ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ ಜಯಂತಿ ವಿಜೃಂಭಣೆ ಹಾಗೂ ಅರ್ಥಪೂರ್ಣ ಆಚರಣೆ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಡಾ.ಬಾಬು ಜಗಜೀವನರಾಂ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ ಜಯಂತಿ  ವಿಜೃಂಭಣೆ ಹಾಗೂ ಅರ್ಥಪೂರ್ಣ ಆಚರಣೆ-ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ Dr. Babu Jagjivan Ram and Dr. B.R. Ambedkar Jayanti celebrated with great enthusiasm and meaningful

ಲೋಕದರ್ಶನ ವರದಿ

       ಹಾವೇರಿ  27:  ಜಿಲ್ಲಾ ಮಟ್ಟದಲ್ಲಿ ಡಾ.ಬಾಬು ಜಗಜೀವನರಾಂರವರ 119ನೇ ಜನ್ಮದಿನಾಚರಣೆ ಹಾಗೂ ಸಂವಿಧಾನ ಶಿಲ್ಪಿ ಭಾರತರತ್ನ  ಡಾ.ಬಿ.ಆರ್‌.ಅಂಬೇಡ್ಕರವರ 135 ನೇ ಜನ್ಮ ದಿನಾಚರಣೆ  ವಿಜೃಂಭಣೆ ಹಾಗೂ  ಅರ್ಥಪೂರ್ಣ ಆಚರಣೆಗೆ  ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.  

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಶುಕ್ರವಾರ ಡಾ.ಬಾಬು ಜಗಜೀವನರಾಂರವರ ಹಾಗೂ ಸಂವಿಧಾನ ಶಿಲ್ಪಿ ಭಾರತರತ್ನ  ಡಾ.ಬಿ.ಆರ್‌.ಅಂಬೇಡ್ಕರವರ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಸಮಾಜ ಮುಖಂಡರೊಂದಿಗೆ ಚರ್ಚಿಸಿ  ಮಾತನಾಡಿದ ಅವರು, ಏಪ್ರಿಲ್ 5 ರಂದು ಡಾ.ಬಾಬು ಜಗಜೀವನರಾಂರವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಗುವುದು. ಏಪ್ರಿಲ್ 14 ರಂದು ಉಭಯ ನಾಯಕರ ಜಯಂತಿಯನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಣೆ  ಮಾಡಲಾಗುವುದು ಎಂದರು. 

ಏಪ್ರಿಲ್ 14 ರಂದು ಬೆಳಿಗ್ಗೆ 9 ಗಂಟೆಗೆ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತಿದಂದ ಸಾರೋಟಿನಲ್ಲಿ ಉಭಯ ನಾಯಕರ ಭಾವಚಿತ್ರ ಮೆರವಣೆಗೆ ಹೊರಟು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ  ಡಾ.ಬಿ.ಆರ್‌.ಅಂಬೇಡ್ಕರ ಭವನ ಸೇರಲಿದೆ. ಬೆಳಿಗ್ಗೆ 11 ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಮಾಜದ ಮುಖಂಡರು ಯಶಸ್ವಿ ಕಾರ್ಯಕ್ರಮ ಆಯೋಜನೆಗೆ ಸಹಕಾರ ನೀಡಬೇಕು ಎಂದರು. 

ಮೇರವಣಿಗೆಗೆ ಕಲಾ ತಂಡ, ವೇದಿಕೆ ಅಲಂಕಾರ, ಸ್ವಚ್ಛತೆ, ಆಸನ, ಆಮಂತ್ರಣ ಪತ್ರಿಕೆ, ಉಪನ್ಯಾಸಕ ಆಯ್ಕೆ ಸೇರಿದಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು  ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.  

ಕಾರ್ಯಕ್ರಮದಲ್ಲಿ ಎಸ್‌.ಎಲ್‌.ಎಲ್‌.ಸಿ., ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ, ಕ್ರೀಡೆ  ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ  ಸಾಧಕರನ್ನು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.  

ಸಭೆಯಲ್ಲಿ  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ಜಿಲ್ಲಾ ಪಂಚಾಯತ್  ಉಪ ಕಾರ್ಯದರ್ಶಿ ಡಾ.ಪುನಿತ್, ಸಮಾಜ ಕಲ್ಯಾಣ ಇಲಾಖೆ ಜಂಟಿನಿರ್ದೇಶಕ ಪ್ರಶಾಂತ ವರಗಪ್ಪನವರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.