ಬಸವರಾಜ್ ದಡೇಸುಗೂರು ರಿಂದ ಭೂಕಬಳಿಕೆ : ಎಚ್. ಜಗದೀಶ್ ಆರೋಪ
ಕೊಪ್ಪಳ 17: ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ್ ದಡೇಸುಗೂರು ಅವರು ದೇವದಾಸಿಯರ ಜಮೀನುಗಳನ್ನು ಭೂಕಬಳಿಕೆ ಮಾಡಿದ್ದಾರೆ ಎಂದು ಸಿಂಧನೂರಿನ ಪ್ರಜಾ ಜಾಗೃತಿ ಸಂಘಟನೆಯ ಅಧ್ಯಕ್ಷ ಎಚ್. ಜಗದೀಶ್ ವಕೀಲರು ಆರೋಪಿಸಿದರು.ಅವರು ಸೋಮವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಸಿಂಧನೂರು ತಾಲೂಕಿನ ಧಡೇಸೂರು ಗ್ರಾಮದಲ್ಲಿ ಸರಕಾರದ ವತಿಯಿಂದ 1990-91 ರಲ್ಲಿ ಸುಮಾರು 70-80 ಎಕರೆ ವಿಸ್ತೀರ್ಣ ಹೊಂದಿದ ಜಮೀನುಗಳನ್ನು ದೇವದಾಸಿ ಪುನರ್ವಸತಿ ಯೋಜನೆಯಡಿಯಲ್ಲಿ ಅವರ ಶ್ರೇಯೋಭಿವೃದ್ಧಿಗಾಗಿ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸ್ಯಾವಂಬಿಗಳಾಗಿ ಅವರ ಜೀವನೋಪಾಯ ರೂಪಿಸಿಕೊಳ್ಳುವ ಸದುದ್ದೇಶದಿಂದ ಖುದ್ದು ಸರಕಾರವೇ ಇಂಥವರ ಬಗೆಗಿನ ಕಾಳಜಿಯಿಂದ ಜಮೀನನ್ನು ಹಂಚಿಕೆ ಮಾಡಲಾಗಿತ್ತು. ಜಮೀನುಗಳನ್ನು ಕನಕಗಿರಿ ಕ್ಷೇತ್ರದ ಮಾಜಿ ಶಾಸಕರು ಹಾಗೂ ಕೊಪ್ಪಳ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಬಸವರಾಜ ಧಡೇಸೂರು ಇವರು ಲಂಚಬಾಕ ಅಧಿಕಾರಿಗಳ ಸಹಾಯದಿಂದ ಕಾನೂನನ್ನು ಉಲ್ಲಂಘಿಸಿ ಜಮೀನುಗಳನ್ನು ಫಲಾನುಭವಿಗಳಿಂದ ಪಡೆದಿರುತ್ತಾರೆ. ಸಿಂಧನೂರು ತಾಲೂಕು ಸಾಲಗುಂದಾ ಹೋಬಳಿಯ ಧಡೇಸೂರು ಗ್ರಾಮದ ಸರಕಾರಿ ಖಾರೀಜ ಖಾತಾ ಸುಮಾರು 30 ಎಕರೆಗೂ ಅಧಿಕ ಜಮೀನುಗಳನ್ನು 2006-07ರಲ್ಲಿ ಮಾಜಿ ಶಾಸಕರಾದ ಬಸವರಾಜ ದಢಸೂರು ತನ್ನ ಹೆಸರಲ್ಲಿ ಮತ್ತು ಪತ್ನಿ, ತಂದೆ, ಸೇರಿದಂತೆ ಇತರೆ ಸಂಬಂಧಿಕರಿಗೆ ಮಂಜೂರಾತಿ ಮಾಡಿಸಿಕೊಂಡಿದ್ದು,ದೇವದಾಸಿ ಮಹಿಳೆಯರಿಗೆ ಆದ ಅನ್ಯಾಯದ ಕುರಿತು ಮತ್ತು ಸರಕಾರಿ ಖಾರೀಜಿ ಖಾತಾ ಜಮೀನುಗಳನ್ನು ಕಾನೂನು ಬಾಹಿರ ಮತ್ತು ಅಕ್ರಮವಾಗಿ ಮಂಜೂರಾತಿ ಮಾಡಿಸಿಕೊಂಡಿರುವ ಕುರಿತು ಸಮಗ್ರವಾಗಿ ಅಧಿಕೃತ ದಾಖಲಾತಿಗಳೊಂದಿಗೆ ತಿಳಿಸ ಬಯಸುತ್ತೇನೆ ಎಂದ ಅವರು ಸರಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಮಾಜಿ ಶಾಸಕ ಬಸವರಾಜ ದಡೇಸೂರು ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿರಬೇಕು. ಮತ್ತು ನೊಂದ ದೇವದಾಸಿ ಮಹಿಳೆಯರಿಗೆ ಕೂಡಲೇ ಪ್ರಕರಣವನ್ನು ಜಿಲ್ಲಾಧಿಕಾರಿಗಳಿಗೆ ಸೂಚಿಸಿ ಜಮೀನುಗಳನ್ನು ಪುನಃ ಅವರವರ ಹೆಸರಿಗೆ ಮಾಡಿಸಬೇಕು. ಅಲ್ಲದೆ ಭಾರೀ ದೌರ್ಜನ್ಯಕ್ಕೆ ಹೆದರಿರುವ ಅವರ ಜಮೀನುಗಳನ್ನು ಹದ್ದುಬಸ್ತು ಮಾಡಿಸಿ ಸೂಕ್ತ ರಕ್ಷಣೆ ನೀಡುವಂತೆ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದ ಅವರು ಶೀಘ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದರು.ದೇವದಾಸಿ ಮಹಿಳೆ ಹಾಲಮ್ಮ ಮಾತನಾಡಿ ತಮ್ಮ ಜಮೀನುಗಳಿಗೆ ನೀರು ಕೊಡುವುದಾಗಿ ರುಜು ಪಡೆದು ತಮಗೆ ಆದ ಅನ್ಯಾಯವನ್ನು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಜಾನಪ್ಪ ಜವಳಗೇರಿ, ಗಂಗಮ್ಮ, ಕನಕಮ್ಮ, ಕೊರಮ್ಮ ಉಪಸ್ಥಿತರಿದ್ದರು.