ಖಾಶೆಂಪುರ್ ಮರಿಗೆಮ್ಮ ದೇವಿ ಜಾತ್ರಾ ಮಹೋತ್ಸವ

ಖಾಶೆಂಪುರ್ ಮರಿಗೆಮ್ಮ ದೇವಿ ಜಾತ್ರಾ ಮಹೋತ್ಸವ  Khashempur Marigamma Devi Jatra Festival

ಬೀದರ್   16: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ (ಪಾನ್ ಖಾಶೆಂಪುರ್) ಗ್ರಾಮದಲ್ಲಿ ಮಂಗಳವಾರ ಗ್ರಾಮ ದೇವತೆ ಮರಿಗೆಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆದಿದ್ದು, ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರು, ಸ್ವಗ್ರಾಮದವರಾದ ಬಂಡೆಪ್ಪ ಖಾಶೆಂಪುರ್ ರವರು ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.  

ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ಖಾಶೆಂಪುರ್ ಪಿ ಗ್ರಾಮಸ್ಥರು ಬೆಳಗ್ಗೆಯಿಂದಲೇ ಸಿದ್ಧತೆ ಆರಂಭಿಸಿ, ಸಂಜೆ ವೇಳೆಗೆ ಗ್ರಾಮ ದೇವತೆಯ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಿದರು.  

ಜಾತ್ರೆಯ ದಿನವೇ ತಯಾರಾಗುತ್ತವೆ ಮೂರ್ತಿಗಳು:  

ಖಾಶೆಂಪುರ್ ಪಿ ಗ್ರಾಮದ ಗ್ರಾಮ ದೇವತೆ ಮರಿಗೆಮ್ಮ ದೇವಿಯ ಮೂರ್ತಿಗಳನ್ನು ಜಾತ್ರಾ ಮಹೋತ್ಸವ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯವು ಮೊದಲಿನಿಂದಲೂ ಜಾರಿಯಲಿದ್ದು, ಈ ವರ್ಷವೂ ಮಂಗಳವಾರ ಬೆಳಿಗ್ಗೆ ಗ್ರಾಮಸ್ಥರು ಮರದ ತುಕಡಿಗಳನ್ನು ಗ್ರಾಮದ ಬಡಿಗೇರ (ಮೂರ್ತಿ ತಯಾರಿಸುವವರ) ಮನೆಗಳಿಗೆ ನೀಡಿದರು.   

ಅವುಗಳಿಂದ ಸಂಜೆಯವರೆಗೂ ಬಡಿಗೇರು ಮೂರ್ತಿಗಳನ್ನು ತಯಾರಿಸಿದರು. ತಯಾರಾದ ಮೂರ್ತಿಗಳನ್ನು ಸಂಜೆಯ ವೇಳೆಯಲ್ಲಿ ಗ್ರಾಮಸ್ಥರು ಬಡಿಗೇರ ಮನೆಯಿಂದ ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆಯಲ್ಲಿ ತಂದು ಮರಿಗೆಮ್ಮ ದೇವಿಯ ಮಂದಿರದಲ್ಲಿ ಪ್ರತಿಷ್ಠಾಪಿಸಿದರು.  

ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಖಾಶೆಂಪುರ್ ಪಿ ಸೇರಿದಂತೆ ವಿವಿಧ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಮೆರವಣಿಗೆಯೂದ್ದಕ್ಕೂ ಮರಿಗೆಮ್ಮ ತಾಯಿಯ ದರ್ಶನ ಪಡೆದು, ತಾಯಿಯ ಪರ ಜೈಘೋಷ ಮೊಳಗಿಸಿ, ಭಕ್ತಿ ಸಮರ​‍್ಿಸಿದರು.  

ಈ ಸಂದರ್ಭದಲ್ಲಿ ಪ್ರಮುಖರಾದ ಶಾಂತಲಿಂಗ ಸಾವಳಗಿ, ರಾಜು ಖಾಶೆಂಪುರ್, ರಾಜಕುಮಾರ್ ಪೊಲೀಸ್ ಪಾಟೀಲ್, ಬಾಬು ಖಾಶೆಂಪುರ್, ಸಿ.ಎಮ್ ನಾಗರಾಜ್, ಎಮ್‌. ಮುರುಳಿದರ್, ಉಜ್ವಲ್ ಖಾಶೆಂಪುರ್, ಅನಿಲ್ ಲಚ್ಚನೋರ್, ಶರಣಪ್ಪ ಖಾಶೆಂಪುರ್, ಭಜರಂಗ ತಮಗೊಂಡ, ದತ್ತು ಕಾಡವಾದ, ಶರಣಪ್ಪ ಚಿಂಚೋಳಿ, ಭೀಮಣ್ಣ ಓಂಟಿ, ಮಾರುತಿ ಬಸಗೊಂಡ, ಸುನೀಲ್ ಗುಮಾಸ್ತಿ, ಯೋಗೇಶ್ ವಗ್ಗೆ, ರಾಜು ವಗ್ಗೆ, ಮಲ್ಲು ಮುದುಕಪ್ಪನವರ್, ಮಂಜುನಾಥ ಬಾಲೇಬಾಯಿ, ಶಿವಕುಮಾರ್ ಹೊಸಳ್ಳಿ, ಸುನೀಲ್ ಖಾಶೆಂಪುರ್, ಪವನ್ ವಗ್ಗೆ, ರಮೇಶ್ ಸೇರಿದಂತೆ ಖಾಶೆಂಪುರ್ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರು ಸಾವಿರಾರು ಸಂಖ್ಯೆಯಲ್ಲಿದ್ದರು.