ಸ್ತ್ರೀ ಯರಿಗೆ ಸಮಾನತೆಯ ಹಕ್ಕನ್ನು ನೀಡಿ : ಬಸವ ಶಾಂತಲಿಂಗ ಸ್ವಾಮೀಜಿ
ಹಾವೇರಿ 26: ಹೆಣ್ಣು ಸಮಾಜದ ಕಣ್ಣು.ಬದುಕು ಮನೆಯ ಕಿಟಕಿಯಂತೆ.ತೆರೆದರೆ ಬೆಳಕು, ಇಲ್ಲದಿದ್ದರೆ ಕತ್ತಲು.ಹಾಗೆ ಸುಖ-ದುಃಖಗಳನ್ನು ತಾಳ್ಮೆ ಮತ್ತು ಆತ್ಮವಿಶ್ವಾಸ ಗೆಲುವು ಶಕ್ತಿ ಮಹಿಳೆಗಿದೆ. ಭಾವನೆಗಳನ್ನು ಬಂಧನದಲ್ಲಿ ಇಡಬೇಡಿ ಏಕೆಂದರೆ ಅವುಗಳಿಗೆ ಪ್ರೀತಿಯ ರೆಕ್ಕೆಗಳಿವೆ,ಹಾಗೆ ಮಮಕಾರದ ಮಾನವಿಯ ಗುಣಗಳನ್ನು ಹೊಂದಿದೆ. ಸ್ತ್ರೀ ಯರಿಗೆ ಸಮಾನತೆಯ ಹಕ್ಕನ್ನು ನೀಡಿ ಸಾಮಾಜಿಕ ಕಟ್ಟುಪಾಡುಗಳಿಂದ ಮುಕ್ತಗೊಳಿಸಿದ ಹೆಗ್ಗಳಿಕೆ ಅನುಭವ ಮಂಟಪಕ್ಕೆ ಸಲ್ಲುತ್ತದೆ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿನ ಹೊಸಮಠದಲ್ಲಿ ಬಸವಕೇಂದ್ರ ಹಾಗೂ ಅಕ್ಕಮಹಾದೇವಿ ಮಹಿಳಾ ಬಳಗದ ಜಂಟಿ ಆಶ್ರಯದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಶ್ರೀಗಳು ಮಾತನಾಡಿದರು.
ಹೆಣ್ಣು ಮಕ್ಕಳನ್ನು ಹೀಗಳೆಯುತ್ತಿದ್ದ ಕಾಲಘಟ್ಟದಲ್ಲಿ ಶಿವಶರಣರು ಅವರನ್ನು ಹೊಗಳುವಂತೆ ಮಾಡಿದರು.ಅಕ್ಕಮಹಾದೇವಿ,ಆಯ್ದಕ್ಕಿ ಲಕ್ಕಮ್ಮ, ಸತ್ಯಕ್ಕ ಅವರಂಥ ದಿಟ್ಟ ಶರಣೆಯರು ಜಿಡ್ಡು ಗಟ್ಟಿದ ವ್ಯವಸ್ಥೆಯನ್ನು ಪ್ರಶ್ನಿಸಿದರು. ಜಗತ್ತಿನ ಮೊದಲ ಸಂಸತ್ತಿಗೆ ಮೆರುಗು ತಂದರು. ಮಹಿಳೆಯರ ಶ್ರೇಷ್ಠತೆಯನ್ನು ಸಾರಿ ಮೌಲ್ಯ ಹೆಚ್ಚಿಸಿದರು.ಅವರ ಪ್ರೇರಣೆಯಿಂದ ಸಂಪತ್ತಿಗಿಂತ ಸಂಬಂಧಗಳಿಗೆ ಒತ್ತು ಕೊಟ್ಟು ಸಾಗಬೇಕಿದೆ ಎಂದರು.
ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪ್ರೇಮಾ ಎಸ್.ಪಾಟೀಲ ಮಾತನಾಡಿ ಮಹಿಳೆಯರು ಶಿಕ್ಷಣ ಪಡೆದ ಬಳಿಕ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿರುವರು.ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಗುತ್ತಿರುವರು. ವಾಲುಗಳನ್ನು ಮೀರಿ ತನ್ನತನವನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವಳು.ಇದು ಅಭಿಮಾನ ಪಡುವ ಸಂಗತಿ ಎಂದರು.ಅಧ್ಯಕ್ಷತೆವಹಿಸಿದ್ದ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಶೋಭಾ ನಿಸ್ಸೀಮಗೌಡ್ರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮಹಿಳೆ ತನ್ನ ಪಾಲಿನ ಜವಾಬ್ದಾರಿ ನಿಭಾಯಿಸುತ್ತಿರುವಳು.ಆದರೆ ಇಂದಿಗೂ ತನಗೆ ಬೇಕಿರುವ ಹಕ್ಕುಗಳನ್ನು ಕೇಳುತ್ತಿರುವಳು.ತಾರತಮ್ಯ ಸಹಿಸದ ಆಕೆ ಸಬಲೀಕರಣದತ್ತ ಮುನ್ನುಗ್ಗಲು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಸುಮಾನ್ ಕಟಕೋಳ,ಡಾ.ಉಷಾ ವೀರಾಪುರ,ರೇಣುಕಾ ಶಿರಗಂಬಿ,ಉಮಾದೇವಿ ಹಿರೇಮಠ, ಲಲಿತಾ ಹಿರೇಮಠ ಮಾತನಾಡಿದರು.ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.ಸಾಧಕಿಯರಾದ ಪಲ್ಲವಿ ಜಿ,ಬಸಮ್ಮ ನೆಟಗಲ್ಲನವರ, ಜುಬೇದಾ ನಾಯಕ್, ಗೀತಾಂಜಲಿ,ಮಮತಾ ನಂದಿಹಳ್ಳಿ,ಕಾವ್ಯಾ ಕುಂಟನಹೊಸಳ್ಳಿ,ಅನುಷಾ ಹಿರೇಮಠ, ಅವರನ್ನು ಶ್ರೀ ಮಠದಿಂದ ಸನ್ಮಾನಿ,ಗೌರವಿಸಲಾಯಿತು.ಅಕ್ಕಮಹಾದೇವಿ ಕಬ್ಬಿಣಕಂತಿಮಠ ಹಾಗೂ ಅನಿತಾ ಉಪಲಿ ನಿರೂಪಿಸಿದರು.ಚಂಪಾ ಹುಣಸಿಕಟ್ಟಿ ಸ್ವಾಗತಿಸಿದರು. ಭಾಗ್ಯಾ ಎಂ.ಕೆ ವಂದಿಸಿದರು.