ತೇಜಸ್ ದಾಳಿಗೆ ಜೆಜಿ ಕಾಮರ್ಸ್‌ ಧೂಳಿಪಟ: ಜೆ.ಎಸ್‌.ಎಸ್‌. ಕ.ವಿ.ವಿ. ಕ್ರಿಕೆಟ್ ಚಾಂಪಿಯನ್

ತೇಜಸ್ ದಾಳಿಗೆ ಜೆಜಿ ಕಾಮರ್ಸ್‌ ಧೂಳಿಪಟ: ಜೆ.ಎಸ್‌.ಎಸ್‌. ಕ.ವಿ.ವಿ. ಕ್ರಿಕೆಟ್ ಚಾಂಪಿಯನ್ J.S.S. K.V.V. Cricket Championship

ಧಾರವಾಡ 18: ಲೆಗ್ ಸ್ಪಿನ್ನರ್ ತೇಜಸ್ ಮುರ್ಡೇಶ್ವರ ದಾಳಿಗೆ ಹುಬ್ಬಳ್ಳಿಯ ಜೆ.ಜಿ. ಕಾಮರ್ಸ್‌ ಕಾಲೇಜು ಧೂಳಿಪಟವಾಗುವುದರೊಂದಿಗೆ, ಆತಿಥೇಯ ಬನಶಂಕರಿ ಆಟ್ಸ್‌ ಹಾಗೂ ಎಸ್‌.ಕೆ. ಗುಬ್ಬಿ ಸೈನ್ಸ್‌ ಕಾಲೇಜು 157 ರನ್‌ಗಳ ಭರ್ಜರಿ ಗೆಲುವು ಸಾಧಿಸಿ 2024-25ನೇ ಸಾಲಿಗೆ ಕರ್ನಾಟಕ ವಿಶ್ವವಿದ್ಯಾಲಯ ಪುರುಷರ ಅಂತರ ಕಾಲೇಜು ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತು.  

‘ಸರಣಿ ಪುರುಷೋತ್ತಮ' ಹಾಗೂ 'ಪಂದ್ಯಾವಳಿಯ ಅತ್ಯುತ್ತಮ ಬೌಲರ್' ಪ್ರಶಸ್ತಿಗಳೆರಡನ್ನೂ ಬಾಚಿಕೊಂಡ ತೇಜಸ್ ಮುರ್ಡೇಶ್ವರ 2 ಮೇಡನ್‌ಗಳಿದ್ದ 4 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ 5 ವಿಕೆಟ್ ಉರುಳಿಸುವುದರೊಂದಿಗೆ ಗೆಲ್ಲಲು 188 ರನ್ ಗಳಿಸಬೇಕಿದ್ದ ಜೆಜಿ ಕಾಮಸ್ ಕಾಲೇಜು 11.3 ಓವರ್‌ಗಳಲ್ಲಿ 35 ರನ್‌ಗಳಿಗೆ ಸರ್ವಪತನ ಕಂಡಿತು. ಶಶಾಂಕ ಕಲ್ಲಾಪುರ(5 ರನ್‌ಗಳಿಗೆ 3 ವಿಕೆಟ್) ಹಾಗೂ ಪ್ರಜ್ವಲ್ ಬೋರಣ್ಣವರ(7 ರನ್‌ಗಳಿಗೆ 2 ವಿಕೆಟ್) ತೇಜಸ್‌ಗೆ ಸಮರ್ಥ ಬೆಂಬಲ ನೀಡಿದರು. ಜೆಜಿ ಕಾಮರ್ಸ್‌ ಪರ ರಿಶಿ ಗುಡಿಮನಿ(10) ಒಬ್ಬರೇ ಎರಡಂಕಿ ದಾಟಿದರು. 

ಇದು ಕರ್ನಾಟಕ ವಿವಿ ಇತಿಹಾಸದಲ್ಲಿ ಅಂತರ ಕಾಲೇಜು ಅಂತರ ವಲಯ ಕ್ರಿಕೆಟ್ ಫೈನಲ್ ಒಂದರಲ್ಲಿ ತಂಡವೊಂದು ದಾಖಲಿಸಿದ ಅತ್ಯಂತ ನಿಕೃಷ್ಟ ಮೊತ್ತ.   

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಜೆಎಸ್‌ಎಸ್ ಕಾಲೇಜು ‘ಪಂದ್ಯದ ಆಟಗಾರ' ನಾಯಕ ಆದಿತ್ಯ ಹಿರೇಮಠ(ಓಟಾಗದೇ 69, 34 ಎಸೆತ, 2 ಬೌಂಡರಿ, 7 ಸಿಕ್ಸರ್) ಹಾಗೂ ಮ್ಯಾಥ್ಯೂ ನಿಲುಗಲ್(58, 42 ಎಸೆತ, 3 ಬೌಂಡರಿ, 3 ಸಿಕ್ಸರ್) ಅವರುಗಳ ಅರ್ಧಶತಕಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 187ರ ಮೊತ್ತ ದಾಖಲಿಸಿತು. ಸಮ್ಯಕ್ ಪಾಟೀಲ(20, 18 ಎಸೆತ, 1 ಬೌಂಡರಿ, 1 ಸಿಕ್ಸರ್) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಕಿರಣ ಕುಸುಗಲ್(2/27) ಜೆಜಿ ಕಾಮರ್ಸ್‌ ಪರ ಯಶಸ್ವಿ ಬೌಲರ್‌.  

ಮುಕ್ತಾಯ ಸಮಾರಂಭದಲ್ಲಿ ಹಿರಿಯ ಕ್ರಿಕೆಟ್ ತರಬೇತುದಾರ ವಸಂತ ಮುರ್ಡೇಶ್ವರ ಪ್ರಶಸ್ತಿ ವಿತರಿಸಿದರು. ಜಿನಪ್ಪ ಕುಂದಗೋಳ, ಶ್ರವಣಕುಮಾರ ಯೋಗಿ, ಬಾಹುಬಲಿ ಚೌಗಲಾ, ಮಲ್ಲಿಕಾರ್ಜುನ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.