ಮೆಟ್ಟಿ ನಿಂತಾಗ ಬದುಕು ಸಾರ್ಥಕವಾಗುತ್ತದೆ: ಹನುಮೇಶ ಗುನ್ನಳ್ಳಿ

ಮೆಟ್ಟಿ ನಿಂತಾಗ ಬದುಕು ಸಾರ್ಥಕವಾಗುತ್ತದೆ: ಹನುಮೇಶ ಗುನ್ನಳ್ಳಿ Life becomes meaningful when you stand tall: Hanumesha Gunnalli


ಕೊಪ್ಪಳ 03: ವಿದ್ಯಾರ್ಥಿಗಳು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು, ಪರೀಕ್ಷೆಗಳಿರಲಿ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಭಯಪಡಬಾರದು ಎಂದು ಭಾರತೀಯ ಸ್ಟೇಟ್ ಬ್ಯಾಂಕ್‌ನ ಮ್ಯಾನೇಜರ್ ಹನುಮೇಶ ಗುನ್ನಳ್ಳಿಯವರು ನುಡಿದರು.  ಅವರು ಶ್ರೀ ಗವಿಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಪೂಜ್ಯ ಮರಿಶಾಂತವೀರ ಮಹಾಸ್ವಾಮಿಜಿ ಪದವಿ ಪೂರ್ವ ಕಾಲೇಜುಗಳ ವಾಣಿಜ್ಯ ವಿಭಾಗದ ‘ಕ್ಯಾಲಿಬರ​‍್ಸ‌ ಕ್ಲಬ್‌’ ವತಿಯಿಂದ ನಡೆದ ‘ಸಂಸ್ಕೃತಿ ಪರ್ವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ವಿದ್ಯಾರ್ಥಿಗಳು ನಾಳಿನ ಸುಖಮಯ ಜೀವನ ಅನುಭವಿಸಬೇಕೆಂದಿದ್ದರೆ, ಇಂದು ಕಷ್ಟದ ದಿನಗಳನ್ನು ಕಳೆಯಲೇಬೇಕು, ಮೊದಲು ತಂದೆ ತಾಯಿಗಳ ಕಷ್ಟದ ಬದುಕನ್ನು ಅರ್ಥೈಸಿಕೊಂಡು ಅಭ್ಯಾಸ ಮಾಡಿದಲ್ಲಿ ಉಜ್ವಲ ಭವಿಷ್ಯ ದೊರೆಯುತ್ತದೆ ಎಂದರು.  

ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್‌ನ ಚೀಫ್ ಮ್ಯಾನೇಜರ್ ಕುರುವಾ ಪೆದ್ದವೀರೇಶರವರು ಮಾತನಾಡಿ ವಿದ್ಯಾರ್ಥಿಗಳು ಇಂದು ಸ್ಪರ್ಧಾ ಯುಗದಲ್ಲಿದ್ದಾರೆ. ಅದನ್ನು ಕರಗತ ಮಾಡಿಕೊಂಡು ಹೆಚ್ಚೆಚ್ಚು ಅಧ್ಯಾಯನ ಮಾಡಬೇಕೆಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪನ್ಯಾಸಕ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ಮಾತನಾಡಿ ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳು ವಿಫುಲವಾಗಿವೆ. ಕೊಪ್ಪಳದಲ್ಲಿ ಕಂಪನಿ-ಕಾರ್ಖನೆಗಳು ಹೆಚ್ಚೆಚ್ಚಿರುವುದರಿಂದ ವಿಫುಲ ಅವಕಾಶಗಳಿವೆ, ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯರಾದ ಅಗಸ್ಟಿನ್‌ರವರು ವಿದ್ಯಾರ್ಥಿಗಳು ಶಾಲೆ, ಶಿಕ್ಷಕ ಮತ್ತು ಪರಿಸರವನ್ನು ಗೌರವಿಸಬೇಕು, ಆಗ ಮಾತ್ರ ಒಳ್ಳೆಯ ಸಂಸ್ಕಾರ ಮತ್ತು ಭವಿಷ್ಯ ದೊರೆಯುತ್ತದೆ ಎಂದರು. ವೇದಿಕೆಯ ಮೇಲೆ ಉಪಪ್ರಾಚಾರ್ಯರಾದ ಬಿ.ಎನ್‌.ಶಿವಯ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಕಮಲಾ ಅಳವಂಡಿಯವರು ಮತ್ತು ಉಪನ್ಯಾಸಕರಾದ ಅಶೋಕ ಓಜಿನಹಳ್ಳಿ, ಪದ್ಮಾವತಿ ಪಾಟೀಲ್, ಗೀತಾ, ಗುರುರಾಜ ವೈ.ಜಿ ಮುಂತಾದವರು ಉಪಸ್ಥಿತರಿದ್ದರು. ಕುಮಾರಿ ಅನಿತಾರವರ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ನಮ್ರತಾರವರು ಸ್ವಾಗತಿಸಿದರೆ ಕೊನೆಗೆ ತನಿಷಾರವರು ವಂದಿಸಿದರು.