ಬೆಳಗಾವಿ 26: ಭಾವ ಬುದ್ದಿಗಳ ವಿದ್ಯುದಾಲಿಂಗನವೇ ಕಾವ್ಯದ ಹುಟ್ಟಿಗೆ ಸ್ಥಾಯಿಯಾಗಿದೆ.ಕಾವ್ಯವನ್ನು ಭಾವನಾತ್ಮಕವಾಗಿ ಕಟ್ಟಿಕೊಡಬೇಕು. ಕಾವ್ಯ ಸ್ವಾತಂತ್ರ್ಯದ ಸವಿಯನ್ನು ಅನುಭವಿಸಬೇಕು.ಅನುಭವ ಮತ್ತು ಕಲ್ಪಕತೆ ಭಾವನೆಗಳು ಕಾವ್ಯ ಕಟ್ಟಲು ಬಹು ಮುಖ್ಯವಾಗಿವೆ.ಕಾವ್ಯಗಳಲ್ಲಿ ಸಂದೇಹಗಳು ಬೇಡ, ಹಾಗೆಯೇ ಕಾವ್ಯದ ವಸ್ತುವಿನಲ್ಲಿ ಹೊಸತನವಿರಬೇಕು. ಈಗಾಗಲೇ ಜನಜನಿತ ಪುರಾಣ, ಚರಿತ್ರೆ, ಇತಿಹಾಸಗಳ ಕುರಿತಾಗಿ ಬರೆಯುವಾಗ ಹೊಸ ನೋಟದಿಂದ ಕಾವ್ಯ ಕಟ್ಟಬೇಕು.ಕಾವ್ಯ ಕ್ರೌರ್ಯವೆಂಬುದು ಆತೀವ ವಿಮರ್ಶೆಯ ನೋಟ ಈ ನಿಟ್ಟಿನಲ್ಲಿ ಕವಿಯಾಗುವುದು ಮುಖ್ಯವಲ್ಲ, ಸಹೃದಯನಾಗುವುದು ಮುಖ್ಯ ಎಂದು ನಾಡಿನ ಹೆಸರಾಂತ ಕವಯಿತ್ರಿ, ವಿಮರ್ಶಕಿ, ಡಾ ಹೇಮಾ ಪಟ್ಟಣಶೆಟ್ಟಿ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ, ಬೆಂಗಳೂರು ಕಲೇಸಂ ಬೆಳಗಾವಿ ಜಿಲ್ಲಾ ಘಟಕ ಮೇ. 17ರಂದು ಬೆಳಗಾವಿಯ ಶಿವಬಸವನಗರದ ಪ್ರಕೃತಿ ಸಭಾಂಗಣದಲ್ಲಿ ಆಯೋಜಿಸಿದ ಒಂದು ದಿನದ ಕಾವ್ಯ ಕಮ್ಮಟ ಶಿಬಿರದ ನಿರ್ದೇಶಕರಾಗಿ ಡಾ.ಹೇಮಾ ಪಟ್ಟಣಶೆಟ್ಟಿಯವರು ಕಾವ್ಯ ಕಮ್ಮಟದಲ್ಲಿ ಆಯ್ಕೆಯಾದ ಕವನಗಳನ್ನು ವಿಮರ್ಶೆ ಮಾಡುತ್ತ ಮಾತನಾಡಿದರು.
ಮುಂಜಾನೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಡಾ ಹೇಮಾ ಪಟ್ಟಣಶೆಟ್ಟಿಯವರು ಶಿಬಿರದ ನಿರ್ದೇಶಕರಾಗಿ ಕವಿ -ಕಾವ್ಯ - ಸಹೃದಯ ಕುರಿತಾಗಿ ಅತ್ಯಂತ ಚಿಂತನಾರ್ಹ ವಿಮರ್ಶೆಗಳನ್ನು ಮಾಡಿದರು.
ಕಾವ್ಯ ಕಮ್ಮಟದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳ ಆಯ್ದ ಕವಿತೆಗಳನ್ನು ವಾಚನ ಮಾಡುವ ಮೂಲಕ ಪ್ರಾಯೋಗಿಕವಾಗಿ ವಿಮರ್ಶೆಯನ್ನು ಮಾಡಿ ಮಾತನಾಡುತ್ತ ಡಾ ಹೇಮಾ ಪಟ್ಟಣಶೆಟ್ಟಿಯವರು ಜ್ಞಾನಾರ್ಜನೆ, ಜ್ಞಾನೋದಯ, ಸ್ಥಿತಪ್ರಜ್ಞೆ, ಪ್ರೌಢಿಮೆ, ರೋಚಕತೆ, ಕಾಣದ ಲೋಕಗಳ ಅನೂಹ್ಯ ಮತ್ತು ಅನನ್ಯ ಅನುಭವಗಳು ಅವರವರ ಗ್ರಹಿಕೆಯ ಮಿತಿ, ಕ್ಷಮತೆ ಮತ್ತು ಅಭಿರುಚಿಗಳ ಮೇಲೆಯೂ ನಿರ್ಧರಿತವಾಗಿರುತ್ತದೆ. ಆದರೆ ಕವಿತೆಗಳಲ್ಲಿ ಇವೆಲ್ಲವೂ ಬಿಡಿಬಿಡಿಯಾಗಿ ಸಿಗುವುದಿಲ್ಲ ಮತ್ತು ಎಲ್ಲವೂ ಸಿಗಲೇಬೇಕೆಂಬ ನೀರೀಕ್ಷೆಯೂ ಕೂಡಾ ಇರುತ್ತದೆ. ಆದ್ದರಿಂದಲೇ ನನ್ನ ಮಟ್ಟಿಗೆ ಕವಿತೆಗಳನ್ನು ಓದಿ ಆಸ್ವಾದಿಸಬಲ್ಲವರು ಕೂಡ ಒಂಥರಾ ಬುದ್ದಿಜೀವಿಗಳಾಗಿದ್ದಾರೆ. ಲೋಕವನ್ನು ಅದು ಇರುವ ಹಾಗೆಯೇ ಗ್ರಹಿಸುವ ಮತ್ತು ವ್ಯವಹಾರಗಳ ಮಿತಿಗಳನ್ನು ಗುರುತಿಸುತ್ತ ಅದರಾಚೆಗೆ ದಾಟಿಕೊಳ್ಳುವ ಒಂದು ಆಶಯವನ್ನು, ತುಡಿತವನ್ನು ಇಲ್ಲಿನ ಬಹುತೇಕ ಪದ್ಯಗಳು ಮಾಡುತ್ತವೆ.
ಗ್ರಹಿತಗಳಾಚೆ ಹೋಗಬೇಕೆನ್ನುವ ವಾಂಛೆಯು ರಚನೆಗಳನ್ನು ನಿರಚನಗೊಳಿಸಲೇ ಬೇಕೆನ್ನುವ ಕಾವ್ಯ ಸಂವೇದನೆಯು ಮೀಮಾಂಸೆಯ ತಾತ್ವಿಕತೆಗೆ ತೀರಾ ಹತ್ತಿರವಾದದ್ದು. ಇದೆಲ್ಲವನ್ನು ನಿರ್ವಹಿಸುವಾಗ ಆಪ್ತತೆಯಿಂದ ಗೆಳೆಯನಂತೆ ಮಾತಾಡುವ ’ಮಿತ್ರಸಂಹಿತೆ’ ಭಾವಸ್ಥಿತಿಯನ್ನು ಹೊಂದಿದ ಪದ್ಯಗಳು ಸಹ್ಯ ಓದಿಗೆ, ಹೃದ್ಯ ಸಂವೇದನೆಗೆ ಕಾರಣೀಭೂತವಾಗುತ್ತವೆ. ಎಂದು ನುಡಿದರು.
ಕಾವ್ಯ ಕುರಿತಾಗಿ ಸದ್ಯದ ಓದು ಬರಹಗಳು ಕಾವ್ಯಗಳ ಸೂಕ್ಷ್ಮ ಓದು ಸಂವೇದನೆಗಳನ್ನು ವಿವರಣಾತ್ಮಕವಾಗಿ ಹೇಮಾ ಪಟ್ಟಣಶೆಟ್ಟಿಯವರು ಹೇಳಿದರು.ಪ್ರಾಸಕ್ಕೆ ಗಂಟುಬಿದ್ದು ಕವಿತೆಯ ಅರ್ಥ ಕೆಡಬಾರದು ಪದ್ಯ ನಮಗೆ ನಕಾರಾತ್ಮಕ ಮನಸ್ಥಿತಿ ತರಬಾರದು. ಈಗಾಗಲೇ ಕಾವ್ಯಗಳಲ್ಲಿ ಸಾಧನೆ ಮಾಡಿದವರು ಹೊಸ ಕಾವ್ಯ ವ್ಯಾಕರಣ ಹುಟ್ಟು ಹಾಕಬಹುದು. ಶಬ್ದಗಳನ್ನು ಅಕ್ಕ ಪಕ್ಕದಲ್ಲಿ ಇಡುವುದರಿಂದ ಕಾವ್ಯ ಆಗುವುದಿಲ್ಲ. ಆದರೆ ಅರ್ಥಪೂರ್ಣವಾದ ಪದ ಸಾಲುಗಳು ಮಾತ್ರ ಕಾವ್ಯವಾಗಲು ಸಾಧ್ಯ.ಕಾವ್ಯಗಳಲ್ಲಿ ಸಂಯುಕ್ತ ಪದ ಬಳಕೆ ಯಾವಾಗ ಬರಬೇಕು ಕಾವ್ಯಗಳಲ್ಲಿ ಕ್ರಿಯಾಪದ ಬಳಕೆಯನ್ನು ಮಾಡುವ ಕುರಿತಾಗಿ ಸದ್ಯ ಚರ್ಚೆಯಿದೆ. ಸಂಭೋಧನೆಯ ಭಾಷೆ ಕಾವ್ಯಗಳಲ್ಲಿ ಬಳಸುವಾಗ ಎಚ್ಚರಿಕೆಯಿಂದ ಇರಬೇಕು.ಭಾಷಾ ಸಂಸ್ಕಾರ ರೂಪಿಸುವ ಪದಪುಂಜಗಳು ಮುಖ್ಯ. ಜೀವ ಸ್ಖಲನ ಅದು ವಿರ್ಯ ಮತ್ತು ಭಾವಕ್ಕೆ ಒಗ್ಗುವ ಪದಗಳು ಆದರೆ ದೊಡ್ಡ ಅರ್ಥ ಅಥವಾ ಬೇರೊಂದು ಅರ್ಥ ನೀಡುವ ಶಬ್ದ ಬಳಸಬಾರದು ಎಂದರು.
ಕಾವ್ಯ ರಚನೆಯ ಸಂವೇದನೆಗೆ ಸೂಕ್ಷ್ಮತೆ ಬೇಕು. ಪರಕಾಯ ಪ್ರವೇಶ ಮುಖ್ಯ. ಓದುಗನಾಗಿ ಮೊದಲು ಕವಿತೆಯನ್ನು ನೀವೆ ಓದಬೇಕು. ತಿಳುವಳಿಕೆಯನ್ನು ಹೇಳುವ ಕವಿತೆ ಬರೆದರೆ ಮಾತ್ರ ಕವಿಯಲ್ಲ. ಬದುಕಿನ ಮೌಲ್ಯವಿಟ್ಟುಕೊಂಡು ಮಹಾಕವಿಯ ಆಶಯದಂತೆ ಬದುಕಿದರೆ ಸಾಕು.ಎಂದು ಕಾವ್ಯ ಕಮ್ಮಟ ಶಿಬಿರದ ನಿರ್ದೇಶಕರಾಗಿ ಡಾ ಹೇಮಾ ಪಟ್ಟಣಶೆಟ್ಟಿ ಯವರು ಕವಿಗಳೊಂದಿಗೆ ಚರ್ಚೆ ಸಂವಾದವನ್ನು ಮಾಡಿದರು.
ಕರ್ನಾಟಕ ಲೇಖಕಿಯರು ಸಂಘದ ಬೆಳಗಾವಿ ಜಿಲ್ಲಾ ಘಟಕ ಆಯೋಜಿಸಿದ ಒಂದು ದಿನದ ಈ ಶಿಬಿರ ಅತ್ಯಂತ ಯಶಸ್ವಿಯಾಗಿ ಜರುಗಿತು.ಸುಮಾರು 25 ಕ್ಕಿಂತಲೂ ಹೆಚ್ಚಿನ ಕವಿಗಳು ನೊಂದಣಿ ಮಾಡಿ ಭಾಗವಹಿಸಿದ್ದರು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಹಿರಿಯ ಕವಿಯತ್ರಿಯರು ಉದಯೋನ್ಮುಖ ಕವಿಗಳು ಶಿಬಿರಾರ್ಥಿಗಳಾಗಿದ್ದರು.
ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿದ ಹಿರಿಯ ವಿಮರ್ಶಕರು ನಿವೃತ್ತ ಪ್ರಾಧ್ಯಾಪಕ ಶಶಿಧರ ಹೊಸಕೋಟೆಯವರು ಮಾತನಾಡುತ್ತ, ಕವಿತೆಗಳಲ್ಲಿ ಮಹೋನ್ನತವಾದ ಅಂಶಗಳು ಇರಬೇಕು.ಏಕೆಂದರೆ ಸಂಕ್ಷಿಪ್ತತೆ ಮತ್ತು ಸಂಕೀರ್ಣತೆಯಿಂದಲೇ ಸೌಂದರ್ಯ ಹೆಚ್ಚಿಸಿಕೊಳ್ಳುವ ಕವಿತೆಗಳಲ್ಲಿ ಅತಿ ಸರಳವಾದ ವಿಚಾರಗಳು, ಇಡಿಕಿರಿದ ವಿವರಗಳು, ನೇರವಾದ ಪ್ರಸ್ತುತಿ, ಸಮಾನ ಪದಗಳು, ಲಯವಿರದ ಹರಿವು ಎಲ್ಲವೂ ರಚನೆಯನ್ನು ತನ್ನ ಕೇಂದ್ರದಿಂದ ವಿಚಲಿತಗೊಳಿಸಿಬಿಡುತ್ತವೆ. ಕವಿ ತನ್ನ ವಿಚಾರಗಳ ಪ್ರಸ್ತುತಿ ಮತ್ತು ಪರಿಣಾಮಕಾರಿಯಾದ ಅಭಿವ್ಯಕ್ತಿಗೆ ಸಾಹಿತ್ಯದ ಇತರ ಪ್ರಕಾರಗಳಿಗಿಂತ ಸರಳ ಕಾವ್ಯಬಂಧಕ್ಕೆ ಒಳಗಾಗುತ್ತಾನೆ. ಕಾವ್ಯದ ಕುಲುಮೆಯಲ್ಲಿ ಶಬ್ದಗಳು ಹದಗೊಳ್ಳಬೇಕು.ಚೈತನ್ಯದ ಪೂಜೆ ನಡೆದದ ಅಂತ ವರಕವಿ ಬೇಂದ್ರೆ ಹೇಳುವಂತೆ ಕವಿಕಾವ್ಯ ತಪಸ್ಸಿಗೆ ಧ್ಯಾನಸ್ಥ ಸ್ಥಿತಿ ಬೇಕು. ಕಾವ್ಯ ಬಿಡುಗಡೆಗೊಳಿಸಬೇಕು ಓದುಗನ ಗ್ರಹಿಕೆಗೆ ಕೆಲವು ಆಧ್ಯಾಹಾರಗಳನ್ನು ಬಿಡಬೇಕು ಎಂದು ನುಡಿದರು.
ಕಾವ್ಯ ಕಮ್ಮಟ ಶಿಬಿರದ ಆಯೋಜಕರು ಹಾಗೂ ಕಲೇಸಂ ಬೆಳಗಾವಿ ಘಟಕದ ಅಧ್ಯಕ್ಷ ಲಿಂಗರಾಜ ಕಾಲೇಜು ಕನ್ನಡ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ ಕೆ.ಆರ್ ಸಿದ್ಧಗಂಗಮ್ಮ ಅವರು ಅಧ್ಯಕ್ಷೀಯ ಮಾತುಗಳ ನ್ನಾಡುತ್ತ. ಪ್ರಕೃತಿ ಕುರಿತ ಅಗಾಧವಾದ ಕುತೂಹಲ, ಶಾಸ್ತ್ರೀಯವಾದ, ಸುಂದರವಾದ, ಶಿಷ್ಟಾಚಾರದ ಭಾಷೆಯ ಯಶಸ್ವಿಯಾಗಿ ಬಳಕೆ ಕಾವ್ಯದಲ್ಲಿ ಎದ್ದು ಕಾಣುವಂತಿರಬೇಕು . ತಮ್ಮ ಕವಿತೆಗಳಿಗೆ ಗಣಿತ, ವಿಜ್ಞಾನ, ಖಗೋಳ, ಪುರಾಣ, ಪ್ರಕೃತಿ, ಸಂಬಂಧಗಳು, ನೀತಿ, ಸನ್ನಡತೆ. ಇತರೆ ಬಹಳ ವೈವಿದ್ಯಮಯವಾದ ವಸ್ತುಗಳನ್ನು ಶಿಬಿರಾರ್ಥಿಗಳು ಆಯ್ದುಕೊಂಡಿದ್ದಾರೆ. ವೈಚಾರಿಕತೆ ದೃಷ್ಟಿಯಿಂದ ಇದು ಬಹಳ ಮುಖ್ಯವಾಗಿದೆ. ಕಾವ್ಯದ ಭಾವ ಅಥೆಂಟಿಕ್ ಆಗಬೇಕು ಅನುಭವ ಅಥವಾ ಓದಿನ ಆಳ ಇರಬೇಕು. ಕಾವ್ಯ ವಾಚನವು ವಾಚ್ಯವಾಗಬಾರದು ಗದ್ಯ ಪದ್ಯದ ನಡುವಿನ ವ್ಯತ್ಯಾಸ ಬಹಳ ಇಲ್ಲ ಇತ್ತೀಚೆಗೆ ಗಪದ್ಯದ ಮಾದರಿಯ ಬರವಣಿಗೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಚಿನ್ಹೆಗಳ ಬಳಕೆ ಕಾವ್ಯದ ಓದು ಮತ್ತು ಅರ್ಥಗಳನ್ನು ಬಹಳ ವಿಚಾರಕ್ಕೆ ಕೊಂಡೊಯ್ಯುತ್ತವೆ. ವಾಸ್ತವಿಕತೆಯ ಶಬ್ದಗಳು ಕಾವ್ಯದ ಜೀವಾಳ ಹಾಗೆಯೇ ಪ್ರತಿಮಾತ್ಮಕತೆಗಳು ಕಾವ್ಯದ ಸೊಬಗು ಹೆಚ್ಚಿಸುತ್ತದೆ. ಅಂತಿಮವಾಗಿ ಮಹೋನ್ನತ ಅನುಭವಿಸುವ ಕಾವ್ಯ ಗೆಲ್ಲುತ್ತದೆ. ಗುಣ ವಿಶೇಷಣಗಳ ಬಳಕೆಯೊಂದಿಗೆ, ಚಿತ್ರಕವಿತ್ವಕಾವ್ಯ ದೃಶ್ಯ ಸಾಧ್ಯತೆಯನ್ನು ಸಾಧಿಸಬೇಕು.ಸೃಷ್ಟಿಯನ್ನು ಮಾನವೀಕರಣ ಮಾಡುವ ಹಾಗೂ ಪ್ರಕೃತಿಯನ್ನು ಮಾನವ್ಯದ ನೆಲೆಯಲ್ಲಿ ಕಾಣುವ ಬಗೆ ಬೇರೆ ಬೇರೆ ಕವಿ ತನ್ನತನವನ್ನು ಉಳಿಸಿಕೊಂಡು ನಂತರ ಭಾವನಾತ್ಮಕವಾಗಿ ಪದ ಸಾಲುಗಳನ್ನು ಕಟ್ಟಬೇಕು ಎಂದರು.ಕವಿ ಬರೆಯುವಾಗ ಓದುಗನ ಸಮಯಕ್ಕೆ ನ್ಯಾಯ ಒಗದಿಸಿಕೊಡಬೇಕು. ಕಾವ್ಯ ಕಮ್ಮಟದ ನಿಜವಾದ ಆಶಯ ಈಡೇರಿದೆ.ಸದ್ಯದ ಜಗತ್ತಿನ ಕ್ರೌರ್ಯಗಳನ್ನು ಮೀರುವ ಕವಿತೆಗಳು ಇಂದು ಬರೆಯಬೇಕಿದೆ.ಯುದ್ಧ ಮತ್ತು ಶಾಂತಿ ಬಯಸುವ ಮನಸ್ಥಿತಿಯ ಕವಿತೆಗಳು ಇಂದಿನ ತುರ್ತು ಇದೆ. ಕಾವ್ಯದ ಓದು ಅರ್ಥೈಸುವಿಕೆ ಇಂದಿನ ಕಾವ್ಯ ಕಮ್ಮಟದ ಯಶಸ್ವು.ಆಯ್ದ ಕವಿತೆಗಳ ಓದು ಅರ್ಥ ಚರ್ಚೆ ಸಂವಾದ ಹಾಗೂ ಕಾವ್ಯ ವಿಶ್ಲೇಷಣೆ ಅತ್ಯಂತ ಮನಸ್ಸಿಗೆ ತಟ್ಟಿತು.ಎಂದು ಪ್ರೊ ಸಿದ್ಧಗಂಗಮ್ಮ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದ್ಯಸ್ಯರು ಕವಯಿತ್ರಿಯಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಸಂಘದ ಹಿರಿಯ ಸಲಹಾಗಾರರಾದ ಪ್ರೇಮಾ ತಾಶೀಲದಾರ, ಮಮತಾ ಶಂಕರ, ಸುನಂದಾ ಮೂಳೆ, ಹಮೀದಾ ಬೇಗಂ ದೇಸಾಯಿ, ಇಂದಿರಾ ಮೋಟೆಬೆನ್ನೂರ, ರಾಜನಂದಾ ಗಾರ್ಗಿ, ಶಿವರಾಜ ಅರಳಿ, ಗ್ಯಾನಪ್ಪ ಮಾದರ, ನೂತನ ಕುಲಕರ್ಣಿ, ಕಮಲಾ ಎಸ್ ಕೆ, ಡಾ. ಕವಿತಾ ಕುಸುಗಲ್ಲ, ಅಂಜಲಿ ಅಳಗುಡಿ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.
ಗ್ಯಾನಪ್ಪ ಮಾದರ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಡಾ ನೀತಾ ರಾವ್ ಸ್ವಾಗತಿಸಿದರು. ಸಂಘದ ಡಾ ರಾಜನಂದಾ ಗಾರ್ಗಿ ನಿರೂಪಿಸಿದರು. ಖಜಾಂಚಿ ಡಾ ನಿರ್ಮಲಾ ಬಟ್ಟಲ್ ವಂದನಾರೆ್ಣ ಮಾಡಿದರು.