ಸಾಧನೆ ಮಾಡುವ ಮನಸ್ಸಿದ್ದರೆ ಅಂಗ ವೈಕಲ್ಯ ಲೆಕ್ಕಕ್ಕೆ ಬರುವುದಿಲ್ಲ; ಬಸವರಾಜ ಉಮರಾಣಿ

ಸಾಧನೆ ಮಾಡುವ ಮನಸ್ಸಿದ್ದರೆ ಅಂಗ ವೈಕಲ್ಯ ಲೆಕ್ಕಕ್ಕೆ ಬರುವುದಿಲ್ಲ; ಬಸವರಾಜ ಉಮರಾಣಿ If you have the will to achieve, disability doesn't matter; Basavaraja Umarani

ಲೋಕದರ್ಶನ ವರದಿ 

ವಿಜಯಪುರ 27: ದೇವರು ನನಗೆ ದೃಷ್ಠಿ ಕೊಟ್ಟಿದ್ದರೆ ಬಹುಶಃ ಇಂತಹ ಸಾಧನೆ ಮಾಡುವ ಧೈರ್ಯ ಮಾಡುತ್ತಿರಲಿಲ್ಲ. ನಮ್ಮಲ್ಲಿರುವ ಸಮಸ್ಯೆಗಳು ನಮ್ಮ ಸಾಧನೆಗೆ ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಸಾಧನೆ ಮಾಡುವ ಮನಸಿದ್ದರೆ ಸರ್ವ ಸಿದ್ಧಿಯಾಗುತ್ತದೆ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು. ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದ ಅವರು; ಗಣಿತ ಎನ್ನುವುದು ಹಲವರಿಗೆ ಕಬ್ಬಿಣದ ಕಡಲೆಯಾದರೆ ಕೆಲವರಿಗೆ ಅದು ಎಲ್ಲದಕ್ಕಿಂತಲೂ ಸಾಮಾನ್ಯವಾದ ವಿಷಯವಾಗಿ ಕಾಣುತ್ತದೆ.

ಅದಕ್ಕೆ ಕಾರಣ ಆ ವಿಷಯದ ಮೇಲಿರುವ ಅಕ್ಕರೆ. ಯಾವುದನ್ನು ನಾವು ಇಷ್ಟಪಟ್ಟು ಮಾಡುತ್ತೇವೆಯೋ ಅದು ಎಂದಿಗೂ ನಮಗೆ ಬೇಸರ ಮೂಡಿಸುವುದಿಲ್ಲ. ಇಷ್ಟಪಡದೇ ಮಾಡಿದಲ್ಲಿ ಯಾವುದು ನಮಗೆ ಸಿದ್ಧಿಸುವುದಿಲ್ಲ. ಉದಾಹರಣೆಗೆ ನಾನೇ ಇದ್ದೇನೆ. ಕಣ್ಣಿದ್ದ ಶಕುಂತಲಾ ದೇವಿ ಮಾನವ ಕಂಪ್ಯೂಟರ್ ಎಂದು ಕರೆಸಿಕೊಳ್ಳುತ್ತಾರೆ ಎಂದರೆ ನಾನೇಕೆ ಕರೆಸಿಕೊಳ್ಳಬಾರದು ಎಂದು ನಿರ್ಧಾರ ಮಾಡಿದ್ದಕ್ಕಾಗಿ ಇಂದು ನಿಮ್ಮೆದುರಿಗೆ ನಿಂತು ಮಾತಾಡುತ್ತಿದ್ದೇನೆ.

ಅದಕ್ಕೆ ಹೇಳುತ್ತೇನೆ ಬದುಕಿನಲ್ಲಿ ಯಾವುದನ್ನು ಕೊರತೆ ಎಂದು ತಿಳಿದುಕೊಳ್ಳುತ್ತೇವೆಯೋ ಅದು ಎಂದಿಗೂ ನಮಗೆ ನೆಮ್ಮದಿ ನೀಡುವುದಿಲ್ಲ. ಅದರ ಬದಲಿಗೆ ಕೊರತೆಯನ್ನೇ ಬದುಕಿನ ಒರತೆಯನ್ನಾಗಿ ಮಾಡಿಕೊಂಡು ಹೆಜ್ಜೆ ಹಾಕಿದ್ದೇ ಆದಲ್ಲಿ ಬಾಳು ಹಸಿರಾಗುತ್ತದೆ. ನಾವಿಲ್ಲಿ ಬಂದಿದ್ದು ಸಾಧನೆ ಮಾಡುವುದಕ್ಕಾಗಿಯೇ ಹೊರತು ಸಂಕಟ ಪಟ್ಟುಕೊಳ್ಳುವುದಕ್ಕಲ್ಲ. ಸವಾಲು ಹಾಕುವ ಜನಗಳ ಎದುರಿಗೆ ಜವಾಬು ನೀಡುತ್ತಲೇ ಬದುಕುವುದನ್ನು ಕಲಿತಾಗ ಮಾತ್ರ ಬದುಕಿನಲ್ಲಿ ಏನಾದರು ಮಾಡುವುದಕ್ಕೆ ಸಾಧ್ಯ್ಯವಾಗುತ್ತದೆ ಎಂದು ತಿಳಿಸಿದರು. 

ಪ್ರಾಂಶುಪಾಲ ಮಂಜುನಾಥ ಮ. ಜುನಗೊಂಡ ಅವರು ಮಾತನಾಡಿ ಆದರ್ಶವಿಲ್ಲದೆ ಬದುಕಿದರೆ ಬದುಕಿಗೆ ಅವಮಾನ, ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ಹೇಳಿದ ಮಾತು ಅಕ್ಷರಶಃ ಯುವಜನತೆ ಎದೆಯಲ್ಲಿ ಅಚ್ಚು ಹಾಕಿಸಿಕೊಳ್ಳಬೇಕು. ಕಣ್ಣಿಲ್ಲದ ವ್ಯಕ್ತಿ ಇಷ್ಟೆಲ್ಲ ಮಾಡುವಾಗ ದೇವೆರು ನಮಗೆ ಎಲ್ಲವನ್ನು ಸರಿಯಾಗಿ ಇಟ್ಟಿದ್ದಾನೆ. ಹೊಸ ಶತಮಾನಕ್ಕೆ ಮುನ್ನುಡಿ ಬರೆಯುವ ಅವಕಾಶ ಕೊಟ್ಟಿದ್ದಾನೆ ಅದನ್ನು ಸಮರ​‍್ಕವಾಗಿ ಬಳಸಿಕೊಂಡು ಅಪ್ಪ ಅಮ್ಮನ ಆಸೆಯನ್ನು ಈಡೇರಿಸುವುದರ ಕಡೆಗೆ ಹೆಜ್ಜೆ ಹಾಕಬೇಕೆ ಹೊರತು ನನ್ನಿಂದ ಏನಾಗುತ್ತದೆ.

ನಾನೇನು ಮಾಡಬಲ್ಲೆ ಎಂದುಕೊಂಡು ಅಳುತ್ತ ಕುಳಿತುಕೊಳ್ಳಬಾರುದು. ಎಲ್ಲಿ ನೋವಿದೆಯೋ ಅಲ್ಲಿಯೇ ಗೆಲುವಿದೆ ಎನ್ನುವುದನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು. ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ನಿಲಯದ ಮುಖ್ಯಸ್ಥರು, ನಿಲಯಪಾಲಕರು ಉಪಸ್ಥಿತರಿದ್ದರು. ಆಂಗ್ಲ ಉಪನ್ಯಾಸಕ ಮುಸ್ತಾಕ ಮಲಘಾಣ ನಿರೂಪಿಸಿದರು.