ಕಾಗವಾಡದಲ್ಲಿ ಸಂಭ್ರಮದ ಕಾರ ಹುಣ್ಣವೆ ಆಚರಣೆ

ಕಾಗವಾಡದಲ್ಲಿ ಸಂಭ್ರಮದ ಕಾರ ಹುಣ್ಣವೆ ಆಚರಣೆ  Kara Hunnime celebration in Kagawad

ಕಾಗವಾಡ 10: ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗವಾದ ಕಾಗವಾಡ ಪಟ್ಟಣದ ಐತಿಹಾಸಿಕ ಕಾರಹುಣ್ಣಿಮೆ ಬುಧವಾರ ದಿ. 9ರಂದು ಸಾಯಂಕಾಲ ಜರುಗಿತು. ಇದರಲ್ಲಿ ಪಟ್ಟಣದ ಗೌಡರ ಮನೆತನದ ಎತ್ತು ಪ್ರಥಮವಾಗಿ ಕರಿ ಹರಿಯುವಲ್ಲಿ ಯಶಸ್ವಿಯಾಯಿತು.   

ಬೆಳಿಗ್ಗೆಯಿಂದ ಕರವ ಮನೆತನದ ಯುವಕನೋರ್ವ ಬಾಳಬಟ್ಟಲವೊಂದನ್ನು ಹಿಡಿದುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯವೃಂದಗಳೊಂದಿಗೆ ಮೆರವಣಿಗೆ ಮೂಲಕ ಎಲ್ಲ ದೇವಾಲಯಗಳಿಗೆ ಪೂಜೆ ಸಲ್ಲಿಸುತ್ತಾ ಸಾಯಂಕಾಲ ಗ್ರಾಮ ಪಂಚಾಯತ ಎದುರಿಗೆ 15 ಅಡಿ ಎತ್ತರದ ಮುಳ್ಳಿನ ಬನ್ನಿಯ ಕಂಟಿಯನ್ನು ಒಟ್ಟಿ ಅದರ ಮೇಲಿಂದ ಮೂರು ಎತ್ತುಗಳನ್ನು ಓಡಿಸಲಾಯಿತು. ಇದರಲ್ಲಿ ಗೌಡರ ಮನೆತನದ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಪಾಲ್ಗೊಂಡಿತ್ತು.   

ಈ ಕರಿ ಹರಿಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಾವಿರಾರು ಜನರು ವೀಕ್ಷಿಸಲು ಆಗಮಿಸಿದ್ದು, ಈ ಕರಿ ಹರಿಯುವ ಉಸ್ತುವಾರಿಯನ್ನು ಸಮೀರ ಪಟವರ್ಧನ ಸರಕಾರ ಅವರ ನೇತೃತ್ವದಲ್ಲಿ ಜರುಗಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ ರವೀಂದ್ರ ಹಾದಿಮನಿ, ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಅಜೀತ ಕರವ, ಪದ್ಮಾಕರ ಕರವ, ಕಾಕಾ ಪಾಟೀಲ, ಪ್ರಕಾಶ ಪಾಟೀಲ, ಆದಿನಾಥ ಕರವ, ರಾಜು ಕರವ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಥಣಿ ಡಿ.ವಾಯ್‌.ಎಸ್‌.ಪಿ ಪ್ರಶಾಂತ ಮುನ್ನೋಳ್ಳಿ ನೇತೃತ್ವದಲ್ಲಿ ಸಿ.ಪಿ.ಐ ಸಂತೋಷ ಹಳ್ಳೂರ ಪಿಎಸ್‌ಐ ಗಂಗಾ ಬಿರಾದಾರ, ಗಿರಮಲ್ಲಪ್ಪ ಉಪ್ಪಾರ ಬಿಗಿ ಬಂದೋಬಸ್ತ್‌ ಏರಿ​‍್ಡಸಿದ್ದರು.  

ಕಾರ ಹುಣ್ಣಿಮೆಯ ಕರಿ ಹರಿಯುವುದೆಂದರೆ ರೈತರಿಗೆ ಸಡಗರವೋ ಸಡಗರ. ಇದು ರೈತನ ಬದುಕಿಗೆ ಹೊಸತನವನ್ನು ತರುವ ಹಬ್ಬ. ಕರ್ನಾಟಕದಾದ್ಯಂತ ಕಾರ ಹುಣ್ಣಿಮೆಯನ್ನು ಆಚರಿಸುತ್ತಾರೆ. ಆದರೆ ಕಾಗವಾಡದಲ್ಲಿ ಈ ಹಬ್ಬವನ್ನು ಆಚರಿಸುವ ರೀತಿ ಈ ಹಬ್ಬದ ಪರಿಕಲ್ಪನೆ ಬೇರೆಯೇ ಇದೆ. ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆಯು ದನಗಳ ಹಬ್ಬವೆಂದು ಪ್ರಸಿದ್ಧವಾದರೆ, ಕಾಗವಾಡದಲ್ಲಿ ಇದು ಜನರ ಹಬ್ಬ ಎಂದು ಆಚರಿಸುತ್ತಾರೆ.   

ಪ್ರತಿ ವರ್ಷ ಶ್ರಾವಣ ಮಾಸದ ಮೂಲಾ ನಕ್ಷತ್ರದ ದಿನ ಇಲ್ಲಿ ಕರಿ ಹರಿಯುವುದು ವಿಶಿಷ್ಟವಾದ ಒಂದು ಸಾಂಸ್ಕೃತಿಕ ಹಬ್ಬ. ಈ ಹಬ್ಬದ ದಿನ ಕನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗದ, ಮಿರಜ, ಸಾಂಗಲಿ, ಸಾತಾರಾ, ಕೊಲ್ಲಾಪೂರ, ಇಚಲಕರಂಜಿ, ಜಮಖಂಡಿ, ಅಥಣಿ, ಚಿಕ್ಕೋಡಿ, ರಾಯಬಾಗ, ಗೋಕಾಕ ಸೇರಿದಂತೆ ಗಡಿಭಾಗದ ಎಲ್ಲ ನಗರ ಪಟ್ಟಣಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ.   

ಸಾಯಂಕಾಲ ಗ್ರಾಮ ಪಂಚಾಯತ ಆವರಣದಲ್ಲಿ ಅಪಾರ ಜನಸ್ತೋಮ ನೆರದಿದ್ದು, ಎತ್ತುಗಳಿಗೆ ಮೈತುಂಬ ಕೆಂಪು ಬಣ್ಣ ಬಳಿದು, ಒಂದೊಂದು ಎತ್ತಿಗೆ 5 ಜನರಂತೆ 15 ಜನ ಬಲಿಷ್ಠ ಯುವಕರು ಬರಿ ಮೈಯಿಂದ ವಾದ್ಯ ವೃಂದಗಳೊಂದಿಗೆ ಕೇ ಕೇ ಹಾಕುತ್ತಾ ಬರುತ್ತಿದ್ದಂತೆ ಪೋಲಿಸರ ಬಂದೂಕಿನಿಂದ ಸಪ್ಪಳವಾಯಿತೆಂದರೆ ಸಾಕು ನಾ ಮುಂದು, ತಾ ಮುಂದು ಎಂದು ಎತ್ತುಗಳನ್ನು ಓಡಿಸುತ್ತಾರೆ. ಯುವಕರು ತಮ್ಮ ಜೀವದ ಹಂಗು ತೊರೆದು ಪಾಲ್ಗೊಂಡಿದ್ದರು. ಯಾವ ಎತ್ತು ಕರಿ ಹರಿಯಿತೆಂಬ ಕುತುಹಲ ನೋಡುಗರ ಕಣ್ಣಲ್ಲಿ ಮೋಡಿ ಮಾಡುವುದರಲ್ಲಿಯೇ ಕರಿ ಹರಿದು ಮುಗಿಯುವುದು. ಅದಾದ ಬಳಿಕ ಮತ್ತೇ ಗೌಡರ 2 ಎತ್ತು ಮತ್ತು ಕರವ ಮನೆತನದ ಹಿರಿಯರು ಚಾವಡಿಗೆ ಬಂದು ಪಟವರ್ಧನ ಸರ್ಕಾರ ಇವರಿಗೆ ಮುಜರೆ ಕೊಟ್ಟು ಎಲೆ, ಅಡಿಕೆ ತೆಗೆದುಕೊಂಡು ಮರಳಿ ಹೋಗುತ್ತಾರೆ.  

ಗೌಡರ ಮನೆತನದ ಪೋಲಿಸ ಪಾಟೀಲರಾದ ದಿ.ಜೋತಗೌಡಾ ಪಾಟೀಲರ ಮನೆತನಕ್ಕೆ ಹಿರಿತನವಿದೆ. ಇವರ ಎರಡು ಎತ್ತುಗಳು ಹಾಗೂ ಕರವ ಮನೆತನದ ಒಂದು ಎತ್ತು ಹಾಗೂ ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಶ್ರದ್ಧೆ, ಭಕ್ತಿಯಿಂದ ಜಾತಿ ಮತ ಭೇದ ಮರೆತು, ಕಾರ ಹುಣ್ಣಿಮೆಯನ್ನು ವಿಶಿಷ್ಟ ರೀತಿಯಿಂದ ಆಚರಿಸಿದರು.