ಪರ್ತ್ 26: ಆಸ್ಟ್ರೇಲಿಯಾದ ಪರ್ತ್ನಲ್ಲಿ ಭಾರತ -ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಸೋಮವಾರ ಮುಕ್ತಾಯವಾಗಿದ್ದು, ಮಂಗಳವಾರ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ದಿಢೀರ್ ಆಗಿ ತವರಿಗೆ ಮರಳಿದ್ದಾರೆ.
ವೈಯುಕ್ತಿಕ ತುರ್ತು ಸನ್ನಿವೇಶದ ಹಿನ್ನಲೆಯಲ್ಲಿ ಕೋಚ್ ಗೌತಮ್ ಗಂಭೀರ್ ಭಾರತಕ್ಕೆ ವಾಪಸಾಗಿದ್ದು, ಕುಟುಂಬ ಸಮೇತರಾಗಿ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿದುಬಂದಿದೆ.
ನವೆಂಬರ್ 30 ರಿಂದ ಕ್ಯಾನ್ಬೆರಾದಲ್ಲಿ ಪ್ರಾರಂಭವಾಗುವ ಎರಡು ದಿನಗಳ ಪಿಂಕ್ ಬಾಲ್ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಗಂಭೀರ್ ತಮ್ಮ ವಾಪಸಾತಿಗೆ ಸಂಬಂಧಿಸಿದಂತೆ ಬಿಸಿಸಿಐನ ಅನುಮತಿ ಕೋರಿದ್ದಾರೆ ಎಂದು ಬಿಸಿಸಿಐನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅನಿವಾರ್ಯ ವೈಯಕ್ತಿಕ ತುರ್ತುಸ್ಥಿತಿಯಿಂದಾಗಿ ಗಂಭೀರ್ ಅವರು ಬಿಸಿಸಿಐ ಅನುಮತಿ ಮೇರೆಗೆ ಮಂಗಳವಾರ ಮುಂಜಾನೆ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ ವಾಪಸ್ ಆಗಿದ್ದಾರೆ.
ಅಡಿಲೇಡ್ನಲ್ಲಿ ಡಿಸೆಂಬರ್ 6ರಂದು ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.