ವಿಶ್ವದಲ್ಲಿಯೇ ಭಾರತಿಯ ಸಂವಿಧಾನ ಶ್ರೇಷ್ಠವಾದದ್ದು: ರವೀಂದ್ರ ಹಾದಿಮನಿ

ವಿಶ್ವದಲ್ಲಿಯೇ ಭಾರತಿಯ ಸಂವಿಧಾನ ಶ್ರೇಷ್ಠವಾದದ್ದು: ರವೀಂದ್ರ ಹಾದಿಮನಿ Indian Constitution is the best in the world: Ravindra Hadimani

ಕಾಗವಾಡ 27: ಸಂವಿಧಾನವನ್ನು ಕೇವಲ ಪಠ್ಯಪುಸ್ತಕಗಳಿಗೆ ಸಿಮಿತಗೊಳಿಸದೇ ಅದನ್ನು ನಿಜ ಜೀವನದಲ್ಲಿ ಪಾಲಿಸಬೇಕು ಇದನ್ನು ಓದಿಕೊಂಡು ಅರ್ಥೈಸಿಕೊಂಡವರು ದೇಶದ ಚಿತ್ರಣವನ್ನು ಕಂಡುಕೊಳ್ಳಬಹುದು. ಭಾರತ ದೇಶದ ಪ್ರಜೆಗಳಾದ ನಮಗೆ ಸಂವಿಧಾನವು ಸಮಾನತೆಯನ್ನು ತಂದುಕೊಟ್ಟಿದೆ ಎಂದು ಕಾಗವಾಡ ತಾಲೂಕಿನ ದಂಡಾಧಿಕಾರಿಗಳಾದ ರವೀಂದ್ರ ಹಾದಿಮನಿಯವರು ಹೇಳಿದರು. 

ಕಾಗವಾಡ ಪಟ್ಟಣದ ಶಿವಾನಂದ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸರಕಾರ ತಾಲೂಕಾ ಆಡಳಿತ, ತಾಲೂಕ ಪಂಚಾಯತ, ಪಟ್ಟಣ ಪಂಚಾಯತ, ಸಮಾಜಕಲ್ಯಾಣ ಇಲಾಖೆ ಹಾಗೂ ಮಹಾವಿದ್ಯಾಲಯದ ಸಮಾಜ ವಿಜ್ಞಾನ ಸಂಘ, ಎಸ್‌.ಸಿ.- ಎಸ್‌.ಟಿ. ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 76ನೇ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ನಂತರ ದೌರ್ಜನ್ಯ ತಡೆ ಸಮಿತಿಯ ಸದಸ್ಯರಾದ ಸಂಜಯ ತಳವಲಕರ ಅವರು ಮಾತನಾಡುತ್ತಾ, ಡಾ. ಬಿ.ಆರ್‌. ಅಂಬೇಡ್ಕರ್ ಅವರು ದೇಶದಲ್ಲಿರುವ ಎಲ್ಲ ಚಿಂತಕರ ವಿಚಾರ ಧಾರೆಗಳನ್ನು ಒಂದುಗೂಡಿಸುವ ಪ್ರಯತ್ನವನ್ನು ಸಂವಿಧಾನದ ಮೂಲಕ ಮಾಡಿದ್ದಾರೆ. ಈ ಮೂಲಕ ಅವರು ಸಮಾಜದಲ್ಲಿರುವ ತಾರತಮ್ಯವನ್ನು ಹೊಗಲಾಡಿಸಲು ಪ್ರಯತ್ನಿಸಿದರು. ಪ್ರಜ್ಞಾವಂತ ಜನರಾದ ನಾವು ಇವತ್ತಿನ ಜಾತಿ ಅಸಮಾನತೆಯನ್ನು ನಿವಾರಿಸಬೇಕಾಗಿದೆ ಎಂದು ಕರೆ ನೀಡಿದರು.  

ಪಾಶ್ಚಾತ್ಯ ದೇಶಗಳು ಭಾರತದ ಸಂವಿಧಾನವನ್ನು ಮಾದರಿಯಾಗಿ ನೋಡುತ್ತವೆ. ದೇಶದ ಸಂವಿಧಾನಕ್ಕೆ ಧಕ್ಕೆಯಾದರೆ ಇಡಿ ದೇಶಕ್ಕೆ ಅದು ದೊಡ್ಡ ಇಕ್ಕಟ್ಟು ಹೀಗಾಗಿ ಸಂವಿಧಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು  ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಪ್ರೊ. ಆಂಜನೇಯ ಕೆ. ಮತ್ತು ಪ್ರೊ. ಯಲ್ಲಾಲಿಂಗ ಆರ್‌. ಪೂಜಾರಿ ಹೇಳಿದರು. ಸಂವಿಧಾನ ಇದು ಬಾಳು ಕಟ್ಟುವ ಪುಸ್ತಕ ಪ್ರಜಾಪ್ರಭುತ್ವವು ಪ್ರಜೆಗಳಿಗೆ ಸಮಾನ ಅವಕಾಶಗಳನ್ನು ನೀಡುವ ಮೂಲಕ ದೇಶದಲ್ಲಿ ಸಮಾನತೆಯನ್ನು ಸಾರಿದೆ ಎಂದು ಪ್ರಾಚಾರ್ಯರಾದ ಡಾ. ಎಸ್‌.ಪಿ. ತಳವಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಮಾಜವಿಜ್ಞಾನ ಸಂಘದ ಅಧ್ಯಕ್ಷರಾದ ಡಾ. ಆರ್‌. ಎಸ್‌. ಕಲ್ಲೋಳಿಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್‌.ಎಸ್‌.ಎಸ್‌. ಘಟಕ-1ರ ಕಾರ್ಯಕ್ರಮಾಧಿಕಾರಿಗಳಾದ ಡಾ. ಚಂದ್ರಶೇಖರ ವಾಯ್‌. ಸ್ವಾಗತಿಸಿದರು. ಪ್ರೊ. ಜೆ.ಎನ್‌. ನಾಯಿಕ್ ವಂದಿಸಿದರು. ಕುಮಾರ ರೋಹಣ ಪಡನಾಡ ನಿರೂಪಿಸಿದರು.  

ಕಾರ್ಯಕ್ರಮದಲ್ಲಿ ಕಾಗವಾಡದ ಪಿ.ಎಸ್‌.ಐ ರಾಘವೇಂದ್ರ ಖೋತ, ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಗಳಾದ ಕೆ.ಕೆ. ಗಾವಡೆ, ಬಿ.ಇ.ಓ. ಪಿ.ಬಿ. ಮದಭಾವಿ, ಸಿ.ಡಿ.ಪಿ.ಓ. ರವೀಂದ್ರ ಗುದಗೆನ್ನವರ, ಸಮಾಜಕಲ್ಯಾಣ ಇಲಾಖಾ ಅಧಿಕಾರಿಗಳಾದ ಎಸ್‌.ಎ. ಮಾಂಗ್, ಐಕ್ಯೂಎಸಿ ಸಂಯೋಜಕರಾದ ಪ್ರೊ. ಬಿ.ಡಿ. ಧಾಮಣ್ಣವರ, ಪ್ರಕಾಶ ದೊಂಡಾರೆ, ಜಯಪಾಲ ಬಡಿಗೇರ, ಅಶೋಕ ಕಾಂಬಳೆ, ಹಣಮಂತ ಮದಾಳೆ, ಸೇರಿದಂತೆ ಎಲ್ಲಾ ಇಲಾಖೆಯ ಸಿಬ್ಬಂದಿ ಸೇರಿದಂತೆ ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.