ಡಿ, 24ರಂದು ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ
Kishkinda University's first convocation on December 24
ಬಳ್ಳಾರಿ 21: ಜಿಲ್ಲೆಯಲ್ಲಿ ಕಿಷ್ಕಿಂದ ವಿಶ್ವವಿದ್ಯಾಲಯದ ಎಂಬಿಎ ಹಾಗೂ ಎಂಸಿಎ ಕೋರ್ಸ್ಗಳ ಮೊದಲ ಬ್ಯಾಚ್ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭ ಹಾಗೂ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವವನ್ನು ಡಿಸೆಂಬರ್ 24, 2025ರಂದು ರಸ್ತೆ ಮಾರ್ಗದಲ್ಲಿರುವ ಮೌಂಟ್ ವ್ಯೂ ಕ್ಯಾಂಪಸ್ನಲ್ಲಿ ಸಿಂದಿಗೇರಿಯಲ್ಲಿ(ಬಳ್ಳಾರಿಯಿಂದ 28 ಕಿ.ಮೀ ದೂರ) ಆಯೋಜಿಸಲಾಗುತ್ತಿದೆ ಎಂದು ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ ಅವರು ತಿಳಿಸಿದ್ದಾರೆ.ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಕಿಷ್ಕಿಂದ ವಿಶ್ವವಿದ್ಯಾಲಯದ ಶೈಕ್ಷಣಿಕ ಪಯಣದಲ್ಲಿ ಐತಿಹಾಸಿಕ ಕ್ಷಣವಾಗಿದ್ದು, ಗುಣಮಟ್ಟದ ಉನ್ನತ ಶಿಕ್ಷಣ, ಸಂಶೋಧನೆ ಹಾಗೂ ನೈತಿಕ ಮೌಲ್ಯಗಳ ಸಮನ್ವಯದ ಮೂಲಕ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವುದು ವಿಶ್ವವಿದ್ಯಾಲಯದ ಗುರಿಯಾಗಿದೆ ಎಂದು ಹೇಳಿದರು.ಘಟಿಕೋತ್ಸವ ಸಮಾರಂಭಕ್ಕೆ ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾಲಯದ ವಿಸಿಟರ್ಗಳಾದ ಮಾನ್ಯ ಶ್ರೀ ಥಾವರ್ಚಂದ್ ಗೆಹೋಟ್ ಜಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಹಾಗೂ ಪ್ರೋ-ವಿಸಿಟರ್ಗಳಾದ ಮಾನ್ಯ ಡಾ. ಎಂ.ಸಿ. ಸುಧಾಕರ್ ಅವರು ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶಿವಪ್ಪ ಶೆಟ್ಟರ್, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಹಾಗೂ ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕುಲಾಧಿಪತಿ ಡಾ. ಯಶವಂತ್ ಭೂಪಾಲ್ ಮಾತನಾಡಿ, ಪ್ರಥಮ ಘಟಿಕೋತ್ಸವವು ವಿಶ್ವವಿದ್ಯಾಲಯದ ದೃಷ್ಟಿಕೋನ ಹಾಗೂ ಸಮಾಜಮುಖಿ ಬದ್ಧತೆಯ ಪ್ರತೀಕವಾಗಿದ್ದು, ವಿದ್ಯಾರ್ಥಿಗಳು ಸಮಾಜ ನಿರ್ಮಾಣದಲ್ಲಿ ನಾಯಕತ್ವ ವಹಿಸಬೇಕೆಂದು ಆಶಯ ವ್ಯಕ್ತಪಡಿಸಿದರು. ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್ ಅವರು ನಾವೀನ್ಯತೆ, ಕೌಶಲ್ಯಾಧಾರಿತ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ವಿಶ್ವವಿದ್ಯಾಲಯ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.ಟಿ.ಇ.ಹೆಚ್.ಆರಿ್ಡ ಟ್ರಸ್ಟ್ ಪ್ರಾಯೋಜಿತ ಕಿಷ್ಕಿಂದ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ಟ್ರಸ್ಟ್ ಸಂಪೂರ್ಣ ಬೆಂಬಲ ನೀಡಿದ್ದು, ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಶಿಕ್ಷಣ ನೀಡುವತ್ತ ವಿಶ್ವವಿದ್ಯಾಲಯ ದಾಪುಗಾಲು ಹಾಕುತ್ತಿರುವುದು ಶ್ಲಾಘನೀಯ ಎಂದು ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಜೆ.ವಿ. ಮಹಿಪಾಲ್ ತಿಳಿಸಿದರು.
ಸಮಾಜ ಸೇವೆ, ಧಾರ್ಮಿಕ ಸೌಹಾರ್ದತೆ, ಶಿಕ್ಷಣ ಪ್ರೋತ್ಸಾಹ ಹಾಗೂ ಮಾನವ ಕಲ್ಯಾಣ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ವಳಬಳ್ಳಾರಿ ಗ್ರಾಮದ ಸುವರ್ಣಗಿರಿ ವಿರಕ್ತ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳಿಗೆ ಕಿಷ್ಕಿಂದ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ (ಹಾನರಿಸ್ ಕಾಸಾ) ಪ್ರದಾನ ಮಾಡಲಾಗುತ್ತದೆ ಎಂದು ಕುಲಸಚಿವ ಡಾ. ಯು. ಈರಣ್ಣ ಮಾಹಿತಿ ನೀಡಿದರು.ಘಟಿಕೋತ್ಸವದಲ್ಲಿ ಶೈಕ್ಷಣಿಕ ಸಾಧನೆಯಲ್ಲಿ ಉನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುತ್ತದೆ. ಎಂಬಿಎ ವಿಭಾಗದಲ್ಲಿ ಶಬಾನಾ ಅವರು 9.33 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಸೌಗಂಧಿಕಾ ಲಕ್ಷ್ಮಿ ಅವರು 9.27 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕ ಪಡೆಯಲಿದ್ದಾರೆ. ಎಂಸಿಎ ವಿಭಾಗದಲ್ಲಿ ಸಜ್ಜ ಜಗತಿ ಅವರು 9.82 ಸಿಜಿಪಿಎದೊಂದಿಗೆ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ, ಸಂಧ್ಯಾ ಜಿ ಅವರು 9.66 ಸಿಜಿಪಿಎದೊಂದಿಗೆ ದ್ವಿತೀಯ ರ್ಯಾಂಕ್ ಪಡೆದು ಬೆಳ್ಳಿಯ ಪದಕವನ್ನು ಸ್ವೀಕರಿಸಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಕುಲಾಧಿಪತಿ ಡಾ. ಯಶವಂತ್ ಭೂಪಾಲ್, ಕುಲಪತಿ ಪ್ರೊ. ಟಿ.ಎನ್. ನಾಗಭೂಷಣ, ಸಹಕುಲಾಧಿಪತಿ ವೈ.ಜೆ. ಪೃಥ್ವಿರಾಜ್ ಭೂಪಾಲ್, ಕುಲಸಚಿವ ಡಾ. ಯು. ಈರಣ್ಣ, ಕುಲಸಚಿವ (ಮೌಲ್ಯಮಾಪನ) ಡಾ. ರಾಜು ಜಾಡರ್ ಡಾ. ಭರತ್ ಅವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 