ಗ್ರಂಥಾಲಯಗಳು ಜ್ಞಾನದ ಆಗರಗಳು: ಮೇಯರ್ ಮಂಗೇಶ ಪವಾರ ಅಭಿಮತ

ಗ್ರಂಥಾಲಯಗಳು ಜ್ಞಾನದ ಆಗರಗಳು: ಮೇಯರ್ ಮಂಗೇಶ ಪವಾರ ಅಭಿಮತ   Libraries are the hubs of knowledge: Mayor Mangesh Pawar's opinion

               ಬೆಳಗಾವಿ 22: ಗ್ರಂಥಾಲಯದಲ್ಲಿ ಲಭ್ಯವಿರುವ ಸಂಪನ್ಮೂಲಗಳು ಎಂದಿಗೂ ಬತ್ತಿ ಹೋಗುವುದಿಲ್ಲ. ಓದುಗರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಇದು ಒಂದು ಅಕ್ಷಯ ಭಂಡಾರವಾಗಿದೆ. ಇವು ಮಾಹಿತಿಯ ಭಂಡಾರ,ಜ್ಞಾನದ ಆಗರಗಳಾಗಿವೆ ಎಂದು ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಮತ್ತು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷ ಮಂಗೇಶ ಪವಾರ ಹೇಳಿದರು. 

              ನಗರದ ಕೇಂದ್ರ ಗ್ರಂಥಾಲಯದಲ್ಲಿ ನಡೆದ,"ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ" ದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು. ನಗರದಲ್ಲಿಯ ಸಾರ್ವಜನಿಕ ಗ್ರಂಥಾಲಯಗಳ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಮತ್ತು ಪ್ರೀತಿಯಿಂದ ಇದು "ನಮ್ಮ ಗ್ರಂಥಾಲಯ"ಎಂಬ ಮನೋಭಾವನೆ ಹೊಂದಬೇಕು ಎಂದು ಕರೆ ನೀಡಿದರು. ನಗರ ಸ್ವಚ್ಛತೆಯ ಬಗ್ಗೆ ಮಾತನಾಡಿ ಸಾರ್ವಜನಿಕರ ಸಹಕಾರಕ್ಕೆ ಮನವಿ ಮಾಡಿದರು.                

              ಅಧ್ಯಕ್ಷತೆ ವಹಿಸಿದ್ದ ಉಪ ಮೇಯರ್ ವಾಣಿ ವಿಲಾಸ ಜೋಶಿ ಅವರು ಗ್ರಂಥಾಲಯಗಳ ಉಪಯೋಗ ಮತ್ತು ಬಳಕೆಯ ಕುರಿತು ಮಾತನಾಡಿದರು. ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಪ್ತಾಹ ಅಂಗವಾಗಿ ಸ್ಪರ್ಧೆಗಳನ್ನು ಏರಿ​‍್ಡದ್ದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾನಗರ ಪಾಲಿಕೆಯ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ರಾಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ,ಗ್ರಂಥಾಲಯ ಸಪ್ತಾಹ ಆಚರಣೆ ಉದ್ದೇಶ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರಕ್ಕೆ ಡಾ.ರಂಗನಾಥನ್ ಅವರ ಕೊಡುಗೆ ಬಗ್ಗೆ ತಿಳಿಸಿದರು.                 

                ಸಾಹಿತಿ ಮತ್ತು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಡಾ.ಎಚ್ ಐ ತಿಮ್ಮಾಪುರ ಅವರು ಓದುವ ಹವ್ಯಾಸವನ್ನು ಹೆಚ್ಚಿಸುವ ಕುರಿತು ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತಯಾರಿ ಬಗ್ಗೆ ಕಿವಿಮಾತು ಹೇಳಿದರು. ಮಹಾನಗರ ಪಾಲಿಕೆಯ ಸದಸ್ಯೆ ರೇಖಾ ಹೂಗಾರ, ರಾಜು ಭಾತಖಾಂಡೆ, ನ.ಕೇ.ಗ್ರ.ಪ್ರಾಧಿಕಾರದ ಸದಸ್ಯ ಸುರೇಶ ವೈದ್ಯ ಆಗಮಿಸಿದ್ದರು.             

             ಉತ್ತಮವಾಗಿ ಸೇವೆ ಸಲ್ಲಿಸಿದ ನಗರ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳಿಗೆ  "ಉತ್ತಮ ಸಿಬ್ಬಂದಿ ಸೇವಾ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ಕಾಲೇಜುಗಳ ಮಕ್ಕಳನ್ನು ಪ್ರಶಸ್ತಿ ಪ್ರಮಾಣ ಪತ್ರ ನೀಡಿ ಗಣ್ಯರು ಸನ್ಮಾನಿಸಿದರು. ಉತ್ತಮ ಓದುಗರಿಗೂ ಸನ್ಮಾನಿಸಲಾಯಿತು. ಎ ಎ ಕಾಂಬಳೆ ಸ್ವಾಗತಿಸಿದರು. ಏಕನಾಥ ಅಂಬೇಕರ ಮತ್ತು ಪ್ರಕಾಶ ಇಚಲಕರಂಜಿ ನಿರೂಪಿಸಿದರು. ಸಂಜಯ ಕುಲಕರ್ಣಿ ವಂದಿಸಿದರು. ನಗರ ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲಾ ಸಿಬ್ಬಂದಿ, ಓದುಗರು ಸಾರ್ವಜನಿಕರು ಹಾಜರಿದ್ದರು.