ಲೋಕದರ್ಶನ ವರದಿ
ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಶ್ರೀನಿವಾಸ ಮಾನೆ
ಹಾನಗಲ್ 25: ಬೇಸಿಗೆ ಅವಧಿಯಲ್ಲಿ ಉದ್ಭವಿಸಲಿರುವ ಕುಡಿಯುವ ಸಮಸ್ಯೆ ಎದುರಿಸಲು ಈಗಲೇ ಸಜ್ಜಾಗಿ,ಅಗತ್ಯ ಸಿದ್ಧತೆ ಮಾಡಿಕೊಳ್ಳಿ ಎಂದು ಶಾಸಕ ಶ್ರೀನಿವಾಸ ಮಾನೆ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯಾವ, ಯಾವ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎನ್ನುವುದನ್ನು ಈಗಲೇ ಪಟ್ಟಿ ಮಾಡಿಕೊಳ್ಳಿ. ತುರ್ತು ಸಂದರ್ಭದಲ್ಲಿ ಕೊಳವೆ ಬಾವಿ ಕೊರೆಯಿಸಲು ಗ್ರಾಪಂ ಖಾತೆಯಲ್ಲಿ ಕನಿಷ್ಟ ರೂ. 2 ಲಕ್ಷ ಮೀಸಲಿಡಿ. ಗ್ರಾಮಸಭೆ ನಡೆಸಿ, ನೀರಿನ ಮಿತ ಬಳಕೆಯ ಕುರಿತು ಜನಜಾಗೃತಿ ಮೂಡಿಸಿ. ಎಲ್ಲ ಸಮಸ್ಯೆ, ಸವಾಲು ಎದುರಿಸಿ ಸಮರ್ಕವಾಗಿ ನೀರು ಪೂರೈಕೆಗೆ ಗಮನ ಹರಿಸಿ. ಏನೇ ಸಮಸ್ಯೆ ಇದ್ದರೂ ತಕ್ಷಣ ಗಮನಕ್ಕೆ ತನ್ನಿ ಎಂದು ಪಿಡಿಒಗಳಿಗೆ ಶಾಸಕ ಮಾನೆ ಸೂಚಿಸಿದರು. ಹೇರೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಒಂದು ಭಾಗದ ಮನೆಗಳಿಗೆ ನೀರು ಪೂರೈಕೆಯಾಗುತ್ತಿಲ್ಲ. ತಳ್ಳುವ ಗಾಡಿಗಳ ಮೂಲಕ ಅಲ್ಲಿನ ನಿವಾಸಿಗಳು ನೀರು ತರುತ್ತಿದ್ದಾರೆ. ಸಮಸ್ಯೆಗೆ ಸ್ಪಂದಿಸಿ, ಸೂಕ್ತ ಕ್ರಮ ಕೈಗೊಳ್ಳಿ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಚಂದ್ರಶೇಖರ ನೆಗಳೂರ ಅವರಿಗೆ ಶ್ರೀನಿವಾಸ ಮಾನೆ ಸೂಚಿಸಿದರು.
ತಾಲೂಕಿನ 29 ಗ್ರಾಪಂ ವ್ಯಾಪ್ತಿಯ 52 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಹುದು ಎಂದು ಅಂದಾಜಿಸಲಾಗಿದೆ. ಅಗತ್ಯ ಬೀಳುವ ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ಕೊಳವೆ ಬಾವಿಗಳನ್ನು ಪಡೆಯಲು ನಿಶ್ಚಯಿಸಲಾಗಿದೆ ಎಂದು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇಇ ಚಂದ್ರಶೇಖರ ನೆಗಳೂರ ತಿಳಿಸಿದರು.
ಕುಡಿಯುವ ನೀರು ಪೂರೈಸುವ ಟ್ಯಾಂಕರ್ ಟೆಂಡರ್ ಪ್ರಕ್ರಿಯೆ ಈಗಲೇ ಪೂರ್ಣಗೊಳಿಸಿ. ಸಮಸ್ಯೆ ಉಲ್ಬಣಿಸಿದಾಗ ಪ್ರಕ್ರಿಯೆ ನಡೆಸುವುದು ಬೇಡ ಎಂದು ತಹಶೀಲ್ದಾರ್ ರೇಣುಕಾ ಎಸ್. ಅವರಿಗೆ ಸೂಚಿಸಿದರು. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.