ಕಮಲಹಾಸನ ಕನ್ನಡಿಗರ ಕ್ಷಮೆ ಕೇಳಲಿ: ರಹಿಮಾನಸಾಬ್ ಕನಕಾಲ್ ಆಗ್ರಹ
ದೇವರಹಿಪ್ಪರಗಿ 04: ಕನ್ನಡ ಹುಟ್ಟಿದ್ದು ತಮಿಳುನಿಂದ ಎಂದು ವ್ಯಾಖ್ಯಾನಿಸಿರುವ ಕಮಲಹಾಸನ್ ಅವರು ತಮ್ಮ ಹೇಳಿರುವ ಹೇಳಿಕೆಯನ್ನು ಹಿಂಪಡೆದು ಕೂಡಲೆ ಕ್ಷಮೆ ಕೇಳಬೇಕೆಂದು ಕನ್ನಡಪರ ಹೋರಾಟಗಾರ ರಹಿಮಾನಸಾಬ್ ಕನಕಾಲ್ ಅವರು ಒತ್ತಾಯಿಸಿದ್ದಾರೆ.
ಕನ್ನಡ ಹುಟ್ಟಿದ್ದು ತಮಿಳುನಿಂದ ಎಂದು ನಟ ಕಮಲಹಾಸನ್ ಹೇಳಿದ್ದಾರೆ. ಒಬ್ಬ ಸ್ಟಾರ್ ನಟನಾಗಿ ಬೆಳೆಯುವುದಕ್ಕೆ ಕೇವಲ ಒಂದು ಭಾಷೆ ಕಾರಣವಾಗುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಕನ್ನಡ ಭಾಷೆ ತಮಿಳುನಿಂದ ಹುಟ್ಟಿದ್ದೆ ಎಂದು ನಟ ಕಮಲಹಾಸನ ಅವರು ವಿವಾದ್ಮಕ ಹೇಳಿಕೆಯನ್ನು ನೀಡಿರುವುದು 6.5 ಕೋಟಿ ಕನ್ನಡ ಅಭಿಮಾನಿಗಳಿಗೆ ತುಂಬಾ ನೋವುಂಟು ಮಾಡಿದ್ದಾರೆ. ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಹಾಗೂ ತಮಿಳು ಜನರ ಮತಗಳ ಮೇಲೆ ಕಣ್ಣು ಇಟ್ಟಿರುವ ಅವರು ತಮ್ಮ ಹೊಸ ಚಲನಚಿತ್ರ ಥಗ್ ಲೈಫ್ ಧ್ವನಿ ಸುರುಳಿ ಬಿಡುಗಡೆ ಸಂದರ್ಭದಲ್ಲಿ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಂತ ಏಕೈಕ ಭಾಷೆ ಎಂದರೆ ಅದು ಕನ್ನಡ ಭಾಷೆ. ಮತ್ತು ತನ್ನದೇ ಆದ ನಾಲ್ಕು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ನಮ್ಮ ಕನ್ನಡ ಭಾಷೆಗೆ ಅವಮಾನ ಮಾಡಿರುವ ನಟ ಕಮಲ ಹಾಸನ್ ಅವರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು ಕನ್ನಡಿಗರಿಗೆ ಕ್ಷಮೆ ಕೇಳಬೇಕು. ಒಂದು ವೇಳೆ ಕನ್ನಡಿಗರಿಗೆ ಕ್ಷಮೆ ಕೇಳದೆ ಹೋದಲ್ಲಿ ಮುಂಬರುವ ದಿನಗಳಲ್ಲಿ ಅವರ ಭಾವಚಿತ್ರವನ್ನು ಸುಡುವುದರ ಮುಖಾಂತರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವ ಮುಖಾಂತರ ಕನಕಾಲ್ ಅವರು ಪತ್ರಿಕೆಯ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.