ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದ ಆದ್ಯತೆ: ಪ್ರಕಾಶ ಹುಕ್ಕೇರಿ

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಸರ್ಕಾರದ ಆದ್ಯತೆ: ಪ್ರಕಾಶ ಹುಕ್ಕೇರಿ Government's priority for rural road development: Prakash Hukkeri

ಚಿಕ್ಕೋಡಿ 21 : ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ರಸ್ತೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಗ್ರಾಮೀಣ ಜನತೆಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ. ತಾಲೂಕಿನ ನನದಿ-ಸಿಬಿ ಕೋರೆ ಸಕ್ಕರೆ ಕಾರ್ಖಾನೆ ರಸ್ತೆಯ ಹವಾಲ್ದಾರ್ ಹಾಗೂ ನಾಯಿಕ ತೋಟದ ಮೂಲಕ ಬಸವನಗುಡಿ ಕೆನಾಲ್ ವರೆಗೆ ರೂ. 50 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ರಸ್ತೆ ಅಭಿವೃದ್ಧಿಯಿಂದ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಸಂಚಾರ ಸುಲಭವಾಗುವುದಲ್ಲದೆ, ರೈತರಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಹೆಚ್ಚಿನ ಅನುಕೂಲವಾಗಲಿದೆ. ಇನ್ನಷ್ಟು ಗ್ರಾಮೀಣ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಮಲ್ಲು ಹವಾಲ್ದಾರ್, ಬಂಡು ನಾಯಿಕವಾಡಿ, ಅಪ್ಪಸಾಹೇಬ ಸುರನ್ನವರ, ಕುಮಾರ್ ಪೂಜಾರಿ, ಕಾಂತೇಶ ನಾಯಿಕ, ದುಂಡಪ್ಪ ಸುಳೆ, ರಾಜು ಚವ್ಹಾಣ್, ರಾಜು ಶಿಂಧೆ, ಸಂಪತ್ ಠೋರಾತ್, ವಿಠ್ಠಲ್ ಹವಾಲ್ದಾರ್, ಅಪ್ಪಾ ಹವಾಲ್ದಾರ್, ಸುರೇಶ್ ಪೂಜಾರಿ,  ಸೇರಿದಂತೆ ಹಲವರು ಉಪಸ್ಥಿತರಿದ್ದರು.