ತಾಲೂಕಿನಾದ್ಯಂತ ತೀವ್ರಗೊಂಡ ರೈತರ ಹೋರಾಟ

ತಾಲೂಕಿನಾದ್ಯಂತ ತೀವ್ರಗೊಂಡ ರೈತರ ಹೋರಾಟ Farmers' struggle intensifies across the taluk


ಕಾಗವಾಡ 07: ಕಬ್ಬಿಗೆ ರೂ. 3500 ಬೆಲೆ ನೀಡಬೇಕೆಂಬ ರೈತರ ಹೋರಾಟದ ಕಾವು ದಿನೆದಿನೆ ಹೆಚ್ಚುತ್ತಿದ್ದು, ತಾಲೂಕಿನಾದ್ಯಂತ ರಸ್ತೆ ತಡೆ, ಪ್ರತಿಭಟನೆಗಳು ಮತ್ತು ಅಹೋರಾತ್ರಿ ಹೋರಾಟಗಳು ತೀವೃಗೊಂಡಿವೆ. ಶುಕ್ರವಾರ ದಿ. 07 ರಂದು ಕಾಗವಾಡ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿ, ರೈತ ಸಂಘಟನೆ, ಕನ್ನಡ ಪರ ಸಂಘಟನೆಗಳು ಮತ್ತು ರೈತರು ಅಹೋರಾತ್ರಿ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ. ಸರ್ಕಾರಗಳ ವಿರುದ್ಧ ಘೋಷಣೆ ಕೂಗುತ್ತಾ ರೈತರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದು, ಗಡಿ ತಾಲೂಕು ಸಂಪೂರ್ಣ ಸ್ಥಬ್ಧಗೊಂಡಿತ್ತು. 

ಪ್ರತಿಭಟನೆಕಾರರು ಪಟ್ಟಣದ ಚೆನ್ನಮ್ಮಾ ವೃತ್‌ದಲ್ಲಿ ರಸ್ತೆ ತಡೆ ನಡೆಸಿದ್ದರಿಂದ ಕರ್ನಾಟಕ- ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಕಡಿತಗೊಂಡಿತು. ಇದಲ್ಲದೇ ವಿಜಯಪೂರ, ಬೆಳಗಾವಿ ಹೋಗುವ ಮಾರ್ಗಗಳು ಸಂಪೂರ್ಣ ಬಂದ್ ಆಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಯಿತು. ಸಾರಿಗೆ ಸಂಸ್ಥೆಯ ಬಸ್‌ಗಳು ಅಥಣಿ, ಚಿಕ್ಕೋಡಿ ಬಸ್ ನಿಲ್ದಾಣಗಲ್ಲಿಯೇ ನಿಂತಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣಗೊಂಡಿತು. 

ಇತ್ತ ತಾಲೂಕಿನ ಶಿರಗುಪ್ಪಿ ಗ್ರಾಮದ ಬಸವೇಶ್ವರ ವೃತ್‌ದಲ್ಲಿ ಚಿಕ್ಕೋಡಿ-ಮಿರಜ್ ರಾಜ್ಯ ಹೆದ್ದಾರಿ ತಡೆದ ಶಿರಗುಪ್ಪಿ, ಜುಗೂಳ, ಮಂಗಾವತಿ, ಶಹಾಪೂರ, ಇಂಗಳಿ ಗ್ರಾಮದ ರೈತರು ಬೆಳಿಗ್ಗೆ 10 ರಿಂದ 12 ಗಂಟೆಯ ವರೆಗೆ ಪ್ರತಿಭಟನೆ ನಡೆಸಿ, ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ನಂತರ ತಹಶೀಲ್ದಾರ ರವೀಂದ್ರ ಹಾದಿಮನಿ ಅವರಿಗೆ ಮನವಿ ಸಲ್ಲಿಸಿ, ಬಳಿಕ ರಸ್ತೆ ತಡೆಯನ್ನು ಹಿಂಪಡೆಯಲಾಯಿತು. 

ಅದರಂತೆ ತಾಲೂಕಿನ ಶೇಡಬಾಳ ಪಟ್ಟಣದಲ್ಲಿ ಕಿರಾಣ ವ್ಯಾಪಾರಸ್ಥರ ಸಂಘ ಮತ್ತು ಕಬ್ಬು ಬೆಳೆಗಾರ ರೈತರು ಸೇರಿ ಸಂಪೂರ್ಣ ಪಟ್ಟಣವನ್ನು ಬಂದ್ ಮಾಡಿ, ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಕಬ್ಬಿಗೆ ರೂ. 3500 ಬೆಲೆ ಘೋಷಣೆಯಾಗುವ ವರೆಗೆ ಯಾರೂ ಕೂಡಾ ಕಬ್ಬು ಕಟಾವು ಮಾಡದೇ ರೈತರ ಹೋರಾಟವನ್ನು ಬೆಂಬಲಿಸೋಣವೆಂದರು. ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. 

ಈ ಸಮಯದಲ್ಲಿ ಸುರೇಶ ಚೌಗುಲೆ, ಶೀತಲ ಪಾಟೀಲ, ಶಿರಗುಪ್ಪಿ ಗ್ರಾ.ಪಂ. ಉಪಾಧ್ಯಕ್ಷ ರಾಮಗೌಡಾ ಪಾಟೀಲ, ಅರುಣ ಗಣೇಶವಾಡಿ, ಸುಭಾಷ ಪಾಟೀಲ, ಸದಾಶಿವ ಪೂಜಾರಿ, ಡಾ. ಅಮೋಲ ಸರಡೆ, ಶಿವಾನಂದ ಪಾಟೀಲ, ಅಭಯಕುಮಾರ ಅಕಿವಾಟೆ, ಶೇಡಬಾಳ ಕಿರಾಣಿ ವ್ಯಾಪಾರಿ ಸಂಘದ ಅಶೋಕ ವಿಭೂತೆ, ವಿನೋದ ಬರಗಾಲೆ, ರಮೇಶ ಚೌಗುಲೆ, ಕಾಕಾ ಪಾಟೀಲ ಸೇರಿದಂತೆ ಶಿರಗುಪ್ಪಿ, ಜುಗೂಳ, ಮಂಗಾವತಿ, ಶಹಾಪೂರ, ಇಂಗಳಿ, ಶೇಡಬಾಳ ಗ್ರಾಮದ ರೈತರು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಉಪಸ್ಥಿತರಿದ್ದರು.