ಅಥಣಿ 25: ವಿಶ್ವಗುರು ಬಸವಣ್ಣನವರಿಗಿಂತ ಮೊದಲೇ ಜಗದ್ಗುರು ರೇಣುಕಾಚಾರ್ಯರು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ರಚಿಸಿದ ಸಿದ್ದಾಂತ ಶಿಖಾಮಣಿ ಎಂಬ ಗ್ರಂಥದಲ್ಲಿ ಎಲ್ಲಾ ಧರ್ಮಗಳಿಗಿಂತ ಮಾನ ಮರ್ಮ ಅತ್ಯಂತ ಶ್ರೇಷ್ಠವಾದದ್ದು ಎಂಬುದನ್ನು ಪ್ರತಿಪಾದಿಸಿದ್ದಾರೆ ಎಂದು ಮಾಜಿ ಶಾಸಕ ಶಹಜಹಾನ ಡೊಂಗರಗಾಂವ ಹೇಳಿದರು.
ಅವರು ಇಲ್ಲಿನ ಶ್ರೀ ಮುರುಘೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠ ಹಾಗೂ ಮಾತೃಶ್ರೀ ಗೌರಮ್ಮ ಗಂಗಾಧರ ಪ್ರತಿಷ್ಠಾನ ಇವರ ಸಹಯೋಗದಲ್ಲಿ ಜಗದ್ಗುರು ಶ್ರೀ ರೇಣುಕಾಚಾರ್ಯ ಜಯಂತೋತ್ಸವ ಹಾಗೂ ಸಮಾಜ ಸೇವ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಾವೆಲ್ಲರೂ ಒಂದು ಜಾತಿ ಮತಕ್ಕೆ ಸೀಮಿತವಾಗದೆ, ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಮಾನವೀಯತೆಯ ಸಿದ್ಧಾಂತಗಳನ್ನು ಪಾಲಿಸೋಣ ಸಮಾನತೆಯಿಂದ ಬದುಕುವ ಮೂಲಕ ಮುಂದಿನ ಪೀಳಿಗೆಗೆ ಅವರ ತತ್ವ ಸಿದ್ಧಾಂತಗಳನ್ನು ತಿಳಿಸಿಕೊಡೋಣ ಎಂದರು.
ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಶಿಕ್ಷಕ ಡಿ ಎಸ್ ಕುಂಬಾರ ಮಾತನಾಡಿ ಮನುಕುಲದ ಕಲ್ಯಾಣಕ್ಕಾಗಿ ಅನೇಕ ಮಹಾತ್ಮರು ಶ್ರಮಿಸಿದ್ದಾರೆ. ಸಮಾನತೆಯ ಸಮಾಜಕ್ಕಾಗಿ ಶ್ರಮಿಸಿದ ಜಗದ್ಗುರು ರೇಣುಕಾಚಾರ್ಯರ ಜಯಂತಿಯೊಂದಿಗೆ ಸಮಾಜಮುಖಿ ಸೇವೆಯನ್ನ ಮಾಡುವ ಸಾಧಕರನ್ನು ಗುರುತಿಸಿ ಸಮಾಜ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿರುವ ಶ್ರೀ ಮುರಗೇಂದ್ರ ಶಿವಯೋಗಿ ವಿಶ್ವಸ್ಥ ವಿದ್ಯಾಪೀಠದ ಕಾರ್ಯಾ ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಧ್ಯಕ್ಷ ಮಲ್ಲಿಕಾರ್ಜುನ ಗಂಗಾಧರ ಮಾತನಾಡಿ, ಜಗದ್ಗುರು ರೇಣುಕಾಚಾರ್ಯರು ಸಮಾಜದ ಒಳಿತಿಗಾಗಿ ಅನೇಕ ಕಾರ್ಯಗಳನ್ನು ಮಾಡಿದ್ದಾರೆ. ಅವರ ತತ್ವದಾರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಕೂಡ ಸುಂದರವಾಗುತ್ತದೆ. ಬೆಳ್ಳಿ ಹಬ್ಬದ ಹೊಸ್ತಿಲಲ್ಲಿರುವ ನಮ್ಮ ಸಂಸ್ಥೆಯು ಗ್ರಾಮೀಣ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಶಿಕ್ಷಣ ನೀಡುತ್ತಿದೆ. ಶಿಕ್ಷಣ ಸಂಸ್ಥೆಯ ಮೂಲಕ ಅನೇಕ ಸಮಾಜಮುಖಿ ಸೇವೆಗಳ ಜೊತೆಗೆ ಸಮಾಜದ ಮತ್ತು ಮನುಕುಲದ ಒಳಿತಿಗಾಗಿ ಶ್ರಮಿಸುತ್ತಿರುವ ಸಾಧಕರನ್ನು ಗುರುತಿಸಿ ಸಮಾಜ ಸೇವಾರತ್ನ ಪ್ರಶಸ್ತಿ ನೀಡುವ ಮೂಲಕ ಅವರ ಕಾಯಕವನ್ನು ಪ್ರೋತ್ಸಾಹಿಸುತ್ತಿದ್ದೇವೆ. ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಸಾಧಕರಿಗೆ ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.
ಸಮಾರಂಭದ ಸಾನಿಧ್ಯವನ್ನು ಶಿವಪಂಚಾಕ್ಷರಿ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಈ ವೇಳೆ ರಾಯಬಾಗ ಮಾಜಿ ಶಾಸಕ ಬಿ ಸಿ ಸರಿಕರ, ಜಮಖಂಡಿಯ ಕೃಷಿ ತಜ್ಞ ಶ್ರೀಶೈಲ ಗುಂಡಗಿ, ಸಿಂಡಿಕೇಟ್ ಸದಸ್ಯ ಸೈದಪ್ಪ ಮಾದರ, ಪ್ರಗತಿಪರ ರೈತ ಚಂದ್ರಶೇಖರ ರೋಡಗಿ ಅವರಿಗೆ ಸಮಾಜ ಸೇವ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಧ್ಯಾಪಕ ಪ್ರಮೋದ, ಹಳಿಮನಿ, ಸುನಿತಾ ದೇವಮಾನೆ, ಎಂ ಎನ್ ವಾಲಿ, ಎಂ ಎಸ್ ಕೋಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.