ಪರಿಸರ ವಿರೋಧಿ ಕಾರ್ಖಾನೆ ತೊಲಗಿಸಲು ಅನಿರ್ಧಿಷ್ಟಾವಧಿ ಧರಣಿ ಆರಂಭ

ಪರಿಸರ ವಿರೋಧಿ ಕಾರ್ಖಾನೆ ತೊಲಗಿಸಲು ಅನಿರ್ಧಿಷ್ಟಾವಧಿ ಧರಣಿ ಆರಂಭ Indefinite strike begins to remove anti-environmental factory

ಕೊಪ್ಪಳ 31: ಉದ್ಯೋಗ ಸೃಷ್ಟಿ ಮಾಡಲು ಕಾರ್ಖಾನೆ ಬೇಕು ಅಂತೇನಿಲ್ಲ, ಅವುಗಳಿಂದ ಎಲ್ಲಾ ಸಮಸ್ಯೆ ಪರಿಹಾರ ಆಗಿದೆ ಎಂಬುದು ಕೇವಲ ಭ್ರಮೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅಭಿಪ್ರಾಯಪಟ್ಟರು. 

ಅವರು ಇಲ್ಲಿನ ನಗರಸಭೆ ಸಂಕೀರ್ಣದ ಮುಂದೆ ಜಂಟಿ ಕ್ರಿಯಾ ವೇದಿಕೆ (ಕೊಪ್ಪಳ ಜಿಲ್ಲಾ  ಬಚಾವೋ ಆಂದೋಲನ ಮತ್ತು ಪರಿಸರ ಹಿತರಕ್ಷಣಾ ವೇದಿಕೆ) ಮೂಲಕ ಹಮ್ಮಿಕೊಂಡಿರುವ ಬಲ್ಡೋಟಾ, ಕಿರ್ಲೋಸ್ಕರ್, ಕಲ್ಯಾಣಿ, ಮುಕುಂದ ಸುಮಿ, ಎಕ್ಸ್‌ ಇಂಡಿಯಾ ಸೇರಿ ಎಲ್ಲಾ ಕಾರ್ಖಾನೆಗಳ ವಿಸ್ತೀರ್ಣ ಮತ್ತು  ಆರಂಭವನ್ನು ವಿರೋಧಿಸಿ ಅನಿರ್ದಿಷ್ಟವಾದಿ ಧರಣಿ ಸತ್ಯಾಗ್ರಹಕ್ಕೆ ಗಾಂಧೀಜಿ ಮತ್ತು ಬಾಬಾಸಾಹೇಬರ ಭಾವಚಿತ್ರಕ್ಕೆ ಮಾಲಾರೆ​‍್ಣ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. 

ಇಲ್ಲಿ ಹಣ ಹೂಡಿಕೆ ಮಾಡುವದು ದೊಡ್ಡ ಸಂಗತಿ ಎಂದು ಭಾವಿಸಿರುವುದೇ ಬಹುದೊಡ್ಡ ತಪ್ಪು, ಹಣದ ಲೆಕ್ಕದಲ್ಲಿ ಜನರಿಗೆ ಬದುಕು ಸಿಗಲ್ಲ. ಜಿಂದಾಲ್ ನಂತಹ ಬೃಹತ್ ಕಾರ್ಖಾನೆ ಏನು ಹೇಳಿ ಬಳ್ಳಾರಿಯಲ್ಲಿ ಬಂದಿತ್ತು ಅದ್ಯಾವುದೂ ಆಗದೇ ಅಲ್ಲಿ ಜನ ಕಂಗಾಲಾಗಿದ್ದಾರೆ, ಬಹುತೇಕ ಕಂಪನಿಗಳು ಈಗ ಉದ್ಯೋಗ ಕಡಿತ ಆರಂಭಿಸಿವೆ. ಈಗ ಉದ್ಯೋಗ ಕೊಡ್ತಿವಿ ಅಂದವರು ಮುಂದೆ ಕೊಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದು ಏನೇ ಇದ್ದರೂ ಉದ್ಯೋಗಕ್ಕಿಂತ ಮೊದಲು ಆರೋಗ್ಯ ಹಾಗೂ ಬದುಕು ಮುಖ್ಯ ಎಂದರು. 

ರೈತ ಚಳುವಳಿಯ ಮುಂಚೂಣಿ ನಾಯಕ ಚಾಮರಸ ಮಾಲಿಪಾಟೀಲ್ ಮಾತನಾ, ಕಾರ್ಖಾನೆಗಳಿಂದ ಬರುತ್ತಿರುವ ಧೂಳು ಮತ್ತು ಹೊಗೆಯಿಂದ ಪರಿಸರ ವಿನಾಶವಾಗಿದೆ, ಬೆಳೆ ಹೋಗಿದೆ, ಬೆಳೆ ವಿಷಕಾರಿಯಾಗಿವೆ ಜೊತೆಗೆ ಇಲ್ಲಿನ ನದಿಯಿಂದ ನೀರನ್ನು ಹೇರಳವಾಗಿ ಬಳಸಿಕೊಂಡು ರೈತರಿಗೆ ಎರಡನೆ ಬೆಳೆಗೆ ನೀರಿಲ್ಲ, ಕುಡಿಯುವ ನೀರು ಮಲಿನವಾಗಿವೆ ಎಂಬ ಸಾಮಾನ್ಯ ಪ್ರಜ್ಞೆ ಇಟ್ಟುಕೊಳ್ಳದಿರುವದು ವಿಷಾಧಕರ ಸಂಗತಿ ಎಂದರು. ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೋರಾಟಕ್ಕೆ ಕೊಟ್ಟ ಚಾಲನೆಯನ್ನು ನಿಲ್ಲಿಸಬಾರದು, ಹೋರಾಟದ ಮೂಲಕ ಬದುಕು, ಉಸಿರು ಮರಳಿ ಕೊಟ್ಟರೆ ಶ್ರೀಗಳು ಇಲ್ಲಿನ ಜನರಿಗೆ ಮಾಡುವ ಬಹುದೊಡ್ಡ ಉಪಕಾರವಾದೀತು, ನಾವು ನಿಮ್ಮನ್ನು ದೇವರಂತೆ ಪೂಜಿಸುತ್ತೇವೆ ಎಂದು ಮನವಿ ಮಾಡಿದರು. ಅಲ್ಲದೇ ರಾಜ್ಯ ರೈತ ಸಂಘ ಮತ್ತು ಸಂಯುಕ್ತ ಹೋರಾಟ ಸಮಿತಿ ಮೂಲಕ ರಾಜ್ಯಮಟ್ಟದ ಬೃಹತ್ ಆಂದೋಲನ ಮಾಡಲು ಸಜ್ಜಾಗೋಣ ಎಂದರು. 

ವೇದಿಕೆ ಮೇಲೆ ಇದ್ದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಸ್ವಾತಂತ್ರ-್ಯ ಪಡೆದು 75 ವರ್ಷಗಳ ನಂತರ ಮತ್ತೆ ಮತ್ತೆ ಹೋರಾಟ ಮಾಡಬೇಕಿರುವದು ದುರಂತ, ಗಾಂಧೀಜಿ ಅವರು ಬ್ರಿಟೀಷರಿಂದ ಸ್ವಾತಂತ್ರ-್ಯವನ್ನು ಕೊಡಿಸಿದರೆ, ಬದುಕುವ ಸ್ವಾತಂತ್ರ-್ಯವನ್ನು ಕೊಟ್ಟ ಬಾಬಾಸಾಹೇಬರ ಆದರ್ಶದೊಂದಿಗೆ ಮುಂದುವರಿಯಬೇಕಿದೆ, ಇಲ್ಲಿ ಕೇವಲ ನಾವು ಹೋರಾಟಗಾರರಷ್ಟೇ ಅಲ್ಲ ಎಲ್ಲರೂ ಬದುಕುತ್ತಿದ್ದೇವೆ ಎಲ್ಲರೂ ಒಗ್ಗಟ್ಟಾಗಿ ಹೋರಾಟಕ್ಕೆ ಬರಬೇಕು ಎಂದು ಕರೆ ನೀಡಿದರು. 

ಸಭೆಯ ಅಧ್ಯಕ್ಷತೆವಹಿಸಿಕೊಂಡ ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅವರು ಮಾತನಾಡಿ, ಹಲವು ತಿಂಗಳಿನಿಂದ ಹೋರಾಟ ನಡೆದಿದ್ದು ಇದು ನಿರಂತರವಾಗಿ ನಡೆಯುತ್ತದೆ. ಇಲ್ಲಿ ಕೂಗಳತೆ ದೂರದಲ್ಲಿ ಅರ್ಧ ಲಕ್ಷ ಕೋಟಿ ಹಣದಲ್ಲಿ ಕಾರ್ಖಾನೆ ಮಾಡಲು ಹೊರಟಿರುವದು ನಮ್ಮ ಉದ್ಧಾರಕ್ಕಲ್ಲ ಅದು ಅವರ ಲಾಭಕ್ಕೆ ಎಂಬ ಅರಿವು ನಮಗೆ ಇರಬೇಕಿದೆ, ಕೊಪ್ಪಳ ಜಿಲ್ಲಾ ಹೋರಾಟ ಮಾಡುವಾಗಲೂ ಸಹ ಯಾವ ರಾಜಕಾರಣಿ ಇರಲಿಲ್ಲ ಮತ್ತು ದೊಡ್ಡ ಸಂಖ್ಯೆಯ ಜನ ಇರಲಿಲ್ಲ, ಆದರೂ ಒಂದು ದಿನ ನಾವು ಗೆದ್ದಿದ್ದೇವೆ, ಈಗಲೂ ನಾವು ಈ ಹೋರಾಟ ಮಾಡುತ್ತಿದ್ದೇವೆ, ಗೆದ್ದೇ ಗೆಲ್ಲುತ್ತೇವೆ ಎಂದರು. 

ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಎ.ಎಂ. ಮದರಿ, ಮಹಿಳಾ ಹೋರಾಟಗಾರ್ತಿ ಶಶಿಕಲಾ, ಜಂಟಿ ಕ್ರಿಯಾ ವೇದಿಕೆ ಹೋರಾಟ ಸಂಚಾಲಕರಾದ ಕೆ. ಬಿ. ಗೋನಾಳ, ಡಿ. ಹೆಚ್‌. ಪೂಜಾರ, ಮಂಜುನಾಥ ಜಿ. ಗೊಂಡಬಾಳ, ಮಹಾಂತೇಶ ಕೊತಬಾಳ, ನಜೀರಸಾಬ್ ಮೂಲಿಮನಿ, ಶರಣು ಗಡ್ಡಿ, ಎಸ್‌.ಎ.ಗಫಾರ್, ಬಸವರಾಜ ಶೀಲವಂತರ, ಎಸ್‌.ಬಿ. ರಾಜೂರ, ರವಿ ಕಾಂತನವರ, ಚಿಟ್ಟಿಬಾಬು ಸಿಂಧನೂರು, ಭೀಮಸೇನ ಕಲಿಕೇರಿ, ಶರಣು ಪಾಟೀಲ್, ಹನುಮಂತಪ್ಪ, ಬಸವರಾಜ ಯರದಿಹಾಳ, ಮೂಕಣ್ಣ ಮೇಸ್ತ್ರಿ, ಮಂಗಳೇಶ ರಾಠೋಡ, ಬಸವರಾಜ ನರೆಗಲ್, ರಮೇಶ ಪಾಟೀಲ್ ಬೇರಿಗಿ, ಗವಿಸಿದ್ದಪ್ಪ ಹಲಿಗಿ, ಯಮನೂರ​‍್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಮಾವಿನಮಡು, ದುರುಗೇಶ ಹಿರೇಮನಿ ವಟಪರ್ವಿ, ಸುಂಕಮ್ಮ ಗಾಂಧಿನಗರ, ಭೀಮಪ್ಪ ಯಲಬುರ್ಗಾ, ಚನ್ನಬಸಪ್ಪ ಅಪ್ಪಣ್ಣವರ ಅನೇಕರಿದ್ದರು.  

ಇದಕ್ಕೂ ಮೊದಲು ಅಶೋಕ ವೃತ್ತದಲ್ಲಿ ಪ್ರತಿಭಟನಾರ್ಥವಾಗಿ ಘೋಷಣೆ ಕೂಗಿ ಅಲ್ಲಿಂದ ಮೆರವಣಿಗೆ ಮೂಲಕ ನಗರಸಭೆ ಮುಂದೆ ಬಂದು ಧರಣಿ ನಡೆಸಿದರು. ನ. 1 ರಂದು ಕೊಪ್ಪಳದ ಕಲ್ಯಾಣ ನಗರ ನಿವಾಸಿಗಳು ಪ್ರತಿಭಟನೆ ಮಾಡುವರು.