ಕನ್ನಡ ವಿದ್ವಾಂಸ ಡಾ.ಸಂಗಮೇಶ ಸವದತ್ತಿಮಠರಿಗೆ ಸಾಹಿತ್ಯ ಕ್ಷೇತ್ರದ ವಿದ್ಯಾಶಂಕರ ಪ್ರಶಸ್ತಿ

ಕನ್ನಡ ವಿದ್ವಾಂಸ ಡಾ.ಸಂಗಮೇಶ ಸವದತ್ತಿಮಠರಿಗೆ ಸಾಹಿತ್ಯ ಕ್ಷೇತ್ರದ ವಿದ್ಯಾಶಂಕರ ಪ್ರಶಸ್ತಿ  Kannada scholar Dr. Sangamesh Savadatti Matha receives Vidyashankar Award for Literature

ಧಾರವಾಡ 12: ಬೆಂಗಳೂರಿನ ಡಾ.ಎಸ್‌.ವಿದ್ಯಾಶಂಕರ ಸಾಂಸ್ಕೃತಿಕ ಪ್ರತಿಷ್ಠಾನವು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರಗಳ ವಿಶಿಷ್ಟ ಸ್ಮರಣೀಯ ಸೇವೆಗಳನ್ನು ಗುರುತಿಸಿ ಕೊಡ ಮಾಡುವ 2025ನೆಯ ಸಾಲಿನ ಪ್ರತಿಷ್ಠಿತ ವಿದ್ಯಾಶಂಕರ ಪ್ರಶಸ್ತಿಗೆ ನಗರದ ಹಿರಿಯ ಭಾಷಾವಿಜ್ಞಾನಿ, ಸಂಶೋಧಕ, ವಿದ್ವಾಂಸ ಡಾ.ಸಂಗಮೇಶ ಸವದತ್ತಿಮಠ ಅವರು ಭಾಜನರಾಗಿದ್ದಾರೆ.  

ಸಂಶೋಧನೆ ಮತ್ತು ಸಂಸ್ಕೃತಿ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಉತ್ತರ ಕರ್ನಾಟಕದ ಹಿರಿಯ ಸಾಹಿತಿ ಡಾ.ಸಂಗಮೇಶ ಸವದತ್ತಿಮಠ ಅವರು ಈ ತನಕ ಒಟ್ಟು 135 ಕೃತಿಗಳನ್ನು ಕನ್ನಡ ವಾಙ್ಮಯ ಲೋಕಕ್ಕೆ ನೀಡಿದ್ದಾರೆ. ವಿಶೇಷವಾಗಿ ಭಾಷಾ ವಿಜ್ಞಾನ ಕ್ಷೇತ್ರದಲ್ಲಿ ಕನ್ನಡ, ದ್ರಾವಿಡ, ಆರ್ಯ ಭಾಷಾ ವ್ಯಾಸಂಗ, ವಚನ ಸಾಹಿತ್ಯದಲ್ಲಿ ಬಹಳ ಅಪರೂಪದ್ದೆಂದು ಹೇಳಲಾದ ‘ವರ್ಣನಾತ್ಮಕ ವಚನಪದಕೋಶ’, 15 ವಿಷಯ ವಚನ ಸಂಪುಟಗಳನ್ನು ಹೊರತಂದಿದ್ದಾರೆ. ತೌಲನಿಕ ದ್ರಾವಿಡ ಭಾಷಾ ವಿಜ್ಞಾನದ ಮೇರು ಕೃತಿಗಳನ್ನು ರಚಿಸಿದ್ದು, ಇವೆಲ್ಲವೂ ಸಂಗ್ರಹ ಯೋಗ್ಯ ಕೃತಿಗಳಾಗಿ ಎಲ್ಲರ ಗಮನ ಸೆಳೆದಿವೆ. ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರೀ ವಿದ್ವತ್ ಪ್ರಶಸ್ತಿ, ಕಾಂತಾವರ ವಿದ್ವತ್ ಪರಂಪರಾ ಪ್ರಶಸ್ತಿ, ಕೇಂದ್ರ ಸರಕಾರದ ಮಾನವ ಸಂಪನ್ಮೂಲ ವಿಕಾಸ ಪುರಸ್ಕಾರ ಸೇರಿದಂತೆ ಈ ತನಕ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಡಾ. ಸವದತ್ತಿಮಠ ಅವರು ಪಡೆದಿದ್ದಾರೆ.  

ಪ್ರಶಸ್ತಿಯು 30 ಸಾವಿರ ರೂ.ಗಳ ನಗದು ಹಾಗೂ ಪ್ರಶಸ್ತಿ ಪತ್ರ-ಫಲಕವನ್ನು ಒಳಗೊಂಡಿದೆ. ನವ್ಹೆಂಬರ್‌-18 ರಂದು ಸಂಜೆ 4-30 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಹಂಪಿ ಕನ್ನಡ ವಿ.ವಿ. ಕುಲಪತಿ ಡಾ.ಡಿ.ವ್ಹಿ. ಪರಮ ಶಿವಮೂರ್ತಿ ಪ್ರಶಸ್ತಿ ಪ್ರದಾನ ಮಾಡುವರು.