ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ: ಗ್ರಾಮ ಪಂಚಾಯಿತಿಗಳ ಹೊಣೆಗಾರಿಕೆ

ಕೂಲಿ ಕಾರ್ಮಿಕರಿಗೆ ಸ್ಥಳೀಯವಾಗಿಯೇ ಉದ್ಯೋಗ: ಗ್ರಾಮ ಪಂಚಾಯಿತಿಗಳ ಹೊಣೆಗಾರಿಕೆ  Local employment for wage laborers: Responsibility of Gram Panchayats

ಲೋಕದರ್ಶನ ವರದಿ  

ಹಾವೇರಿ, ಆ. 9: ಕೇಂದ್ರ ಸರ್ಕಾರ ಜುಲೈ 1ರಿಂದ ಜಾರಿಗೊಳಿಸಿರುವ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಮತ್ತು ಜೀವನೋಪಾಯ ಅಭಿಯಾನ’ದಡಿ ರಾಜ್ಯದಲ್ಲಿ ಬರಗಾಲದ ಮುನ್ಸೂಚನೆ ಇರುವುದರಿಂದ ಕೂಲಿ ಕಾರ್ಮಿಕರು ವಲಸೆ ಹೋಗದಂತೆ ಸ್ಥಳೀಯವಾಗಿಯೇ ಉದ್ಯೋಗ ಒದಗಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ಮೇಲಿದೆ ಎಂದು ಹಾವೇರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪರಮೇಶ ಎನ್‌. ಹುಬ್ಬಳ್ಳಿ ಹೇಳಿದರು.  

ತಾಲ್ಲೂಕಿನ ಹೊಂಬರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಬರಡಿ ಗ್ರಾಮದ ನೀರಿನ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಪರೀಶೀಲಿಸಿ ಅವರು ಮಾತನಾಡಿದರು.  ವಿಕಸಿತ ಭಾರತ-ಜಿಆರ್ ಯೋಜನೆಯ ಕುರಿತು ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಯೋಜನೆಯಡಿ ಗ್ರಾಮೀಣ ಕುಟುಂಬಗಳಿಗೆ ನೀಡಲಾಗುವ ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶ ಹೊಂದಲಾಗಿದೆ ಎಂದರು.  

ಯೋಜನೆಯಡಿ 382 ದಿನಗಳ ಹೆಚ್ಚುವರಿ ಕೂಲಿ ಹಾಗೂ ಗ್ರಾಮೀಣ ಮೂಲಸೌಕರ್ಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಯೋಜನೆ ಕೇವಲ ಕೂಲಿ ಉದ್ಯೋಗಕ್ಕೆ ಸೀಮಿತವಾಗದೆ, ಜಲ ಸಂರಕ್ಷಣೆ, ಗ್ರಾಮೀಣ ರಸ್ತೆ ನಿರ್ಮಾಣ ಹಾಗೂ ಜೀವನೋಪಾಯಕ್ಕೆ ಅಗತ್ಯವಾದ ಗೋಡಾಮು ಸೇರಿದಂತೆ ಶಾಶ್ವತ ಆಸ್ತಿಗಳ ಸೃಷ್ಟಿಗೂ ಒತ್ತು ನೀಡುತ್ತದೆ ಎಂದು ತಿಳಿಸಿದರು.  

ಪ್ರಸ್ತುತ ಯೋಜನೆ ಕೇಂದ್ರ ಪುರಸ್ಕೃತ ಮಾದರಿಯಲ್ಲಿ 60:40 ಅನುಪಾತದ ವೆಚ್ಚ ಹಂಚಿಕೆಯೊಂದಿಗೆ ಅನುಷ್ಠಾನಗೊಳ್ಳುತ್ತಿದ್ದು, ಕಾಮಗಾರಿಗಳ ಆಯ್ಕೆ ಮತ್ತು ಅನುಷ್ಠಾನದಲ್ಲಿ ಸಂಬಂಧಿಸಿದ ಇಲಾಖೆಗಳು ಆದ್ಯತೆ ನೀಡಬೇಕು ಎಂದು ಹೇಳಿದರು.  

ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ಅರ್ಹ ಕುಟುಂಬಕ್ಕೂ ಯೋಜನೆಯ ಪ್ರಯೋಜನ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಕೂಲಿ ಕಾರ್ಮಿಕರು ಸ್ಥಳೀಯವಾಗಿಯೇ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.  

ಈ ಸಂದರ್ಭದಲ್ಲಿ ತಾಪಂ ಐಇಸಿ ಸಂಯೋಜಕ ಗೀರೀಶ ಬೆನ್ನೂರ, ತಾಪಂ ತಾಂತ್ರಿಕ ಸಂಯೋಜಕ ಮಹಾಗುಂಡೇಶ್ವರ ಮುಗುಳಿ, ಪಿಡಿಒಗಳಾದ ಶ್ರೀಮತಿ ಶಬಾನಾ ನದಾಫ್, ಕಾಯಕ ಮಿತ್ರರು, ಕೂಲಿಕಾರರು, ಮೇಟಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.