ಶಾಲಾ ಕಟ್ಟಡ-ಪಿಠೋಪಕರಣ ಸ್ವಚ್ಛತೆಗೆ ಮುಖ್ಯ ಶಿಕ್ಷಕರಿಗೆ ಸೂಚನೆ
ಹಾವೇರಿ 27: ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿಗೆ ಇದೇ ಮೇ 29 ರಿಂದ ಶಾಲೆಗಳು ಪುನರಾರಂಭವಾಗಲಿದ್ದು, ಶಾಲಾ ಕಟ್ಟಡ ಹಾಗೂ ಪೀಠೋಪಕರಣ ಸ್ವಚ್ಚಗೊಳಿಸಬೇಕು. ವಿದ್ಯಾರ್ಥಿಗಳ ಸ್ವಾಗತಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಶಾಲಾ ಮುಖ್ಯ ಶಿಕ್ಷಕರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ ಅವರು ಸೂಚನೆ ನೀಡಿದರು.
ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಶಾಲಾ ಪುನರಾರಂಭದ ಕುರಿತು ತಾಲೂಕಿನ ಎಲ್ಲಾ ಶಾಲಾ ಮುಖ್ಯ ಶಿಕ್ಷಕರೊಂದಿಗೆ ಪೂರ್ವ ಸಿದ್ಧತೆ ಸಭೆ ನಡೆಸಿ ಮಾತನಾಡಿದ ಅವರು, ಶಾಲಾ ಪ್ರಾರಂಭೋತ್ಸವದಂದು ಸ್ಥಳೀಯ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು ಎಂದು ತಿಳಿಸಿದರು.
ಶಾಲಾ ಪ್ರಾರಂಭೋತ್ಸವದಂದು ವಿದ್ಯಾರ್ಥಿಗಳನ್ನು ಹೂ ನೀಡುವ ಮೂಲಕ ಅಥವಾ ಸಸಿ ನೆಡಿಸುವ ಮೂಲಕ ಸ್ವಾಗತಿಸಿ. ಶಾಲಾ ಕೈತೋಟದಲ್ಲಿ ಬೆಳೆದ ಹೂಗಳಿಂದ ಅಥವಾ ಗ್ರೀಟಿಂಗ್ ಕಾರ್ಡ್ ಕೊಡುವ ಮೂಲಕ ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಬೇಕು ಎಂದು ಸಲಹೆ ನೀಡಿದರು.
ಮೊದಲ ದಿನ ಮಧ್ಯಾಹ್ನ ಉಪಹಾರ ಯೋಜನೆ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಪ್ರಾರಂಭಗೊಳ್ಳಬೇಕು. ಪ್ರತಿ ಮಗುವಿಗೂ ಹೋಳಿಗೆ ಶೀಖರಣಿ ಹಾಗೂ ಮೊಟ್ಟೆ ಸೇರಿದಂತೆ ರುಚಿ ಹಾಗೂ ಶುಚಿಯಾದ ಊಟ ನೀಡಬೇಕು ಎಂದು ಸಲಹೆ ನೀಡಿದರು.
ಶಾಲಾ ಕಟ್ಟಡದ ಮೇಲ್ಛಾವಣಿ, ಶಾಲಾ ಆವರಣ, ಪಿಠೋಪಕರಣ, ಅಡುಗೆ ಕೋಣೆ, ಅಡುಗೆ ಪರಿಕರ ಹಾಗೂ ನೀರು ಸಂಗ್ರಹಣೆ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸಬೇಕು. ಬಿಸಿ ಯೂಟಕ್ಕೆ ಬಳಸುವ ಎಲ್ಲ ದಾಸ್ತಾನುಗಳು ಶುಚಿಯಾಗಿವೆಯೇ ಎಂದು ಖಾತ್ರಿಪಡಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಶಾಲಾ ಪ್ರಾರಂಭೋತ್ಸವಕ್ಕೆ ಅನುಕೂಲವಾಗಿದ್ದು, ಈ ಕಾರ್ಯಕ್ರಮದ ಕುರಿತು ಪಾಲಕರಿಗೆ ಹಾಗೂ ಪೋಷಕರಿಗೆ ಮಾಹಿತಿ ನೀಡುವ ಮೂಲಕ ಶಾಲಾ ದಾಖಲಾತಿ ಹೆಚ್ಚಿಸಲು ಪ್ರಕ್ರಿಯೆ ಆರಂಭಿಸಬೇಕು. ಶಾಲೆಯ ವೈಶಿಷ್ಟ್ಯತೆ ಕುರಿತು ಪೋಸ್ಟರ್ಸ ಹಾಗೂ ಕರಪತ್ರಗಳನ್ನು ತಯಾರಿಸಿ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಒಂದನೇ ತರಗತಿಗೆ ಪ್ರವೇಶಗಳನ್ನು ದಿನಾಂಕ 28-05-2025 ರಿಂದ 30-05-2025 ರವರೆಗೆ ವಿಶೇಷ ದಾಖಲಾತಿ ಆಂದೋಲನ ನಡೆಸಬೇಕು. ಯಾವುದೇ ದಾಖಲೆಗಳಿಲ್ಲ ಅಥವಾ ವಿಶೇಷಚೇತನರು ಎನ್ನುವ ಕಾರಣಕ್ಕೆ ದಾಖಲಾತಿ ನಿರಾಕರಿಸುವಂತಿಲ್ಲ ಎಂದು ತಿಳಿಸಿದರು.
ಶಿಥಿಲಗೊಂಡ ತರಗತಿ ಕೋಣೆಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಕೂರಿಸಬಾರದು. ಶಿಥಿಲಗೊಂಡ ತರಗತಿಗಳಿಗೆ ಬೀಗ್ ಹಾಕಬೇಕು, ಶಿಥಿಲಗೊಂಡ ಕಟ್ಟಡ ಎಂದು ದಪ್ಪ ಅಕ್ಷದಲ್ಲಿ ಬರೆಯಬೇಕು ಹಾಗೂ ವಿದ್ಯಾರ್ಥಿಗಳು ಆ ಸ್ಥಳಗಳಿಗೆ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು.
ಗ್ರಂಥಾಲಯದ ಪುಸ್ತಕಗಳಲ್ಲಿ ಧೂಳು ಇರದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಮಕ್ಕಳಿಗೆ ಪುಸ್ತಕ ಓದಲು ಅವಕಾಶಮಾಡಿಕೊಡಬೇಕು. ಜೊತೆಗೆ ಹಳೆಯ ಪುಸ್ತಕಗಳನ್ನು ಕ್ರೋಢಿಕರಿಸಿ ಬುಕ್ ಬ್ಯಾಂಕ್ ಸ್ಥಾಪನೆ ಮಾಡಿ ಎಂದು ಸಲಹೆ ನೀಡಿದರು.
ಪ್ರಸಕ್ತ ಶೈಕ್ಷಣಿಕ ಸಾಲಿಗೆ ಹಂಚಿಕೆಯಾದ ಪುಸ್ತಕ ಮತ್ತು ಸಮವಸ್ತ್ರಗಳನ್ನು ಉತ್ತಮ ಕಟ್ಟಡದಲ್ಲಿ ಸಂಗ್ರಹಣೆ ಮಾಡಬೇಕು. ಯಾವುದೇ ಕಾರಣಕ್ಕೂ ಪುಸ್ತಕ ಹಾಗೂ ಸಮವಸ್ತ್ರಗಳು ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯ ಆಸ್ತಿಯ ಇ-ಸ್ವತ್ತು ಮಾಡಿಸಿದ ಒಂದು ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಈವರೆಗೂ ಇ-ಸ್ವತ್ತು ಮಾಡದೇ ಇರುವ ಶಾಲೆಯವರು 15 ದಿನದೊಳಗಾಗಿ ಇ-ಸ್ವತ್ತು ಮಾಡಿಸಿ, ಅದರ ಪ್ರತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ತಾಲೂಕಿನ ಎಲ್ಲಾ 294 ಶಾಲೆಗಳಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಸಮುದಾಯ ಸಹಭಾಗಿತ್ವದೊಂದಿಗೆ ವಿಜೃಂಭಣೆಯಿಂದ ಮಾಡಲು ಸಕಲ ಸಿದ್ಧತೆಯೊಂದಿಗೆ ಮಾಡಬೇಕು. ಯಾವುದೇ ರೀತಿಯ ತೊಂದರೆಗಳು ಆಗದಂತೆ ಶಾಲಾ ಮುಖ್ಯ ಶಿಕ್ಷಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಸಹಾಯಕ ನಿರ್ದೇಶಕ ಜಗದೀಶ ಹಂಡೇಕಾರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಮಹದೇವಪ್ಪ ಮಾದರ, ಬಿ.ಆರ್.ಪಿ. ಶ್ರೀನಿವಾಸ ಟಿ.ಎಂ. ಹಾಗೂ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಉಪಸ್ಥಿತರಿದ್ದರು.