ವಚನಗಳಿಂದ ಅಂತರಂಗ ಶುದ್ಧಿ : ಡಾ. ಸಂಜಯ ಸಿಂಧೆಹಟ್ಟಿ

ವಚನಗಳಿಂದ ಅಂತರಂಗ ಶುದ್ಧಿ : ಡಾ. ಸಂಜಯ ಸಿಂಧೆಹಟ್ಟಿ Intrinsic Purification by Vachanas: Dr. Sanjay Sindehatti

ಬೆಳಗಾವಿ 08: ಶರಣರ ವಚನಗಳಲ್ಲಿರುವ ಜೀವನದ ಮೌಲ್ಯಗಳು ಬದುಕಿಗೆ ಸ್ಪೂರ್ತಿ ನೀಡಿ ದಾರಿ ತೋರಿಸುತ್ತವೆ. ಯಾರಾದರೂ ನಮ್ಮನ್ನು ನಿಂದಿಸಿದರೆ, ನೋಯಿಸಿದರೆ ಅದಕ್ಕೆ ಪ್ರತಿಕ್ರಿಯಿಸದೆ, ನೊಂದುಕೊಳ್ಳದೆ ಸುಮ್ಮನಿರಬೇಕು. ಶಿಕ್ಷೆ ನೀಡಲು ರಕ್ಷಣೆ ಮಾಡಲು ಭಗವಂತನಿದ್ದಾನೆ ಎಂಬುದನ್ನರಿತು ಜೀವಿಸಬೇಕು. ವಚನಗಳನ್ನು ಆಳವಾಗಿ ಅಧ್ಯಯನ ಮಾಡುತ್ತಾ ಅವುಗಳ ಅನುಭವದಿಂದ ಆತ್ಮವಿಮರ್ಶೆ ಮಾಡಿಕೊಂಡರೆ ನಮ್ಮ ಅಂತರಂಗ ಶುದ್ದಿಯಾಗುತ್ತದೆ ಎಂದು ಮೂಡಲಗಿಯ ಖ್ಯಾತ ದಂತ ವೈದ್ಯ ಡಾ. ಸಂಜಯ್ ಸಿಂಧೆಹಟ್ಟಿ ಅಭಿಪ್ರಾಯಪಟ್ಟರು.  

ಅವರು ಸೋಮವಾರ ಇಲ್ಲಿನ ಶಿವಬಸವ ನಗರದ ಕಾರಂಜಿಮಠದಲ್ಲಿ ನಡೆದ 288 ನೆಯ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಶರಣರ ವಚನಗಳಲ್ಲಿ ಆತ್ಮವಿಮರ್ಶೆ ಎಂಬ ವಿಷಯದ ಕುರಿತು ಮಾತನಾಡುತ್ತಾ ಮೇಲಿನಂತೆ ಅಭಿಪ್ರಾಯಪಟ್ಟರು. 

ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮಿಗಳು, ವಚನಗಳು ಭಕ್ತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಸಮಾನತೆ, ಕಾಯಕ, ದಾಸೋಹ ಮತ್ತು ಪ್ರಾಮಾಣಿಕತೆಯಂತಹ ಮಾನವೀಯ ಮೌಲ್ಯಗಳನ್ನು ತಿಳಿಸಿ ಕೊಡುತ್ತವೆ ಎಂದರು. 

ಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಡಾ. ಹೇಮಾ ಸೊನೊಳ್ಳಿ ಅವರು ಕಾರಂಜಿ ಮಠದ ಸೇವಾ ಕಾರ್ಯಗಳನ್ನು ಪ್ರಶಂಶಿಸಿದರು. 

ಮಹಿಳಾ ಕಲ್ಯಾಣ ಸಂಸ್ಥೆಯನ್ನು ಪ್ರಾರಂಭಿಸಿ ಸಮಾಜ ಸೇವೆ ಮಾಡುತ್ತಾ ಸಾರ್ಥಕ 75 ವರ್ಷಗಳನ್ನು ಪೂರೈಸಿದ ಆದರ್ಶ ಶಿಕ್ಷಕ ದಂಪತಿಗಳಾದ ಎಂ. ಎಸ್‌. ಚೌಗುಲ ಹಾಗೂ ವೈಜಯಂತಿ ಚೌಗಲಾ ದಂಪತಿಗಳನ್ನು ಸನ್ಮಾನಿಸಲಾಯಿತು. 

ಉಪನ್ಯಾಸಕ ಎ.ಕೆ. ಪಾಟೀಲ ಸ್ವಾಗತಿಸಿ ನಿರೂಪಿಸಿದರು. ಕುಮಾರೇಶ್ವರ ಸಂಗೀತ ಪಾಠಶಾಲೆಯ ಮಕ್ಕಳು ಪ್ರಾರ್ಥಿಸಿದರು. ನ್ಯಾಯವಾದಿ ವಿ.ಕೆ. ಪಾಟೀಲ ವಂದಿಸಿದರು.