ಸಮಾಲೋಚನಾ ಸಭೆ ಽ ಚುನಾಯಿತ ಸದಸ್ಯರ ಗೌರವಧನ ಹೆಚ್ಚಳಕ್ಕೆ ಮನವಿ
ಬಾಗಲಕೋಟೆ, ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಅನುದಾನದ ಖರ್ಚು ವೆಚ್ಚಗಳಿಗೆ ವಾರ್ಷಿಕ ಲೆಕ್ಕಪತ್ರ ಇಡುವುದು ಕಡ್ಡಾಯವಾಗಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ.ಸಿ.ನಾರಾಯಣ ಸ್ವಾಮಿ ಹೇಳಿದರು.
ನಗರಸಭೆ ನೂತನ ಸಭಾಭವನದಲ್ಲಿ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಜರುಗಿದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಗರ ಸ್ಥಳೀಯ ಸಂಸ್ಥೆಗಳಿಗೆ ವಿವಿಧ ಅನುದಾನದ ಹಂಚಿಕೆ ಮಾಡಲಾಗಿದ್ದು, ಈ ಅನುದಾನದ ಬಳಕೆ, ಸಮಸ್ಯೆಗಳಿಗೆ ಸಲಹೆಗಳನ್ನು ಪಡೆದು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ನಿಟ್ಟಿನಲ್ಲಿ ಆಯೋಗದ ವತಿಯಿಂದ ವಿಭಾಗವಾರು ಸಭೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಆರ್ಥಿಕ ಸ್ಥಿತಿಗತಿ, ಅದರ ಕಾರ್ಯಚಟುವಟಿಕೆಗಳ ಸಂಪನ್ಮೂಲಗಳ ಕ್ರೋಢೀಕರಣ, ಹಂಚಿಕೆ ಮತ್ತು ಮೂಲಸೌಕರ್ಯ, ಸೇವೆ ಒದಗಿಸುವಲ್ಲಿ ತಾಂತ್ರಿಕ ಕೌಶಲ್ಯದ ಸಾಮರ್ಥ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಆಯೋಗ ಪರೀಶೀಲನೆ ನಡೆಸುವುದರೊಂದಿಗೆ ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಸಬೇಕಾದ ವರದಿಗೆ ಅನುಗುಣವಾಗಿ ಆಡಳಿತ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನು ಪಡೆಯುತ್ತಿದೆ. ಈ ನಿಟ್ಟಿನಲ್ಲಿ 16ನೇ ಹಣಕಾಸು ಆಯೋಗವು ರಾಜ್ಯಕ್ಕೆ ಭೇಟಿ ನೀಡಿದೆ. ರಾಜ್ಯಕ್ಕೆ ಅನುದಾನದ ಕೊರತೆ ಇದ್ದಲ್ಲಿ ವರದಿಯಲ್ಲಿ ನೀಡುವ ಅಗತ್ಯತೆ ಇದೆ ಎಂದರು.
ನಗರಸಭೆ ವ್ಯಾಪ್ತಿಯಲ್ಲಿ 15 ಕಾರ್ಯಕ್ರಮಗಳು ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ 29 ಕಾರ್ಯಕ್ರಮಗಳು ಬರುತ್ತವೆ. ಯಾವ ಉದ್ದೇಶಕ್ಕೆ ಅನುದಾನ ಬಿಡುಗಡೆಯಾಗಿರುತ್ತದೆ ಅದೇ ಉದ್ದೇಶಕ್ಕೆ ವಿನಿಯೋಗಿಸುವ ಮೂಲಕ ಅನುದಾನದ ಸದ್ಬಳಕೆ ಮಾಡಿಕೊಂಡು ಪ್ರತಿಯೊಂದು ಕಾರ್ಯಕ್ರಮ ಅನುಷ್ಠಾನಗೊಳಿಸಿದಕ್ಕೆ ಲೆಕ್ಕಪತ್ರ ಇಡುವುದು ಕಡ್ಡಾಯವಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಲೆಕ್ಕ ಪರಿಶೋಧನೆಗೆ ಒಳಪಡಿಸದೇ ಕೇಂದ್ರಕ್ಕೆ ವರದಿ ನೀಡಿದಲ್ಲಿ ಮುಂದಿನ ಅನುದಾನ ಬಿಡುಗಡೆಗೆ ತಡೆಹಿಡಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿಯೊಂದು ಅನುದಾನ ಬಳೆಕೆಗೆ ಲೆಕ್ಕಪತ್ರ ಇಡುವುದು ಕಡ್ಡಾಯವಾಗಿರುತ್ತದೆ ಎಂದರು.
ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಮಾತನಾಡಿ ನಗರಸಭೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಮಾಹಿತಿ, ರಾಜಸ್ವ ಕ್ರೋಡಿಕರಣ, ಕರ ವಸೂಲಿ ಮತ್ತು ಬಾಕಿ ವಿವರ, ಆಯವ್ಯವ ಖರ್ಚು ವೆಚ್ಚ, ರಾಜ್ಯ ಹಣಕಾಸು ಆಯೋಗದಿಂದ ಬಿಡುಗಡೆಯಾದ ವೇತನಾನುದಾನ, ವಿದ್ಯುತ್ ಅನುದಾನ, ತೆರಿಗೆ ವಸೂಲಾತಿಗೆ ಕೈಗೊಂಡ ಕ್ರಮ, ತೆರಿಗೆ ಪರಿಷ್ಕರಣೆ ಸೇರಿದಂತೆ ಇತರೆ ಎಲ್ಲ ಮಾಹಿತಿಯನ್ನು ಸಮಾಲೋಚನಾ ಸಭೆಗೆ ವಿವರ ನೀಡಿದರು.
ನಂತರ ಆಯೋಗದ ಅಧ್ಯಕ್ಷರು ಚುನಾಯಿತಿ ಪ್ರತಿನಿಧನಗಳೊಂದಿಗೆ ಸಮಾಲೋಚನೆ ನಡೆಸಿ ಸಿಬ್ಬಂದಿಗಳ ಕೊರತೆ, ಕುಡಿಯುವ ನೀರು, ಮೂಲಭೂತ ಸೌಲಭ್ಯಗಳ ಕೊರತೆ, ದೊಡ್ಡ ನಗರವಾಗಿರುವದರಿಂದ ಹೆಚ್ಚಿನ ಅನುದಾನ ಬಿಡುಗಡೆ, ನಿಗದಿತ ಅವಧಿಯಲ್ಲಿ ಅನುದಾನ ಬಿಡುಗಡೆ, ನಗರಸಭೆಯನ್ನು ಮೇಲ್ದರ್ಜೆಗೆ ಏರಿಸುವುದು ಹಾಗೂ ಚುನಾಯಿತ ಸದಸ್ಯ ಗೌರವಧನ ಹೆಚ್ಚಳ ಕುರಿತು ಇತರೆ ಸಮಸ್ಯೆ ಹಾಗೂ ಬೇಡಿಕೆಗಳನ್ನು ತಿಳಿದುಕೊಂಡರು. ಈ ಬಗ್ಗೆ ವರದಿಯ ಮೂಲಕ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುವುದಾಗಿ ತಿಳಿಸಿದರು.
ಸಭೆಯಲ್ಲಿ 5ನೇ ರಾಜ್ಯ ಹಣಕಾಸು ಆಯೋಗದ ಸದಸ್ಯರಾದ ಮಹ್ಮದ ಸನಾವುಲ್ಲಾ, ಆರ್.ಎಸ್.ಪೋಡೆ, ಆಯೋಗದ ಸಮಾಲೋಚಕರಾದ ಎಂ.ಕೆ.ಕೆಂಪೇಗೌಡ, ಸಿ.ಜಿ.ಸುಪ್ರಸನ್ನ, ಅದ್ಯಕ್ಷರ ಆಪ್ತ ಕಾರ್ಯದರ್ಶಿ ಕೆ.ಯಾಲಕ್ಕಿಗೌಡ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಸುರಕೋಡ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.