ಸಂಭ್ರಮದ ಕಾಳಮ್ಮ ದೇವಿ ಮಹೋತ್ಸವ : ಶಸ್ತ್ರದೊಂದಿಗೆ ವಿಶಿಷ್ಟ ಹರಕೆ ತೀರಿಸಿದ ಭಕ್ತರು

ಸಂಭ್ರಮದ ಕಾಳಮ್ಮ ದೇವಿ ಮಹೋತ್ಸವ : ಶಸ್ತ್ರದೊಂದಿಗೆ ವಿಶಿಷ್ಟ ಹರಕೆ ತೀರಿಸಿದ ಭಕ್ತರು  Festive Kalamma Devi Mahotsav: Devotees fulfill a special vow with weapons

ಲೋಕದರ್ಶನ ವರದಿ

ಕಂಪ್ಲಿ 28:    ಬೆನ್ನಿಗೆ ಶಸ್ತ್ರ ಹಾಕಿಕೊಂಡು ಗುಂಡು, ಆಟೋ, ತೇರು ಎಳೆರು, ಅಂತರಿಕ್ಷಾ(ರಾಕೇಟ್) ಮೂಲಕ ಜೋತು ಬಿದ್ದಿರುವುದು. ಹೀಗೆ ನೋಡುಗರ ಮೈಜುಮ್ ಎನ್ನಿಸುವಂತಹ ಹರಕೆ ಕಂಡು ಬಂತು. ಸ್ಥಳೀಯ ಕೋಟೆ ಪ್ರದೇಶದ ಮೀನುಗಾರರ ಕಾಲೊನಿಯಲ್ಲಿ ಕಾಳಮ್ಮ ದೇವಿ ಮಹೋತ್ಸವ ಸಂಭ್ರಮದಿಂದ ಮಂಗಳವಾರ ಜರುಗಿತು. ಇಲ್ಲಿನ ಮೀನುಗಾರರ ಆರಾಧ್ಯ ದೇವತೆ ಕಾಳಮ್ಮ ದೇವಿ ಉತ್ಸವದ ನಿಮಿತ್ತ ಹರಕೆ ಹೊತ್ತ ಹಲವರು ದವಡೆಗೆ ಉದ್ದದ ಶಸ್ತ್ರ ಹಾಕಿಸಿಕೊಂಡು, ಬೆನ್ನಿಗೆ ಕಬ್ಬಿಣದ ಕೊಕ್ಕೆ ಸಿಕ್ಕಿಸಿಕೊಂಡು ಮೂವರು ಆಟೋ, ಒಬ್ಬರು ಗುಂಡು ಎಳೆದು, ಮೂವರು ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿ ಬಿದಿರಿನ ಮಂಟಪ ಮಾಡಿ, ಅದರಲ್ಲಿ ಬೆನ್ನಿಗೆ ಮತ್ತು ತೊಡೆಗೆ ಕೊಕ್ಕೆ ಸಿಕ್ಕಿಸಿಕೊಂಡು ಅದಕ್ಕೆ ಹಗ್ಗ ಕಟ್ಟಿ ಇಳಿ ಬಿದ್ದು ಹರಕೆ ತೀರಿಸಿದರು.

ಬಿರು ಬಿಸಿಲಿನಲ್ಲಿ ಹರಕೆ ಹೊತ್ತವರು ಹಂತಿ ಗುಂಡು ಸೇರಿದಂತೆ ಹಲವು ವಾಹನಗಳನ್ನು ದೂರದ ಗಾಳೆಮ್ಮ ದೇಗುಲದವರೆಗೆ ಎಳೆದುಕೊಂಡು ಹೋದರು. ಇಬ್ಬರು ಮಹಿಳೆಯರು ಶಸ್ತ್ರ ಹಾಕಿಕೊಂಡರು. ಪೊಂಬೆಗಾರರು ಭಕ್ತರಿಗೆ ಶಸ್ತ್ರ ಹಾಕಿಸಲು ಉಮ್ಮಸ್ಸು ತುಂಬಿದರು. ಇದನ್ನು ರಸ್ತೆ ಅಕ್ಕ ಪಕ್ಕದಲ್ಲಿ ಜನ ನಿಂತು ಆಶ್ಚರ್ಯದಿಂದ ವೀಕ್ಷಿಸಿದರು. ಉತ್ಸವದ ನಿಮಿತ್ತ ದೇಗುಲದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆದವು.  ಈ ವೇಳೆ ಮೀನುಗಾರರ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಎಂ.ರಾಜಶೇಖರ, ಗುರುಮೂರ್ತಿ(ಪೂಜಾರಿ), ಮಾರಿಯಪ್ಪ, ಕೃಷ್ಣ ಮೂರ್ತಿ, ಎ.ಗಣೇಶ, ಸಾಮ್ ದೊರೆ, ಎಸ್‌.ಆರ್‌.ಚಿನ್ನರಾಜು, ಪಿ.ಪಂಪಾಪತಿ, ಎಸ್‌.ನಾಗೇಶ ಹಾಗೂ ಇಲ್ಲಿನ ಮೀನುಗಾರರ ಸಂಘದ ಸದಸ್ಯರು ಹಾಗೂ ಮುಖಂಡರು ಉತ್ಸವದಲ್ಲಿ ಭಾಗವಹಿಸಿದ್ದರು.