ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಅಭಿನವ ರುದ್ರಮುನಿ ಶಿವಾಚಾರ್ಯ

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಅಭಿನವ ರುದ್ರಮುನಿ ಶಿವಾಚಾರ್ಯ Environmental protection is everyone's duty: Abhinava Rudramuni Shivacharya

ಲೋಕದರ್ಶನ ವರದಿ 

          ಸಿಂದಗಿ 05 : ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಹೇಳಿದರು. ಇಂದು ನಾವು ನೆಡುವ ಒಂದು ಗಿಡ ಮುಂದಿನ ಪೀಳಿಗೆಗೆ ಜೀವನಾಡಿಯಾಗಲಿದ್ದು, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಯಂಕಂಚಿ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಕರೆ ನೀಡಿದರು. 

        ತಾಲೂಕಿನ ಬ್ಯಾಲಿಹಾಳಹಿಬಂಕಲಗಿ ಸರ್ಕಾರಿ ಪ್ರಾಥಮಿಕ ಹಾಗೂ ಉನ್ನತೀಕರಿಸಿದ ಪ್ರೌಢಶಾಲೆ ಆವರಣದಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿಯ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು. 

        ದೈಹಿಕ ಶಿಕ್ಷಣಾಧಿಕಾರಿ ರಮೇಶ ಬಿರಾದಾರ ಮಾತನಾಡಿ, “ಮರಗಳನ್ನು ಬೆಳೆಸೋಣ, ನೀರನ್ನು ಉಳಿಸೋಣ, ಪ್ರಕೃತಿಯನ್ನು ಪ್ರೀತಿಸೋಣ; ಇದೇ ಪರಿಸರ ದಿನದ ನಿಜವಾದ ಸಂದೇಶ” ಎಂದು ಹೇಳಿದರು. 

        ಶಿಕ್ಷಣ ಸಂಯೋಜಕ ಡಿ.ಡಿ. ಮುಲ್ಲಾ ಮಾತನಾಡಿ, ಸ್ವಚ್ಛ ಮತ್ತು ಹಸಿರು ಪರಿಸರವೇ ಆರೋಗ್ಯಕರ ಸಮಾಜದ ಅಡಿಪಾಯವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಗಿಡಮರಗಳನ್ನು ಪ್ರೀತಿಯಿಂದ ಪೋಷಿಸಬೇಕು. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ಸಸಿಯನ್ನು ನೆಟ್ಟು ಸಂಭ್ರಮಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. 

         ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವಿ.ಎಸ್‌. ಪಾಟೀಲ ವಹಿಸಿದ್ದರು. ಸಿಂದಗಿ ವಿಧಾನಸಭಾ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯ ಪರಮಾನಂದ ಬಗಲಿ ಮಾತನಾಡಿದರು. 

        ವೇದಿಕೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ ಭಜಂತ್ರಿ, ರವಿ ಹೊಸಮನಿ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಶಂಕರ ಬಿರಾದಾರ ಹಾಗೂ ಸುಖದೇವ ಹಿರೇಕುರುಬರ ಉಪಸ್ಥಿತರಿದ್ದರು. ಶಿಕ್ಷಣ ಸುಧಾರಣಾ ಸಮಿತಿಯ ಸದಸ್ಯ ಹಾಗೂ ಶಿಕ್ಷಕ ಸಿದ್ಧಲಿಂಗ ಚೌಧರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. 

      ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ 50ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು. ಅಲ್ಲದೆ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ತಮ್ಮ ಮನೆಗಳ ಮುಂದೆ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸುವ ಸಂಕಲ್ಪ ಮಾಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹಮೀದ ಅವಟಿ, ರೋಹಿತ ತಳಕೇರಿ, ಶೈಲಜಾ ಪತ್ತಾರ, ಶಾಂತಿ ಎನ್‌., ಲತಾ ಪಾಟೀಲ, ಗೀರೀಶ ಬೇಗಂ, ಬೇಬಿ ಯಡ್ರಾಮಿ, ಗೀತಾ ಬಿರಾದಾರ, ಈರಮ್ಮ ಪಡಶೆಟ್ಟಿ, ಅನ್ನಕ್ಕ ಹಿರೇಮಠ, ಎಂ.ಎಸ್‌. ಗೋಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.