ರಾಜ್ಯಪಾಲರಿಂದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್ಗೆ ಚಾಲನೆ
Governor launches Drug-Free India, Yuva Shuddhi Abhiyan walkathon
ಲೋಕದರ್ಶನ ವರದಿ
ಬಳ್ಳಾರಿ 18: ಮಾದಕ ವ್ಯಸನವು ಕೇವಲ ವ್ಯಕ್ತಿಯ ಸಮಸ್ಯೆಯಲ್ಲ. ಕುಟುಂಬಗಳನ್ನು ವಿಘಟಿಸಿ ಸಮಾಜದಲ್ಲಿ ಅಶಾಂತಿ ಮತ್ತು ಅಪರಾಧಗಳನ್ನು ಹೆಚ್ಚಿಸುವ ರಾಷ್ಟ್ರೀಯ ಸವಾಲಾಗಿದೆ. ಸದೃಢ ಭಾರತ ನಿರ್ಮಾಣಕ್ಕಾಗಿ ಯುವಶಕ್ತಿಯು ವ್ಯಸನ ಮುಕ್ತ ಇಂದಿನ ಅತ್ಯಗತ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಬಳ್ಳಾರಿ ನಗರದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಕ್ರೀಡಾಂಗಣ ಮೈದಾನದಲ್ಲಿ ಬುಧವಾರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ದಿಶಾಬೋಧಿ ಫೌಂಡೇಷನ್ ಮತ್ತು ನಾರ್ಕೋಟಿಕ್ಸ್ ಬ್ಯೂರೋ ಸಹಯೋಗದಲ್ಲಿ ಆಯೋಜಿಸಿದ್ದ ನಶಾ ಮುಕ್ತ ಭಾರತ, ಯುವ ಶುದ್ಧಿ ಅಭಿಯಾನ ವಾಕಥಾನ್ಗೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದ ಪುಣ್ಯ ಭೂಮಿಯು ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ. ಬಸವಣ್ಣನವರಂತಹ ಮಹಾನ್ ಸಂತರ ಬೋಧನೆಗಳು ನಮಗೆ ಸದಾ ಸಂಯಮ ಮತ್ತು ಸದಾಚಾರದ ಹಾದಿಯನ್ನು ತೋರಿಸಿವೆ. ಇಂತಹ ಪವಿತ್ರ ಮಣ್ಣಿನಲ್ಲಿ ಮಾದಕದ್ರವ್ಯಗಳ ಹಾವಳಿ ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಭಾರತವು ವಿಶ್ವದ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಯುವಜನತೆಯಲ್ಲಿರುವ ಶಕ್ತಿಯು ದೇಶವನ್ನು ವಿಕಸಿತ ಭಾರತದ ಕೊಂಡೊಯ್ಯಲು ಸಹಕಾರಿಯಾಗಬೇಕು. ಅದು ಸಾಕಾರವಾಗಬೇಕಾದರೆ ಯುವಪೀಳಿಗೆ ಮಾದಕ ದ್ರವ್ಯಗಳಿಂದ ಮುಕ್ತವಾಗಬೇಕು ಎಂದು ಹೇಳಿದ ರಾಜ್ಯಪಾಲರು, ತಮ್ಮ ವೈಯಕ್ತಿಕ ಜೀವನದ ಶಿಸ್ತನ್ನು ನೆನಪಸಿಕೊಂಡರು. 'ನಾನು ಬಾಲ್ಯದಿಂದಲೂ ಯಾವುದೇ ರೀತಿಯ ವ್ಯಸನಕ್ಕೆ ಒಳಗಾಗಿಲ್ಲ. ಕನಿಷ್ಠ ಅಡಿಕೆಯನ್ನೂ ತಿನ್ನುವ ಅಭ್ಯಾಸ ನನಗಿಲ್ಲ. ಈ ನೈತಿಕ ಶಿಸ್ತು ನನ್ನನ್ನು ಸಕ್ರಿಯವಾಗಿರಲು ಪ್ರೇರೇಪಿಸುತ್ತದೆ' ಎಂದು ಹೇಳಿ ಯುವ ಸಮೂಹಕ್ಕೆ ಸ್ಪೂರ್ತಿ ತುಂಬಿದರು. ಯುವ ಶುದ್ಧಿ ಅಭಿಯಾನವು ದೇಶಾದ್ಯಂತ ಬದಲಾವಣೆಯ ಅಲೆಯನ್ನು ಸೃಷ್ಟಿಸಲಿ ಎಂದು ಶುಭ ಹಾರೈಸಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ಯುವಜನತೆ ಮಾದಕ ವ್ಯಸನದಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದೆ, ಆರೋಗ್ಯವಂತ ಮತ್ತು ಸದೃಢ ಭಾರತದ ನಿರ್ಮಾಣಕ್ಕೆ ಕೈಜೋಡಿಸಬೇಕು. ನಮ್ಮ ದೇಶದ ಅತಿ ದೊಡ್ಡ ಶಕ್ತಿ ಯುವಸಂಪತ್ತು. ಆದರೆ ಇಂದು ಮಾದಕ ದ್ರವ್ಯಗಳ ಜಾಲವು ಈ ಶಕ್ತಿಯನ್ನು ಕುಂದಿಸುತ್ತಿದೆ. ಸಣ್ಣ ವಯಸ್ಸಿನಲ್ಲೇ ಹೃದಯಾಘಾತ ಮತ್ತು ಮೆದುಳು ಸಂಬಂಧಿ ಕಾಯಿಲೆಗಳಿಗೆ ಮಾದಕ ವ್ಯಸನವೇ ಪ್ರಮುಖ ಕಾರಣವಾಗುತ್ತಿದೆ. ಇದನ್ನು ತಡೆಗಟ್ಟಲು ವಿಶ್ವವಿದ್ಯಾಲಯವು ರಾಜ್ಯಾದ್ಯಂತ ಅಭಿಯಾನ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ನಿರ್ಮಾಣಕ್ಕಾಗಿ ಪ್ರತಿಯೊಂದು ಕಾಲೇಜಿನಲ್ಲಿ 'ಮಾದಕ ದ್ರವ್ಯ ವಿರೋ ಪಡೆ'ಯನ್ನು ರಚಿಸಲಾಗಿದೆ. ವಿದ್ಯಾರ್ಥಿಗಳು ಕೇವಲ ವ್ಯಸನದಿಂದ ದೂರವಿರುವುದಷ್ಟೇ ಅಲ್ಲದೆ, ತಮ್ಮ ಸುತ್ತಮುತ್ತಲಿನವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಆಶಿಸಿದರು. ಕ್ಯಾಥೋಲಿಕ್ ಬಿಷಪ್ ಹೆನ್ರಿ ಡಿಸೋಜ ಮಾತನಾಡಿ, ನಾವು ಎಲ್ಲಿ ಮತ್ತು ಯಾರಿಗೆ ಹುಟ್ಟುತ್ತೇವೆ ಎಂಬುದು ಮುಖ್ಯವಲ್ಲ. ಜೀವನದಲ್ಲಿ ಯಾವ ಗುರಿಯನ್ನು ತಲುಪುತ್ತೇವೆ ಎಂಬುದು ಮುಖ್ಯ. ಯುವಜನರು ಮಾದಕ ವ್ಯಸನದಿಂದ ಮುಕ್ತರಾಗಿ, ಉನ್ನತ ಸಾಧನೆಯ ಹಾದಿ ಹಿಡಿದಾಗ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದು ತಿಳಿಸಿದರು. ನಾಡಿನ ಹಿರಿಯ ಕವಿ ಡಾ.ಜಿ.ಎಸ್.ಶಿವರುದ್ರ್ಪನವರ ಸಾಲುಗಳನ್ನು ಉಲ್ಲೇಖಿಸಿದ ಅವರು, ನಮ್ಮ ದೇಶದಲ್ಲಿ ನಾನಾ ಧರ್ಮ, ಜಾತಿ ಹಾಗೂ ಪಂಥದ ಜನರಿದ್ದಾರೆ. ಆದರೆ ನಾವು ಇಂದು ಹುಡುಕಬೇಕಿರುವುದು ಮನುಷ್ಯತ್ವವನ್ನು. ಮನುಷ್ಯರು ಪ್ರೀತಿ, ಗೌರವ ಹಾಗೂ ಸಹಬಾಳ್ವೆಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಕಮ್ಮರಚೇಡು ಶ್ರೀಕಲ್ಯಾಣಸ್ವಾಮಿ ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಮಾತನಾಡಿ, ವಿಜ್ಞಾನ ಬೆಳೆದಂತೆ ಮನುಷ್ಯನಲ್ಲಿ ಅಜ್ಞಾನ ಮತ್ತು ಅಹಂಕಾರವೂ ಹೆಚ್ಚುತ್ತಿದೆ. ಆರೋಗ್ಯ ಭಾಗ್ಯದ ಮುಂದೆ ಅಧಿಕಾರ ಅಥವಾ ಆಯುಷ್ಯದ ಭಾಗ್ಯವಿದ್ದರೂ ಪ್ರಯೋಜನವಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಆದರೆ ಇಂದು ನಮಗೆ ವಿಷಮುಕ್ತವಾದ ಹಣ್ಣು, ತರಕಾರಿ ಅಥವಾ ಶುದ್ಧವಾದ ಗಾಳಿ ಸಿಗುತ್ತಿಲ್ಲದಿರುವುದು ದುರದೃಷ್ಟಕರ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇವಲ ಶಿಕ್ಷಣಕ್ಕೆ ಸೀಮಿತವಾಗದೆ, ಸಾಮಾಜಿಕ ಮತ್ತು ನೈತಿಕ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.
ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಈ ದೇಹವು ಮತ್ತೊಬ್ಬರಿಗೆ ಆಸರೆಯಾಗುತ್ತದೆ ಎಂದರೆ ನಾವೆಲ್ಲರೂ ದೇಹದಾನ ಮಾಡಲು ಸಿದ್ಧರಿರಬೇಕು. ನಾವು ಸ್ವಾಮೀಜಿಗಳಾಗಿದ್ದರೂ ಈಗಾಗಲೇ ನೇತ್ರದಾನ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ದೇಹದಾನ ಮಾಡಲು ಕೂಡ ಸಿದ್ಧರಿದ್ದೇವೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ 'ಮಾದಕ ದ್ರವ್ಯ ಮುಕ್ತ ಭಾರತ'ಕ್ಕಾಗಿ ಪ್ರತಿಜ್ಞಾ ವಿಧಿ ಬೋಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಪಿ.ಗಾದೆಪ್ಪ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಇನ್ಸ್ಪೆಕ್ಟರ್ ವಿಕಾಸ್ ಸಿಂಗ್, ದಿಶಾಬೋರ್ಡ್ ಫೌಂಡೇಷನ್ ನಿರ್ದೇಶಕರಾದ ಕೆ.ಶಿವವಾಗಿ ರೆಡ್ಡಿ, ಎಸ್.ಪಿ.ಚಿದಾನಂದ, ಜಾನೆಕುಂಟೆ ಬಸವರಾಜ್ ಸೇರಿದಂತೆ ಇತರರು ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 