ಘನತೆಯ ಬದುಕಿಗೆ ಕಾಯಕ ಮುಖ್ಯ: ಸೋಮಲಿಂಗ ಗೆಣ್ಣೂರು
ವಿಜಯಪುರ,ಫೆ.10 : ಘನತೆ ಬದುಕು ರೂಪಿಸಿಕೊಳ್ಳಲು ಕಾಯಕ ತತ್ವ ಅಳವಡಿಸಿಕೊಂಡು ಕಾಯಕದಲ್ಲಿ ನಿರತರಾಗುವುದರ ಮೂಲಕ ಜೀವನವನ್ನು ಸುಂದರಗೊಳಿಸಿಕೊಳ್ಳೋಣ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಹೇಳಿದರು.
ಅವರು ನಗರ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಕಾಯಕ ಶರಣರಾದ ಮಾದರ ಚನ್ನಯ್ಯ, ಮಾದರ ಧೂಳಯ್ಯ, ಢೋಹರ ಕಕ್ಕಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಅವರ ಜಯಂತಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 12ನೇ ಶತಮಾನದಲ್ಲಿ ಶರಣರು ಮೌಲ್ಯಯುತ ಕಾಯಕ ಜೀವನ ನಡೆಸುವುದರ ಮೂಲಕ ಸಮಾಜಕ್ಕೆ ಜ್ಞಾನದ ಬೆಳಕು ತೋರಿದರು.
ಜನಸಾಮಾನ್ಯರಾಡುವ ಭಾಷೆಯಲ್ಲಿ ವಚನಗಳನ್ನು ಶರಣರು ನೀಡಿದ್ದಾರೆ. ಶರಣರ ವಚನಗಳು ಸಾರ್ವಕಾಲಕ್ಕೂ ಪ್ರಸ್ತುತವಾಗಿದ್ದು, ಕಾಯಕ ತತ್ವದ ಮಹತ್ವವನ್ನು ವಚನಗಳಲ್ಲಿ ಕಾಣಬಹುದು. ಶರಣರು ತಮ್ಮ ವಚನದ ಮೂಲಕ ಸಮಾಜವನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಅವರು ಹೇಳಿದರು ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ಮುಂದೆ ಸಾಗಬೇಕು..
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ ನಾವು ನಿರ್ವಹಿಸುವ ಕಾರ್ಯವನ್ನು ಅತ್ಯಂತ ಶ್ರಧ್ದೆಯಿಂದ ನಿರ್ವಹಿಸಬೇಕು. ಶರಣರ ಆಶಯವೂ ಇದೇ ಆಗಿತ್ತು. ಶರಣರ ವಚನ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಮಾದರ ಧೂಳಯ್ಯ ಹಾಗೂ ಢೋಹರ ಕಕ್ಕಯ್ಯರ ಕುರಿತು ಉಪನ್ಯಾಸದಲ್ಲಿ ಮಾತನಾಡಿದ ಕರ್ನಾಟಕ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಉಪನ್ಯಾಸಕರಾದ ಪ್ರೊ. ಲಕ್ಷ್ಮಿದೇವಿ ಅವರು ಶರಣರ ವಚನಗಳಿಂದ ಪ್ರೇರಣೆ ಪಡೆಯುವುದರ ಮೂಲಕ ಶರಣ ತತ್ವಾದರ್ಶ ಹಾಗೂ ಅವರ ಜೀವನಾದರ್ಶ ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಪ್ರೊ. ಮಹಾದೇವ ರೆಬಿನಾಳ ಅವರು ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿಯವರ ಕುರಿತು ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ಮತ್ತು ಅಂದಾಜು ಮೌಲ್ಯಮಾಪನ ಅಧಿಕಾರಿ ಎ.ಬಿ.ಅಲ್ಲಾಪೂರ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ಭೀಮರಾಯ ಜಿಗಜಿಣಗಿ, ಅಶೋಕ ಸೌದಾಗರ, ದೀಲೀಪ ಪೋಳ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ,ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಹಾಘೂ ಸಮಗಾರ ಹರಳಯ್ಯ ಅವರ ಭಾವಚಿತ್ರದ ಮೆರವಣಿಗೆಗೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರುಚಾಲನೆ ನೀಡಿದರು. ಮೆರವಣಿಗೆಯು ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ ವೃತ್ತದಿಂದ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.