ಮಕ್ಕಳ ಪ್ರತಿಭೆ ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ಪ್ರತೆಭೆಗಳನ್ನಾಗಿ ರೂಪಿಸಿ:ಸಚಿವ ಸತೀಶ್ ಜಾರಕಿಹೊಳಿ

ಮಕ್ಕಳ ಪ್ರತಿಭೆ ಗುರುತಿಸಿ ಅಂತರಾಷ್ಟ್ರೀಯ ಮಟ್ಟದ ಪ್ರತೆಭೆಗಳನ್ನಾಗಿ ರೂಪಿಸಿ:ಸಚಿವ ಸತೀಶ್ ಜಾರಕಿಹೊಳಿ Identify children's talents and develop them into international level talents: Minister Satish Jarki

ಬೆಳಗಾವಿ, ಫೆ.06:ಬೆಳಗಾವಿಯ ಶ್ರೀನಗರದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್‌ ಕ್ರಿಕೆಟ್ ಮೈದಾನವನ್ನು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಉದ್ಘಾಟಿಸಿದರು. 

ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್‌ ಕ್ರಿಕೆಟ್ ಮೈದಾನ ಉದ್ಘಾಟಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ರಿಕೆಟ್ ಆಡುವ ಮೂಲಕ ಜನಮನ ಸೆಳೆದರು. ಇಬ್ಬರು ಸಚಿವರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಆಸಿಫ್ ಸೇಠ್ ಸಾಥ್ ನೀಡಿದರು.  

ಬಾಕ್ಸ್‌ ಕ್ರಿಕೆಟ್ ಮೈದಾನ ವೀಕ್ಷಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಜಿಲ್ಲೆಯಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸರಿಯಾದ ತರಬೇತಿ ನೀಡುವ ಮೂಲಕ ಅವರನ್ನು ರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಆಟಗಾರರನ್ನಾಗಿ ರೂಪಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳು ಹಾಗೂ ಕ್ರಿಕೆಟ್ ತರಬೇತಿದಾರರಿಗೆ ಸೂಚಿಸಿದರು. 

ಕ್ರಿಕೆಟ್ ನಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಈ ಒಳಾಂಗಣ ಬಾಕ್ಸ್‌ ಕ್ರಿಕೆಟ್ ಮೈದಾನ ತರಬೇತಿ ಪಡೆಯಲು ಅನುಕೂಲವಾಗಲಿದೆ. ಮಕ್ಕಳು ಇಲ್ಲಿ ತರಬೇತಿ ಪಡೆಯುವ ಮೂಲಕ ಕ್ರಿಕೆಟ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂದು ಆಶಿಸಿದರು.  

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳಕರ್ ಮಾತನಾಡಿ, ಅವ್ಯವಸ್ಥೆಯಲ್ಲಿದ್ದ ಜಿಲ್ಲಾ ಬಾಲಭವನ ಕಟ್ಟಡವೂ ಸಿಇಓ ರಾಹುಲ್ ಶಿಂದೆ ಅವರ ಕಣ್ಣಿಗೆ ಬಿದ್ದರಿಂದ ಇಂದು ಈ ಬಾಲಭವನದಲ್ಲಿ ಸುಸಜ್ಜಿತ ಒಳಾಂಗಣ ಬಾಕ್ಸ್‌ ಕ್ರಿಕೆಟ್ ಮೈದಾನವಾಗಿ ಹೊರಹೆಮ್ಮಿದೆ. ಈ ಕ್ರೀಡಾಂಗಣ ನಿರ್ಮಾಣಕ್ಕೆ ಅವರ ಅಭಿವೃದ್ಧಿಪರ ಇಚ್ಛಾಶಕ್ತಿಯೇ ಕಾರಣವೆಂದು ತಿಳಿಸಿದರು.

ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ್ ಸಿಂಧೆ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಚೇತನಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಮದೇವ ಬಿಲ್ಕರ್, ಸಿಡಿಪಿಒ ಸುಮಿತ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.