ರಾಜ್ಯ ಹಣಕಾಸು ಸಂಸ್ಥೆಗೆ 44.92 ಕೋಟಿ ರೂ. ಲಾಭಗಳಿಕೆ
------------------------------------------
ಕಾರವಾರ, ಆಗಸ್ಟ 25 : ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 44.92 ಕೋಟಿ ರೂ.ಗಳಷ್ಟು ಲಾಭಗಳಿಸಿರುವುದಾಗಿ ವ್ಯವಸ್ಥಾಪಕ ನಿರ್ದೇಶಕ ಡಾ.ಏಕರೂಪ್ ಕೌರ್ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಅವರು 2019-20ನೇ ಆರ್ಥಿಕ ವರ್ಷದಲ್ಲಿ ವಿವಿಧ ಸಾಲ ಯೋಜನೆಗಳ ಮೂಲಕ 667.81 ಕೋಟಿ ರೂ.ಗಳ ಸಾಲ ಮಂಜೂರು ಮಾಡಲಾಗಿದ್ದು, 727.90 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗಿದೆ. ಹಾಗೆಯೇ 720.85 ಕೋಟಿ ರೂ.ಗಳನ್ನು ವಸೂಲಾತಿ ಕೂಡಾ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಂಸ್ಥೆಯು 44.92 ಕೋಟಿ ರೂ.ಗಳಷ್ಟು ಲಾಭ ಗಳಿಸಿದೆ. ಶೇಕಡವಾರು ಅನುತ್ಪಾದಕ ನಿವ್ವಳ ಆಸ್ತಿಯು ಕಳೆದ ವರ್ಷದ ಶೇ.6.09 ರಿಂದ ಪ್ರಸ್ತುತ ವರ್ಷದಲ್ಲಿ ಶೇ.5.12ಕ್ಕೆ ಇಳಿದಿರುತ್ತದೆ. ಸಂಸ್ಥೆಯು ಮಾರ್ಚ 31, 2020 ಅಂತ್ಯಕ್ಕೆ ಸಂಚಿತ ಮಂಜೂರಾತಿಯು 1,74,217 ಕೈಗಾರಿಕಾ ಘಟಕಗಳಿಗೆ 17,884.72 ಕೋಟಿ ರೂಗಳಷ್ಟಾಗಿರುತ್ತದೆ ಎಂದು ತಿಳಿಸಿದ್ದಾರೆ.
ಸಂಸ್ಥೆಯು ಈಗಾಗಲೇ 21,700 ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಉದ್ಯಮಿಗಳಿಗೆ 2000 ಕೋಟಿ ರೂ.ಗಳಿಗೂ ಅಧಿಕ ಸಾಲ ಮಂಜೂರಾತಿ ನೆರವನ್ನು ನೀಡಲಾಗಿದೆ. ಸಂಸ್ಥೆಯು ಇಲ್ಲಿಯವರೆಗೆ 30 ಸಾವಿರಕ್ಕೂ ಹೆಚ್ಚಿನ ಮಹಿಳಾ ಉದ್ಯಮಿದಾರರಿಗೆ 4243.67 ಕೋಟಿ ರೂ.ಗಳ ಅವಧಿ ಸಾಲ ಮಂಜೂರಾತಿ, 41 ಸಾವಿರ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಉದ್ಯಮಿಗಳಿಗೂ ಇದುವರೆಗೂ 1748.40 ಕೋಟಿ ರೂಗಳ ಸಾಲ ಮಂಜೂರಾತಿ ನೆರವನ್ನು ಒದಗಿಸಿದೆ. ಮೊದಲ ಪೀಳಿಗೆ ಉದ್ಯಮಿದಾರರಿಗೆ 164.70 ಕೋಟಿ ರೂಗಳ ಸಾಲ ಮಂಜೂರು ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಂಸ್ಥೆಯು ಕೈಗೊಂಡಿರುವ ಹಲವಾರು ಉಪಕ್ರಮಗಳು ಹಾಗೂ ಪ್ರಮುಖ ಯೋಜನೆಗಳಾದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ, ಮಹಿಳಾ ಉದ್ಯಮಿಗಳಿಗೆ ಹಾಗೂ ಎಲ್ಲಾ ವರ್ಗದ ಉದ್ಯಮಿಗಳಿಗೆ ಲಭ್ಯವಿರುವ ಶೇ.4 ರ ನಿವ್ವಳ ಬಡ್ಡಿದರದಲ್ಲಿ ಆರ್ಥಿಕ ಸಹಾಯ ಯೋಜನೆಗಳ ಯಶಸ್ವಿ ಅನುಷ್ಠಾನದ ಪ್ರತಿಫಲವಾಗಿ ಸಂಸ್ಥೆಯು ಮೇಲಿನ ಸಾಧನೆ ಮಾಡಲು ಸಾಧ್ಯವಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಉಳಿದ ಬಡ್ಡಿದರವು ಸಹಾಯಧನದ ರೂಪದಲ್ಲಿ ಪಾವತಿಯಾಗುತ್ತದೆ.
ಪ್ರಸ್ತುತ ಹಣಕಾಸು ವರ್ಷದಲ್ಲಿ ಕರ್ನಾಟಕ ಸರ್ಕಾರವು ಸಂಸ್ಥೆಗೆ 100 ಕೋಟಿ ರೂ.ಗಳ ಈಕ್ವಿಟಿ ಬಂಡವಾಳವನ್ನು ಹಾಗೂ 71.50 ಕೋಟಿ ರೂ.ಗಳ ಬಡ್ಡಿ ಸಹಾಯಧನದ ನೆರವನ್ನು ಮೇಲಿನ ಯೋಜನೆಗಳಡಿಯಲ್ಲಿ ಒದಗಿಸಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳು ಸ್ಥಾಪಿಸುವ ಜವಳಿ ಮತ್ತು ಕೈಮಗ್ಗ ಘಟಕಗಳಿಗೆ ವಿಶೇಷ ಹಣಕಾಸಿನ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು 20.12 ಕೋಟಿ ರೂ.ಗಳ ಅನುದಾನವನ್ನು ಬಿಡುಗಡಿ ಮಾಡಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿದಾರರಿಗೆ ಬಂಡವಾಳವಾಗಿ 27.02 ಕೋಟಿ ರೂಗಳ ಸರಳಬೀಜ ಧನವನ್ನು ಸರ್ಕಾರವು ನೀಡಿರುತ್ತದೆ ಎಂದು ಅವರು ಪ್ರಕಣೆಯಲ್ಲಿ ತಿಳಿಸಿದ್ದಾರೆ
ಪ್ರಸಕ್ತ ಆರ್ಥಿಕ ವರ್ಷದ ಗುರಿಗಳು :
2020-21ರ ಹಣಕಾಸು ವರ್ಷವನ್ನು ಕೋವಿಡ್-19 ರ ಸವಾಲುಗಳ ವರ್ಷವೆಂದು ಪರಿಗಣಿಸಲಾಗಿದೆ. ರಾಜ್ಯದ ಆರ್ಥಿಕತೆಯಲ್ಲಾದ ಚಂಚಲತೆಯಿಂದಾಗಿ ಪ್ರಸ್ತುತ ವರ್ಷದಲ್ಲಿ ಸಂಸ್ಥೆಯೂ ಸಹ ಮಿಶ್ರ ಬೆಳವಣಿಗೆಯನ್ನೇ ನಿರೀಕ್ಷಿಸಲಿದೆ. ಕೊರೋನಾ ಏಟಿನಿಂದ ಮಧ್ಯಮ, ಸಣ್ಣ ಹಾಗೂ ಸೂಕ್ಷ್ಮ ಘಟಕಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಪರಿಹಾರ ಹಾಗೂ ರಿಯಾಯಿತಿಗಳ್ನು ನೀಡುವ ದಿಕ್ಕಿನಲ್ಲಿ ಕಾರ್ಯಗತವಾಗಿವೆ.
2020-21 ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯು ತಲಾ 600 ಕೋಟಿಗಳ ಮಂಜೂರಾತಿ ಗುರಿಯನ್ನು ಹೊಂದಿದ್ದು, ಕರ್ನಾಟಕ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಗಳ ಯಶಸ್ವಿ ಅನಷ್ಠಾನದೊಂದಿಗೆ ಸಮಾಜದ ವಿವಿಧ ವರ್ಗಗಳಿಂದ ಸ್ಥಾಪಿಸಲ್ಪಡುವ ಎಂ.ಎಸ್.ಎಂ.ಇ ಗಳಿಗೆ ನೆರವು ನೀಡುವ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಿದೆ. ಎಂ.ಎಸ್.ಎಂ.ಇ ಗಳ ಪರ
Pariskruth ನಿರೂಪಣೆಯು ಜುಲೈ 1 ರಿಂದ ಜಾರಿಗೊಳ್ಳಲಿದ್ದು, ಉತ್ಪಾದಕ ಹಾಗೂ ಸೇವಾ ವಲಯಗಳಿಂದ ಸ್ಥಾಪಿಸಲ್ಪಡುವ ಘಟಕಗಳಿಗೆ ಕರ್ನಾಟಕ ರಾಜ್ಯ ಸರ್ಕಾರದ ಸಬ್ವೆನ್ಷನ್ ಯೋಜನೆಯನ್ನು 2020-21 ರಿಂದ ಸಂಸ್ಥೆಯಲ್ಲಿ ಪುನರ್ ಪರಿಚಯಿಸುತ್ತಿರುವುದು ಉದ್ಯಮಿಗಳಿಗೆ ವರದಾನವಾಗಲಿದೆ. ಅಲ್ಲದೆ ಅನುತ್ಪಾದಕ ಆಸ್ತಿಗಳನ್ನು ಮತ್ತಷ್ಟು ಕಡಿಮೆಗೊಳಿಸಲು ಸಂಸ್ಥೆಯು ಹೆಚ್ಚಿನ ಒತ್ತು ನೀಡಲಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಏಕರೂಪ್ ಕೌರ್ ಅವರು ತಿಳಿಸಿದ್ದಾರೆ.