸಣೆಯ ವೇಳೆಯಲ್ಲಿ ಸಾರ್ವಜನಿಕರಿಗೆ ಸೇರಿದ ಸುಮಾರು 2265 ಕ್ಕೂ ಹೆಚ್ಚು ಪೇಡಿ (ಬಾಕಿ) ಪತ್ರಗಳು ಮತ್ತು ಪ್ರಮುಖ ಕಡತಗಳು ಕಚೇರಿಯಲ್ಲಿ ಧೂಳು ಹಿಡಿಯುತ್ತಿರುವುದು ಪತ್ತೆಯಾಯಿತು. ಅಧಿಕಾರಿಗಳ ಈ ತೀವ್ರ ಕ್ರಮವನ್ನು ಕಂಡು ಸಾರ್ವಜನಿಕರು ಭ್ರಷ್ಟಾಚಾರಕ್ಕೆ ಮುಕ್ತಿ ಸಿಗಬಹುದು ಎಂದು ಆಶಿಸಿದ್ದರು.

ಆದರೆ ಆರಂಭದಲ್ಲಿದ್ದ ಬಿರುಸು ದೀರ್ಘಕಾಲ ಮುಂದುವರಿಯಲಿಲ್ಲ. ಮೂರು ದಿನಗಳ ನಿರಂತರ ಪರೀಶೀಲನೆಯ ನಂತರ ತನಿಖೆಗೆ ಇದ್ದಕ್ಕಿದ್ದಂತೆ ಎರಡು ದಿನಗಳ ವಿರಾಮ (ಬ್ರೇಕ್) ಬಿತ್ತು. ಈ ವಿರಾಮದ ಬಳಿಕ ಇಡೀ ಕಚೇರಿಯ ಕಡತಗಳ ಮಹಜರು ಮತ್ತು ಪರೀಶೀಲನೆ ನಡೆಸಲು ಕೇವಲ ಇಬ್ಬರು ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲಾಯಿತು. ನೂರಾರು ಪ್ರಮುಖ ಕಡತಗಳು ಮತ್ತು ಅಕ್ರಮದ ವಾಸನೆ ಇರುವ ದಸ್ತಾವೇಜುಗಳನ್ನು ಇಷ್ಟೊಂದು ಸಣ್ಣ ಮಟ್ಟದ ಸಿಬ್ಬಂದಿ ತಂಡ ಪರೀಶೀಲಿಸುತ್ತಿರುವುದು ತನಿಖೆಯ ವೇಗವನ್ನು ಸಂಪೂರ್ಣವಾಗಿ ಕುಂಠಿತಗೊಳಿಸಿದೆ.

ಸಾರ್ವಜನಿಕರಲ್ಲಿ ಮೂಡಿದ ಸಂಶಯ: ಲೋಕಾಯುಕ್ತದ ಈ ಮಂದಗತಿಯ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರಭಾವಿಗಳ ಹಸ್ತಕ್ಷೇಪದ ಶಂಕೆ: ಆರಂಭದಲ್ಲಿ ಭರ್ಜರಿಯಾಗಿ ನಡೆದ ದಾಳಿಯು ಕೇವಲ ಇಬ್ಬರು ಸಿಬ್ಬಂದಿಗಳ ಪರೀಶೀಲನೆಗೆ ಸೀಮಿತವಾಗಿರುವುದರ ಹಿಂದೆ ರಾಜಕೀಯ ಅಥವಾ ಒಳಗಿನ ಪ್ರಭಾವಿ ಅಧಿಕಾರಿಗಳ ಹಸ್ತಕ್ಷೇಪ ಇರಬಹುದು ಎಂಬ ಸಂಶಯ ವ್ಯಕ್ತವಾಗುತ್ತಿದೆ.  

ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಕಚೇರಿಯಲ್ಲಿರುವ ಅಕ್ರಮಗಳಿಗೆ ಸಂಬಂಧಿಸಿದ ಪ್ರಮುಖ ಪುರಾವೆ ಹಾಗೂ ಲಿಖಿತ ದಾಖಲೆಗಳನ್ನು ಭ್ರಷ್ಟ ಅಧಿಕಾರಿಗಳು ನಾಶಪಡಿಸುವ ಅಥವಾ ಅದಲು-ಬದಲು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಲೋಕಾ ಮೇಲಿನ ವಿಶ್ವಾಸಕ್ಕೆ ಧಕ್ಕೆ: ಭ್ರಷ್ಟರ ಸಿಂಹಸ್ವಪ್ನ ಎಂದೇ ಕರೆಸಿಕೊಳ್ಳುವ ಲೋಕಾಯುಕ್ತ ಸಂಸ್ಥೆಯು ಇಂತಹ ಗಂಭೀರ ಪ್ರಕರಣಗಳಲ್ಲಿ ಮೃದು ಧೋರಣೆ ತಳೆದರೆ, ಸಾಮಾನ್ಯ ಜನರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆ ಮತ್ತು ವಿಶ್ವಾಸ ಕಡಿಮೆಯಾಗುತ್ತದೆ ಎಂದು ಸಾರ್ವಜನಿರು ಆಡಿಕೊಳ್ಳುತ್ತಿದ್ದಾರೆ.